
‘ಕಡಲಸೃಷ್ಟಿ’ ಕನ್ನಡ ಪಾಕ್ಷಿಕ ಪತ್ರಿಕೆಯ ಸಂಪಾದಕ ಬಿ. ಸಂಜೀವ ಕೆ.ಬಿ. ಅವರ ಬರಹಗಳ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಬೈನ ಖಾರ್ ಪೂರ್ವದ ಹೆಸರಾಂತ ಸಮಾಜ ಸೇವಕ ಶಂಕರ್ ಸುವರ್ಣ , ತೀಯಾ ವೆಲ್ಫೇರ್ ನ ಸ್ಥಾಪಕ ಅಧ್ಯಕ್ಷರಾದ ಗೋವಿಂದ ಮಂಜೇಶ್ವರ್ ಮತ್ತು ಪತ್ರಕರ್ತೆ ಡಾ. ಮಾಲತಿ ಶೆಟ್ಟಿ ಉಪಸ್ಥಿತರಿದ್ದರು.
ಗೋವಿಂದ ಮಂಜೇಶ್ವರ ಅವರು “ತೀಯಾ ಕುಲತಿಲಕ, ಕುಲರತ್ನ ರೋಹಿದಾಸ್ ಎಸ್. ಬಂಗೇರ” ಎಂಬ ಪುಸ್ತಕವನ್ನು ಮತ್ತು “ಶ್ರೀ ಗುರು ಚರಣಾಮೃತ” ಕೃತಿಯನ್ನು ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಶಂಕರ್ ಪೂಜಾರಿ ಅವರು” ರೋಹಿದಾಸ್ ಬಂಗೇರ ಅವರು ಶೂನ್ಯದಿಂದ ಮುಂಬೈನಲ್ಲಿ ಒಬ್ಬ ಉದ್ಯಮಿಯಾಗಿ ಮತ್ತು ದಾನಿಯಾಗಿ ಬೆಳೆದರು” ಎಂದರಲ್ಲದೆ , “ಶ್ರೀ ಗುರು ಚರಣಾಮೃತ” ಪುಸ್ತಕದಲ್ಲಿ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು ಅವರ ಬಗ್ಗೆ ಸಂಗ್ರಹಯೋಗ್ಯ ಬರಹಗಳು ಒಳಗೊಂಡಿವೆ ಎಂದು ಹೇಳಿದರು.
ಗೋವಿಂದ ಮಂಜೇಶ್ವರ್ ಅವರು ಮಾತನಾಡಿ, ರೋಹಿದಾಸ್ ಬಂಗೇರ ಅವರು ಸಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ದುಡಿದು ಉದ್ಯಮದಲ್ಲೂ ಯಶಸ್ಸು ಗಳಿಸಿದ್ದಾರೆ ಎಂದು ತಿಳಿಸಿದರು.
ಪತ್ರಕರ್ತೆ ಡಾ. ಮಾಲತಿ ಶೆಟ್ಟಿ ಅವರು ಮಾತನಾಡಿ, ಇಂದು ವಿಭಿನ್ನ ಪುಸ್ತಕಗಳು ಪ್ರಕಟಗೊಂಡರೂ, ಪುಸ್ತಕಗಳು ಮಾರಾಟವಾಗದೆ ಹಾಗೆ ಇವೆ , ಜನರು ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದು ನುಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಪಾದಕ ಬಿ. ಸಂಜೀವ ಕೆ.ಬಿ. ಅವರು ತಮ್ಮ ‘ಕಡಲಸೃಷ್ಟಿ’ ಪಾಕ್ಷಿಕ ಪತ್ರಿಕೆಯ ಬಗ್ಗೆ ಮಾಹಿತಿ ನೀಡಿದರು. ಜಯಂತಿ ಸುವರ್ಣ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.





