ಖ್ಯಾತ ರಂಗಕರ್ಮಿ, ಹಿರಿಯ ಸಾಹಿತಿ, ಬರಹಗಾರ ಹಾಗೂ ಹಿರಿಯ ಪತ್ರಕರ್ತರಾಗಿದ್ದ ಸಸಿಹಿತ್ಲುವಿನ ಪರಮಾನಂದ ವಿ. ಸಾಲ್ಯಾನ್ (65) ಅವರು ಸೋಮವಾರ (ಜುಲೈ 13) ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಸಸಿಹಿತ್ಲುವಿನ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಸಾಲ್ಯಾನ್ ಅವರು, ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು. ರಂಗಭೂಮಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದ ಅವರು ಹಲವು ನಾಟಕಗಳನ್ನು ನಿರ್ದೇಶಿಸಿದ್ದರು. ಇದರೊಂದಿಗೆ ಸಸಿಹಿತ್ಲುವಿನ ಶ್ರೀ ಭಗವತಿ ದೇವಸ್ಥಾನದ ಸಮಿತಿಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ರಂಗಸುದರ್ಶನ ಸಸಿಹಿತ್ಲು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಪರಮಾನಂದ ವಿ. ಸಾಲ್ಯಾನ್ ಅವರು, ‘ಅಜೇಯ’ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ಪತ್ರಿಕೋದ್ಯಮದ ವೃತ್ತಿಜೀವನದಲ್ಲಿ ಮುಂಗಾರು, ಹೊಸ ದಿಗಂತ ಸೇರಿದಂತೆ ಹಲವು ಪ್ರಮುಖ ದಿನಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮುಂಬೈನ ವಿವಿಧ ಸಂಘ-ಸಂಸ್ಥೆಗಳೊಂದಿಗೂ ಅವರು ನಿಕಟ ಒಡನಾಟ ಹೊಂದಿದ್ದರು.
ಇವರಿಗೆ 2026, ಜೂನ್ನಲ್ಲಿ ಮಂಗಳೂರಿನಲ್ಲಿ ಪ್ರತಿಷ್ಠಿತ ‘ರಂಗಭಾಸ್ಕರ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು
ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಸಿಹಿತ್ಲುವಿನಲ್ಲಿರುವ ಅವರ ನಿವಾಸದಲ್ಲಿ ಇಂದು (ಜುಲೈ 13) ಸಂಜೆ 4 ಗಂಟೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಾಲ್ಯಾನ್ ಅವರ ನಿಧನಕ್ಕೆ ಸಾಂಸ್ಕೃತಿಕ, ಧಾರ್ಮಿಕ ಮತ್ತು ಪತ್ರಿಕೋದ್ಯಮ ಕ್ಷೇತ್ರದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.





