ಬೀದರ್: ಶತಮಾನೋತ್ಸವದ ಹೊಸ್ತಿಲಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವತಿಯಿಂದ ನೀಡಲಾಗುವ 2024ನೇ ಸಾಲಿನ ವಿಶೇಷ ಪ್ರಶಸ್ತಿಯನ್ನು ಮಹಾರಾಷ್ಟ್ರದ ಹಿರಿಯ ಪತ್ರಕರ್ತ ಶ್ರೀಧರ್ ಉಚ್ಚಿಲ್ ಅವರಿಗೆ ಪ್ರದಾನ ಮಾಡಲಾಯಿತು.
ನಗರದ ಜನವಾಡ ರಸ್ತೆಯಲ್ಲಿರುವ ಝೀರಾ ಕನ್ವೆನ್ಶನ್ ಸಭಾಗೃಹದ ‘ಲೋಕನಾಯಕ ಡಾ. ಭೀಮಣ್ಣ ಖಾಂಡ್ರೆ ವೇದಿಕೆ’ಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂಘದ 40ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಈ ಗೌರವ ಸಮರ್ಪಿಸಲಾಯಿತು. ‘ಕರ್ನಾಟಕ ಮಲ್ಲ’ ದಿನಪತ್ರಿಕೆಯ ಹಿರಿಯ ಪತ್ರಕರ್ತ ಹಾಗೂ ಕೆಯುಡಬ್ಲ್ಯೂಜೆ ಮಹಾರಾಷ್ಟ್ರ ಘಟಕದ ಸದಸ್ಯರಾಗಿರುವ ಶ್ರೀಧರ್ ಉಚ್ಚಿಲ್ ಅವರ ಪತ್ರಿಕೋದ್ಯಮದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ವೇದಿಕೆಯಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶಿಂಪುರ್, ಶಾಸಕರುಗಳಾದ ಡಾ. ಶೈಲೇಂದ್ರ ಬೆಲ್ಲಾಳೆ, ಡಾ. ಸಿದ್ದು ಪಾಟೀಲ್, ಮಾರುತಿರಾವ್ ಮೂಳೆ, ಮಾಹಿತಿ ಹಕ್ಕು ಆಯೋಗದ ಆಯುಕ್ತ ಬಿ. ವೆಂಕಟ ಸಿಂಗ್ ಹಾಗೂ ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ದೇವಪ್ಪ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ಮಹಾರಾಷ್ಟ್ರ ಘಟಕದ ಸ್ಥಾಪಕ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಪ್ರಸ್ತುತ ಅಧ್ಯಕ್ಷ ಡಾ. ಶಿವ ಮೂಡಿಗೆರೆ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಹಾಗೂ ಉಡುಪಿ ಜಿಲ್ಲಾ ರಾಜ್ಯ ಪ್ರತಿನಿಧಿ ಕಿರಣ್ ಮಂಜನಬೈಲು (ಅಜಿತ್ ಮೋಹನ್) ಅವರು ಪ್ರಶಸ್ತಿ ಪುರಸ್ಕೃತ ಶ್ರೀಧರ್ ಉಚ್ಚಿಲ್ ಅವರಿಗೆ ಶುಭ ಕೋರಿದರು.
ಡಿ.ವಿ. ಗುಂಡಪ್ಪನವರಿಂದ ಸ್ಥಾಪಿತಗೊಂಡು, ಇಂದು ಪತ್ರಕರ್ತರ ಹಿತರಕ್ಷಣೆಗಾಗಿ ಶ್ರಮಿಸುತ್ತಿರುವ ಸಂಘದ ಈ 40ನೇ ಸಮ್ಮೇಳನಕ್ಕೆ ನಾಡಿನ ವಿವಿಧೆಡೆಯಿಂದ ಹಾಗೂ ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳಿಂದಲೂ ನೂರಾರು ಪತ್ರಕರ್ತರು ಸಾಕ್ಷಿಯಾದರು. ಸೂಫಿ ಸಂತರ ಹಾಗೂ ಬಸವಣ್ಣನವರ ಶರಣ ಭೂಮಿಯಲ್ಲಿ ನಡೆದ ಈ ಸಮಾವೇಶವು ಪತ್ರಿಕಾ ರಂಗದ ಮಹತ್ವದ ಚರ್ಚೆಗಳಿಗೆ ವೇದಿಕೆಯಾಯಿತು.




