
ಊರಿನ ಆಹಾರ ಪದಾರ್ಥಗಳಲ್ಲಿ ಸಾತ್ವಿಕ ಶಕ್ತಿಯಿದೆ; ಅದರಿಂದಲೇ ಮಹಾನ್ ಸಾಧಕರಾಗಿ ಬೆಳೆದಿದ್ದಾರೆ: ಹರಿದಾಸ ಭಟ್ ಪೆರ್ಣಂಕಿಲ
ಚಿತ್ರ ವರದಿ: ದಿನೇಶ್ ಕುಲಾಲ್
ಮುಂಬಯಿ: ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯಲ್ಲಿ, ಪ್ರಭು ಶ್ರೀ ರಾಮಚಂದ್ರ ದೇವರ ಅವತಾರದ ಆರಂಭದಿಂದ ಶ್ರೀ ದೇವರ ನಿರ್ಯಾಣದವರೆಗಿನ ಸಂಪೂರ್ಣ ಶ್ರೀ ರಾಮ ಚರಿತ್ರೆ ‘ಶ್ರೀ ರಾಮ ಕಥಾ ಹೃದಯಂ ಪುಣ್ಯಪ್ರದ’ 24 ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದ 11ನೇ ಪ್ರಸ್ತುತಿ ‘ಚೂಡಾಮಣಿ ಲಂಕಾದಹನ’ ಜುಲೈ 11ರಂದು ವಿದ್ಯಾವಿಹಾರ್ ಪಶ್ಚಿಮದ ಗಾಂವೇವಿಯ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ತಾಳಮದ್ದಳೆಯ ಮಧ್ಯಂತರದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ ಭಟ್ ಪೆರ್ಣಂಕಿಲ ಅವರು ಹಿರಿಯ ಸಂಘಟಕ, ಅರ್ಥದಾರಿ ಹಾಗೂ ಯಕ್ಷಗಾನ ಕಲಾವಿದ ಕೆ. ಕೆ. ಶೆಟ್ಟಿ, ಕಲಾವಿದರುಗಳಾದ ಶ್ಯಾಮ ಶೆಟ್ಟಿ ದಂಪತಿ, ನಾರಾಯಣ ಬಂಗೇರ ದಂಪತಿ, ಹಿರಿಯ ಭಾಗವತ ಮುದ್ದು ಅಂಚನ್ ದಂಪತಿ, ವಾಸುದೇವ ಶೆಣೈ ದಂಪತಿ, ರಮೇಶ ಭಿರ್ತಿ ದಂಪತಿ, ಹರೀಶ ಶೆಟ್ಟಿಗಾರ್ ದಂಪತಿ ಹಾಗೂ ಸುರೇಶ್ ಶೆಟ್ಟಿ ಕಣಂಜಾರು ಅವರನ್ನು ಸನ್ಮಾನಿಸಿದರು.

ಬಳಿಕ ಮಾತನಾಡಿದ ಹರಿದಾಸ್ ಭಟ್, “ನಮ್ಮ ಊರಿನ ಆಹಾರ ಪದಾರ್ಥಗಳಲ್ಲಿ ಎಂಥ ಸಾತ್ವಿಕ ಶಕ್ತಿ ಇದೆ ಎಂದರೆ ಅದನ್ನು ಊಹಿಸಲಾಗದು. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದ ಎಷ್ಟೋ ಜನ ಇಂದು ಮಹಾನ್ ಸಾಧಕರಾಗಿ ಬೆಳೆದಿದ್ದಾರೆ. ಅದರಲ್ಲೂ ಯಕ್ಷಗಾನ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಅಲ್ಲದೆ ಬಹಳಷ್ಟು ಜನವಿಂದು ಆರೋಗ್ಯವಂತರಾಗಿ ಉಳಿದಿದ್ದಾರೆ ಎಂದರೆ ಅದಕ್ಕೆ ನಮ್ಮ ಊರಿನ ಆಹಾರಗಳೇ ಕಾರಣ. ರಾಮ ನಾಮಕ್ಕೆ ಎಷ್ಟೊಂದು ಶಕ್ತಿ ಇದೆ ಎಂದರೆ, ಒಂದೆರಡು ಕಲಾವಿದರನ್ನು ಸನ್ಮಾನಿಸಬೇಕಿದ್ದ ಸಂಘಟಕರು ಇದೀಗ ನಗರದ ಸುಮಾರು 140 ಕಲಾವಿದರನ್ನು ಸನ್ಮಾನಿಸುವ ಮಹತ್ಕಾರ್ಯಕ್ಕೆ ಸಿದ್ಧತೆ ನಡೆಸಿದ್ದಾರೆ. ಇದು ಕಲಾವಿದರಿಗೆ ಶ್ರೀರಾಮನ ಪ್ರಸಾದ ರೂಪದ ಸನ್ಮಾನವಾಗಿದೆ” ಎಂದು ನುಡಿದರು.

ಜರಿಮೇರಿಯ ಶ್ರೀ ಉಮಾ ಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಉಡುಪ ಮಾತನಾಡಿ, “ನಾನು ಬಹಳಷ್ಟು ಸನ್ಮಾನ ಕಾರ್ಯಕ್ರಮಗಳನ್ನು ನೋಡಿದ್ದೇನೆ, ಆದರೆ ಯಕ್ಷಗಾನದ ಎಲ್ಲಾ ಕಲಾವಿದರನ್ನು ಒಟ್ಟುಗೂಡಿಸಿ ಸನ್ಮಾನಿಸುವ ಇಂತಹ ಕಾರ್ಯ ನಿಜಕ್ಕೂ ಪ್ರಥಮವಾಗಿದೆ. ಈ ನಗರದ ಹಿರಿಯ-ಕಿರಿಯ ಯಕ್ಷಗಾನ ಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರ ಉಮ್ಮಸ್ಸು ಮತ್ತು ಸಾಧನೆಗೆ ಪ್ರೋತ್ಹಾಹ ಸಿಕ್ಕಂತಾಗಿದೆ. ಹಿರಿಯ ಕಲಾವಿದರಿಗೆ ಮಾಡುವ ಸನ್ಮಾನ ಅವರಿಗೆ ಸಂತೃಪ್ತಿ ನೀಡಿದರೆ, ಕಿರಿಯ ಕಲಾವಿದರಿಗೆ ಇನ್ನಷ್ಟು ಸೇವೆ ಮಾಡಲು ಸ್ಪೂರ್ತಿಯಾಗುತ್ತದೆ. ಕಲಾವಿದರೆಲ್ಲರೂ ನಿಜ ಜೀವನದಲ್ಲೂ ಕೂಡ ನಿರ್ಮಲ ಮನಸ್ಸಿನವರಾಗಿದ್ದಾರೆ” ಎಂದರು.

ಹಿರಿಯ ಭಾಗವತರಾದ ಪೊಲ್ಯ ಲಕ್ಷ್ಮಿನಾರಾಯಣ ಶೆಟ್ಟಿ ಮಾತನಾಡಿ, “ಊರಿನಲ್ಲಿ ಯಕ್ಷಗಾನ ಕಲಾವಿದರಿಗಾಗಿ ವಿಶೇಷವಾಗಿ ಮೂರು ಸಂಸ್ಥೆಗಳು ಸೇವೆ ಮಾಡುತ್ತಿವೆ. ಇದೀಗ ಮುಂಬೈ ನಗರದಲ್ಲಿ ಯುವ ಸಂಘಟಕರಾದ ಸುರೇಶ್ ಶೆಟ್ಟಿ ಮತ್ತು ವಾಸುದೇವ ಶೆಟ್ಟಿ ಅವರ ನೇತೃತ್ವದಲ್ಲಿ ಶ್ರೀ ರಾಮನ ಸೇವೆಯೊಂದಿಗೆ ಕಲಾವಿದರನ್ನು ಪ್ರೋತ್ಸಾಹಿಸುವ ಹಾಗೂ ನಗರದ ಎಲ್ಲಾ ಯಕ್ಷಗಾನ ಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ. ಹರಿದಾಸ್ ಭಟ್ ಅವರ ಬೆಂಬಲ ಮತ್ತು ಪ್ರೋತ್ಹಾಹದಿಂದ ಈ ಉತ್ತಮ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ” ಎಂದು ಹಾರೈಸಿದರು.

ವೇದಿಕೆಯಲ್ಲಿ ಮಂದಿರದ ಆಡಳಿತ ಮೊತ್ತೇಸರ ಹರಿದಾಸ ಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿದ ಕಲಾವಿದರು ಕೃತಜ್ಞತೆ ಸಲ್ಲಿಸುತ್ತಾ, “ಈ ಸನ್ಮಾನ ನಮಗೆ ಮತ್ತಷ್ಟು ಸ್ಪೂರ್ತಿ ತಂದಿದೆ, ಇದನ್ನು ಶ್ರೀ ರಾಮನ ಪ್ರಸಾದವೆಂದು ಸ್ವೀಕರಿಸಿದ್ದೇವೆ” ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಲಾ ಸಂಘಟಕ ವಾಸು ಶೆಟ್ಟಿ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು, ಸುರೇಶ್ ಶೆಟ್ಟಿ ನಂದೊಳ್ಳಿ ವಂದಿಸಿದರು.

ಮನರಂಜಿಸಿದ ತಾಳಮದ್ದಳೆ:
ತದನಂತರ ‘ಚೂಡಾಮಣಿ – ಲಂಕಾದಹನ’ ತಾಳಮದ್ದಳೆ ಪ್ರದರ್ಶನಗೊಂಡಿತು.
ಹಿಮ್ಮೇಳದಲ್ಲಿ: ಭಾಗವತರಾಗಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಜಯಲಕ್ಷ್ಮಿ ದೇವಾಡಿಗ, ಮೋಹನದಾಸ ರೈ; ಮದ್ದಳೆಯಲ್ಲಿ ಹರೀಶ ಸಾಲ್ಯಾನ್ ಹಾಗೂ ಚಂಡೆಯಲ್ಲಿ ಪ್ರವೀಣ್ ಶೆಟ್ಟಿ ಕಟೀಲ್, ಆಶೀಷ್ ದೇವಾಡಿಗ ಸಹಕರಿಸಿದರು.
ಮುಮ್ಮೇಳದಲ್ಲಿ: ರಾವಣನಾಗಿ ರವೀಂದ್ರ ಉಚ್ಚಿಲ್, ಸರಮೆಯಾಗಿ ರಮೇಶ ಭೀರ್ತಿ, ತ್ರಿಜಟೆಯಾಗಿ ರತ್ನಾಕರ ಶೆಟ್ಟಿ ಐಕಳ, ಸೀತೆಯಾಗಿ ಸುರೇಶ ಶೆಟ್ಟಿ ನಂದ್ರೋಳ್ಳಿ, ಹನುಮಂತನಾಗಿ ವಾಸುದೇವ ಮಾರ್ನಾಡ್, ಇಂದ್ರಜೀತುವಾಗಿ ಮಾನಸ್ ಶೆಟ್ಟಿ ಹಾಗೂ ಶ್ರೀರಾಮನಾಗಿ ಶ್ರೀವತ್ಸ ಹರಿದಾಸ ಭಟ್ ಪಾಲ್ಗೊಂಡಿದ್ದರು.





