.
.

ಕಲ್ಯಾಣ್: ‘ದೇವಸ್ಥಾನದಲ್ಲಿ ಸ್ಥಳದ ಕೊರತೆ ಇರಬಹುದು, ಆದರೆ ಇಲ್ಲಿನ ಭಕ್ತರ ಭಕ್ತಿಯಲ್ಲಿ ಯಾವುದೇ ಕೊರತೆಯಿಲ್ಲ. ನಾವು ಕಣ್ಣು ಮುಚ್ಚಿ ಭಕ್ತಿಯಿಂದ ಸ್ಮರಿಸಿದರೆ ದೇವರು ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ’ ಎಂದು ಬಂಟರ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್.ಕೆ. ಶೆಟ್ಟಿ ತಿಳಿಸಿದರು.
ಬಿರ್ಲಾಗೇಟ್ ಶಹಾಡ್ನ ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಸಂಚಾಲಕತ್ವದ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದ 64ನೇ ವಾರ್ಷಿಕ ಮಹಾಪೂಜೆ ಹಾಗೂ 11ನೇ ಪ್ರತಿಷ್ಠಾ ವರ್ಧಂತಿ ಉತ್ಸವದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
‘64 ವರ್ಷಗಳ ಹಿಂದೆ ನಮ್ಮ ಹಿರಿಯರು ಇಲ್ಲಿ ಭಜನಾ ಮಂದಿರ ಸ್ಥಾಪಿಸಿ, ಭಕ್ತಿಯ ತಾಣವನ್ನು ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ. ಇಲ್ಲಿನ ಪೂಜೆ ನೋಡಿದಾಗ ತಾಯ್ನಾಡಿನ ದೇವಸ್ಥಾನದಲ್ಲೇ ದರ್ಶನ ಪಡೆದ ಭಾಸವಾಗುತ್ತದೆ’ ಎಂದರು.








ಒಗ್ಗಟ್ಟಿನ ಶ್ರಮವೇ ಯಶಸ್ಸಿಗೆ ಕಾರಣ: ಬಂಟರ ಸಂಘದ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿ ಸಂಚಾಲಕ ರವೀಂದ್ರ ವೈ. ಶೆಟ್ಟಿ ಮಾತನಾಡಿ, ‘ಕಾರ್ಯಕಾರಿ ಸಮಿತಿಯ ಶ್ರದ್ಧೆ ಹಾಗೂ ದಾನಿಗಳ ಸಹಕಾರದಿಂದ ದೇವಸ್ಥಾನವು ಅಭಿವೃದ್ಧಿ ಪಥದಲ್ಲಿದೆ. ಮುಂದಿನ ವರ್ಷದ ಬ್ರಹ್ಮಕಲಶೋತ್ಸವವನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಯಶಸ್ವಿಗೊಳಿಸೋಣ’ ಎಂದು ಕರೆ ನೀಡಿದರು. ಕಲ್ಯಾಣ್ ಬಿಲ್ಲವರ ಅಸೋಸಿಯೇಷನ್ ಕಾರ್ಯಾಧ್ಯಕ್ಷ ನಂದೀಶ್ ಪೂಜಾರಿ ಮಾತನಾಡಿ, ಜಾತಿ-ಮತ ಮರೆತ ಭಕ್ತರ ಒಗ್ಗಟ್ಟಿನಿಂದಾಗಿ ಈ ಕ್ಷೇತ್ರವು ದಕ್ಷಿಣ ಕನ್ನಡದ ದೇವಸ್ಥಾನಗಳಂತೆ ಕಳೆಗಟ್ಟಿದೆ ಎಂದರು.
ದೇವಸ್ಥಾನದ ಅಧ್ಯಕ್ಷ ರಾಜೇಶ್ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸ್ಥಳದ ಅಭಾವ ನೀಗಿಸಲು ದೇವಸ್ಥಾನದ ಹಿಂಬದಿಯ ಜಾಗ ಖರೀದಿಸಲು ನಿರ್ಧರಿಸಲಾಗಿದೆ. ಧಾರ್ಮಿಕ ಕಾರ್ಯದೊಂದಿಗೆ ಮಕ್ಕಳಿಗೆ ವಿದ್ಯಾಭ್ಯಾಸಕ್ಕೂ ಸಂಸ್ಥೆಯು ಪ್ರೋತ್ಸಾಹ ನೀಡುತ್ತಿದೆ’ ಎಂದರು. ಭಿವಂಡಿ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಭಾಸ್ಕರ್ ಟಿ. ಶೆಟ್ಟಿ ದೊಂಡೆರಂಗಡಿ ಅವರು ಕ್ಷೇತ್ರದ ಅಭಿವೃದ್ಧಿಯನ್ನು ಶ್ಲಾಘಿಸಿದರು. ಶ್ರೀಕಾಂತ್ ತಂತ್ರಿಗಳು ಆಶೀರ್ವಚನ ನೀಡಿದರು.














ಗಣ್ಯರ ಸನ್ಮಾನ: ಇದೇ ಸಂದರ್ಭದಲ್ಲಿ ಡಾ. ಆರ್.ಕೆ. ಶೆಟ್ಟಿ, ಉಮೇಶ್ ಬಂಗೇರಾ ದಂಪತಿ, ಲತಾ ಪೂಜಾರಿ, ಅನ್ನಸಂತರ್ಪಣೆ ಸೇವಾದಾರರಾದ ಸ್ವಾತಿ ಮತ್ತು ವಿಶಾಲ್ ಶಾಂತ, ಸಮೀಕ್ಷಾ ಸಿ. ಶೆಟ್ಟಿ, ಶೇಖರ್ ಶೆಟ್ಟಿ ದಂಪತಿ, ಚಂದ್ರಕಾಂತ ಶೆಟ್ಟಿ ದಂಪತಿ, ಅನಿಲ್ ಶೆಟ್ಟಿ ಐರೋಲಿ ದಂಪತಿ, ದಿವ್ಯಾ ಮತ್ತು ಅಜೇಯ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಾಧನೆಗೈದ ವಿದ್ಯಾರ್ಥಿಗಳಾದ ಕುಶಿ ಶೆಟ್ಟಿ, ಹೇತ್ವಿ ಪಾಚ್ಪುತೆ ಹಾಗೂ ಹಿರಿಯ ಸದಸ್ಯರನ್ನು ಸತ್ಕರಿಸಲಾಯಿತು.
ಸಂಜೆ ನಡೆದ ಸಮಾರಂಭದಲ್ಲಿ ಉಲ್ಲಾಸ್ ನಗರದ ಮೇಯರ್ ಅಶ್ವಿನಿ ನಿಕಮ್, ನಗರಸೇವಕ ದಿಲಿಪ್ ಗಾಯಕ್ವಾಡ್ ಉಪಸ್ಥಿತರಿದ್ದರು. ಯಕ್ಷಗಾನ ಕಲಾವಿದರಾದ ಪೊಲ್ಯ ಲಕ್ಷ್ಮಿನಾರಾಯಣ ಶೆಟ್ಟಿ, ರವೀಂದ್ರ ಉಚ್ಚಿಲ, ಭಾಗವತ ಡಾ. ಪ್ರಖ್ಯಾತ್ ಶೆಟ್ಟಿ ಹಾಗೂ ಯಕ್ಷಗಾನ ಸೇವಾಕರ್ತರಾದ ನಿಖಿಲ್ ಭಂಡಾರಿ ಮತ್ತು ದಿವ್ಯಾ ಭಂಡಾರಿ ಅವರನ್ನು ಗೌರವಿಸಲಾಯಿತು.
ಧಾರ್ಮಿಕ ಕಾರ್ಯಕ್ರಮಗಳು: ಏಪ್ರಿಲ್ 12ರಿಂದ ಡೊಂಬಿವಲಿಯ ಶ್ರೀ ಶಂಕರನಾರಾಯಣ ತಂತ್ರಿಗಳ ನೇತೃತ್ವದಲ್ಲಿ ವಾಸ್ತು ಪೂಜೆ, ವಾಸ್ತು ಬಲಿ, ಪಂಚಾಮೃತ ಅಭಿಷೇಕ, ನವಗ್ರಹ ಶಾಂತಿ, ಚಂಡಿಕಾಯಾಗ, ರಥೋತ್ಸವ ಹಾಗೂ ರಂಗಪೂಜೆಗಳು ಜರುಗಿದವು. ಸಂಜೆ ನಡೆದ ‘ದಕ್ಷಾಧ್ವರ’ ತುಳು ಯಕ್ಷಗಾನ ಬಯಲಾಟ ಭಕ್ತರ ಮನಗೆದ್ದಿತು.




ವೇದಿಕೆಯಲ್ಲಿ ಚಂದ್ರಕಾಂತ ಶೆಟ್ಟಿ, ಸದಾನಂದ ಶೆಟ್ಟಿ, ಸುನೀಲ್ ಸಾಲ್ಯಾನ್, ಜಗದೀಶ್ ರಾಮ ಬಂಜನ್, ಕರುಣಾಕರ ಶೆಟ್ಟಿ, ಯುವರಾಜ ಪೂಜಾರಿ, ಸಂತೋಷ್ ಶೆಟ್ಟಿ, ಪ್ರೇಮ್ ಕುಮಾರ್ ರೈ, ಸದಾನಂದ ಸಾಲ್ಯಾನ್, ವಸಂತ ಶೆಟ್ಟಿ, ಗಣೇಶ್ ಶೆಟ್ಟಿ ನಂದ್ರೊಳ್ಳಿ, ದೀಪಕ್ ಬಂಗೇರಾ, ಜ್ಯೋತಿ ಶೆಟ್ಟಿ ಉಪಸ್ಥಿತರಿದ್ದರು.
ರಾಜೇಶ್ ಶೆಟ್ಟಿ ಸ್ವಾಗತಿಸಿದರು. ಉಮಾ ಸಾಲ್ಯಾನ್, ಜಗದೀಶ್ ಶೆಟ್ಟಿ, ಅನಿತಾ ಅಮೀನ್, ವೇದ ಶೆಟ್ಟಿಗಾರ್ ಸನ್ಮಾನ ಪತ್ರ ವಾಚಿಸಿದರು. ನಿಲೇಶ್ ಶೆಟ್ಟಿ ಹಾಗೂ ಗೌರವ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಬೆಳಂಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





