
ದೇಶದ
ಪ್ರತಿಷ್ಠಿತ ಮಲ್ಟಿ ಸ್ಟೇಟ್ ಷೆಡ್ಯೂಲ್ಡ್ ಕೋ-ಆಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಭಾರತ್
ಕೋ-ಆಪರೇಟಿವ್ ಬ್ಯಾಂಕ್ (ಮುಂಬೈ) ಲಿಮಿಟೆಡ್ ನ ಧಾರಾವಿ ಶಾಖೆಯಲ್ಲಿ 48 ನೇ ಸಂಸ್ಥಾಪನಾ ದಿನವನ್ನು 21 ಆಗಸ್ಟ್,
2026ರಂದು ಸಂಭ್ರಮದಿಂದ ಆಚರಿಸಿತು.
ಭಾರತ್ ಬ್ಯಾಂಕಿನ ನಿರ್ದೇಶಕರುಗಳಾದ ಸುರೇಶ್ ಬಿ ಸುವರ್ಣ, ನಿರಂಜನ್ ಎಲ್ ಪೂಜಾರಿ ಅವರ ಉಪಸ್ಥಿತಿಯಲ್ಲಿ ಬ್ಯಾಂಕಿನ ಪ್ರತಿಷ್ಠಿತ ಗ್ರಾಹಕರು ಉದ್ಯಮಿಗಳು ಆದ ಸುಂದರ್ ಉಡಿಯರ್, ಅಂಕುಶ್ ಹಜಾರೆ, ಹ್ಯಾರಿ ಸಿಕ್ವೇರಾ, ಗಿರೀಶ್ ವರಿಯ, ಅಶೋಕ್ ಕುಕ್ಯಾನ್, ಹೊನ್ನಯ ಪೂಜಾರಿ, ಹರಿರಾಮ್ ಸುಂದರ್ ಉಡಿಯರ್ , ವಿಠಲ್ ಪವಾರ್, ಡಾ.ಪ್ರವೀಣ್ ಭಟ್, ಅಂತೋಣಿ, ನವೀನ್ ಕಾಂಬ್ಳೆ, ಮನೋಹರ್ ಸಾವಂತ್, ವಾಮನ ಕರ್ಕೇರ ಮತ್ತಿತರ ಗಣ್ಯರು ದೀಪ ಬೆಳಗಿ, ಕೇಕ್ ಕತ್ತರಿಸಿ 48ನೇ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿದರು.






ಬಳಿಕ ಮಾತನಾಡಿದ ಸುಂದರ್ ಉಡಿಯರ್ “ಧಾರಾವಿಯಲ್ಲಿ ಭಾರತ್ ಬ್ಯಾಂಕ್ ಶಾಖೆ ಬಂದಿರುವುದರಿಂದ ಇಲ್ಲಿನ ಜನರಿಗೆ ಅತ್ಯುತ್ತಮ ಸೇವೆ ಸಿಗುತ್ತಿದೆ. ಪ್ರತಿಯೊಬ್ಬರೂ ಬ್ಯಾಂಕ್ಗೆ ಬಂದು ತಮ್ಮ ಕೆಲಸಗಳನ್ನು ಸುಲಭವಾಗಿ ಮಾಡಿಕೊಂಡು ಹೋಗಲು ಅನುಕೂಲವಾಗಿದೆ. ಸೂಕ್ತ ಸಮಯಕ್ಕೆ ಸರಿಯಾಗಿ ಸಾಲದ ಕಂತುಗಳನ್ನು ಪಾವತಿಸುವವರಿಗೆ ಇಲ್ಲಿ ಅತ್ಯಂತ ಸುಲಭವಾಗಿ ಸಾಲ ಸೌಲಭ್ಯವೂ ದೊರೆಯುತ್ತದೆ.
ನಾವು ಬ್ಯಾಂಕ್ನಿಂದ ಪ್ರಯೋಜನ ಪಡೆಯುವಂತೆಯೇ, ನಮ್ಮಿಂದಲೂ ಬ್ಯಾಂಕ್ಗೆ ಬೆಂಬಲ ಸಿಗಬೇಕು. ಹೀಗೆ ಗ್ರಾಹಕರು ಮತ್ತು ಬ್ಯಾಂಕ್ ಪರಸ್ಪರ ಕೈಜೋಡಿಸಿ ಕಾರ್ಯನಿರ್ವಹಿಸಿದಾಗ ಮಾತ್ರ 1ಲಕ್ಷ ಕೋಟಿ ರೂಪಾಯಿಗಳ ಆ ಬೃಹತ್ ಕನಸನ್ನು ನನಸು ಮಾಡಲು ಸಾಧ್ಯವಾಗುತ್ತದೆ” ಎಂದರು.
ಅಂಕುಶ್ ಹಜಾರೆ ತನ್ನ ಅಭಿಪ್ರಾಯ ತಿಳಿಸುತ್ತಾ “ಭಾರತ್ ಬ್ಯಾಂಕ್ ಆರಂಭವಾಗಿ 48 ವರ್ಷಗಳಾಗಿದ್ದರೆ, ನಮ್ಮ ಈ ಧಾರಾವಿ ಶಾಖೆ ಪ್ರಾರಂಭವಾಗಿ 13 ವರ್ಷಗಳಾಗಿವೆ. ಕಳೆದ 13 ವರ್ಷಗಳಲ್ಲಿ ಭಾರತ್ ಬ್ಯಾಂಕ್ ಧಾರಾವಿ ಪ್ರದೇಶದ ಜನರಿಗೆ ನೀಡಿದಂತಹ ಉತ್ತಮ ಸೇವಾ ಸೌಲಭ್ಯಗಳನ್ನು ಬೇರೆ ಯಾವುದೇ ಬ್ಯಾಂಕ್ನಲ್ಲೂ ಕಾಣಲು ಸಾಧ್ಯವಿಲ್ಲ.
ಇಲ್ಲಿಯ ಸಿಬ್ಬಂದಿ ಅತ್ಯಂತ ಸಹಕಾರ ಮನೋಭಾವ ಹೊಂದಿದ್ದು, ಪ್ರತಿಯೊಬ್ಬ ಗ್ರಾಹಕರಿಗೂ ಸಂಪೂರ್ಣ ಬೆಂಬಲ ನೀಡುತ್ತಾರೆ. ಇತ್ತೀಚೆಗೆ ಬೇರೆ ಬ್ಯಾಂಕ್ನವರು ಉತ್ತಮ ಕೊಡುಗೆಗಳ ಭರವಸೆ ನೀಡಿ ತಮ್ಮಲ್ಲಿಗೆ ಆಹ್ವಾನಿಸಿದರೂ ಸಹ, ಭಾರತ್ ಬ್ಯಾಂಕ್ನಲ್ಲಿ ಸಿಗುವ ಆತ್ಮೀಯತೆ, ಸೌಜನ್ಯ ಹಾಗೂ ವಿಶ್ವಾಸಾರ್ಹ ಸೇವೆಗಾಗಿ ನಾವಿ ಇಲ್ಲೇ ಮುಂದುವರಿಯುತ್ತಿದ್ದೇವೆ. ಈ ಧಾರಾವಿ ಶಾಖೆಯು ಇನ್ನು ಮುಂದೆ ಇನ್ನಷ್ಟು ಎತ್ತರಕ್ಕೆ ಬೆಳೆದು, ಭಾರತ್ ಬ್ಯಾಂಕ್ನ ಹೆಸರನ್ನು ಮತ್ತಷ್ಟು ಉಜ್ವಲಗೊಳಿಸಲಿ” ಎಂದು ಹೇಳಿದರು.
ಕನ್ನಡ ಸಂಘ ಸಯನ್ ನ ಅಧ್ಯಕ್ಷ, ಅಂತರಾಷ್ಟ್ರೀಯ ಖ್ಯಾತಿಯ ಪುರೋಹಿತರಾದ ಪ್ರವೀಣ್ ಭಟ್ ಮಾತನಾಡುತ್ತಾ ” 48ವರ್ಷಗಳ ಸುದೀರ್ಘ ಹಿನ್ನೆಲೆಯಿರುವ ಭಾರತ್ ಬ್ಯಾಂಕ್ ಧಾರಾವಿ ಶಾಖೆಯಿಂದ ಗ್ರಾಹಕರಿಗೆ ಸೂಕ್ತ ಸೇವೆ ಹಾಗೂ ಉತ್ತಮ ಬೆಂಬಲ ಸಿಗುತ್ತಿದೆ. ಈ ಯಶಸ್ಸಿಗೆ ಗುರುನಾರಾಯಣ ಸ್ವಾಮಿಯ ಪರಿಪೂರ್ಣ ಅನುಗ್ರಹವೇ ಕಾರಣ.ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಸುವರ್ಣ ಅವರು ಹಾಗೂ ಅವರ ಇಡೀ ತಂಡವು ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಈ ರೀತಿಯಾಗಿ ಬ್ಯಾಂಕ್ ದಿನದಿಂದ ದಿನಕ್ಕೆ ಅಭಿವೃದ್ಧಿ ಕಾಣುತ್ತಿದ್ದು, ಇಲ್ಲಿನ ಹಿರಿಯ -ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ” ಎಂದು ಶುಭಕೋರಿದರು.

ಶ್ರೀ ಗುರು ನಾರಾಯಣ ಭಜನಾ ಮಂಡಳಿಯ ಅಧ್ಯಕ್ಷ ಅಶೋಕ್ ಸಸಿಹಿತ್ಲು ತನ್ನ ಅನಿಸಿಕೆ ತಿಳಿಸುತ್ತಾ “ಕೇವಲ 5 ಶಾಖೆಗಳಿಂದ ಪ್ರಾರಂಭವಾದ ಭಾರತ್ ಕೋಆಪರೇಟಿವ್ ಬ್ಯಾಂಕ್ ಅನ್ನು ಇಂದು 102 ಶಾಖೆಗಳವರೆಗೆ ಬೆಳೆಸಿದ ಶ್ರೀ ಜಯ ಸುವರ್ಣ ಅವರ ಕೊಡುಗೆಯನ್ನು ಸ್ಮರಿಸುವ ಸಂದರ್ಭ ಇದಾಗಿದೆ. ಜಯ ಸುವರ್ಣ ಅವರ ಪುತ್ರರಾದ ಸೂರ್ಯಕಾಂತ್ ಜಯ ಸುವರ್ಣ ಅವರು ಅತ್ಯಂತ ಯುವ ಮತ್ತು ಪ್ರತಿಭಾವಂತ ನಾಯಕರಾಗಿದ್ದು, ಬ್ಯಾಂಕ್ ಅನ್ನು ಇನ್ನಷ್ಟು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದಾರೆ.
ಬ್ಯಾಂಕಿನ ಅಭಿವೃದ್ಧಿಗೆ ಸಿಬ್ಬಂದಿವರ್ಗ, ಆಡಳಿತ ಮಂಡಳಿ, ಶೇರುದಾರರು ಮತ್ತು ಗ್ರಾಹಕರ ಸಹಕಾರ ಅತ್ಯಂತ ಅಗತ್ಯ” ಎಂದರು.
ಉದ್ಯಮಿ ವಿಠಲ್ ಪವಾರ್ ಮಾತನಾಡುತ್ತಾ ,”ಭಾರತ್ ಕೋಆಪರೇಟಿವ್ ಬ್ಯಾಂಕ್ನ 48ನೇ ಸ್ಥಾಪನಾ ದಿನದ ಶುಭ ಸಂದರ್ಭದಲ್ಲಿ, ಈ ಧಾರಾವಿ ಶಾಖೆಯನ್ನು ಕಟ್ಟಿ ಬೆಳೆಸಿದ ಸಂಸ್ಥಾಪಕ ಸದಸ್ಯರು ಹಾಗೂ ಎಲ್ಲಾ ಮುಖಂಡರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು.
ಭಾರತ್ ಬ್ಯಾಂಕ್ ನೀಡುವ ಸೇವೆ ಅತ್ಯಂತ ವಿಶಿಷ್ಟವಾದದ್ದು. ನಾವು ಕೇವಲ ಒಂದು ಕರೆ (ಫೋನ್ ಕಾಲ್) ಮಾಡಿ ಹಣ ವರ್ಗಾವಣೆ ಅಥವಾ ಇತರ ಸೇವೆಗಳನ್ನು ಕೇಳಿದರೂ ಸಹ, ಇಲ್ಲಿಯ ಸಿಬ್ಬಂದಿ ತಕ್ಷಣವೇ ಸ್ಪಂದಿಸುತ್ತಾರೆ. ಇಂತಹ ಅತ್ಯುತ್ತಮ ಮತ್ತು ಸುಲಭವಾದ ಸೇವಾ ಸೌಲಭ್ಯ ಬೇರೆ ಯಾವುದೇ ಬ್ಯಾಂಕ್ನಲ್ಲೂ ಸಿಗಲು ಸಾಧ್ಯವಿಲ್ಲ.ಬ್ಯಾಂಕ್ನ ಈ ರೀತಿಯ ಗ್ರಾಹಕ ಸ್ನೇಹಿ ಸೇವೆಗೆ ಕಾರಣರಾದ ಎಲ್ಲಾ ಸಿಬ್ಬಂದಿ ಹಾಗೂ ಉದ್ಯೋಗಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಸೇವೆ ಹೀಗೆಯೇ ಮುಂದುವರಿಯಲಿ. ಇದರಿಂದ ಧಾರಾವಿ ಪ್ರದೇಶದ ಅಭಿವೃದ್ಧಿಯೊಂದಿಗೆ ಬ್ಯಾಂಕ್ ಮತ್ತು ಗ್ರಾಹಕರಿಬ್ಬರ ಏಳಿಗೆಯೂ ಸಾಧ್ಯವಾಗುತ್ತದೆ” ಎಂದು ಅವರು ತಿಳಿಸಿದರು.
ಕನ್ನಡ ಸಂಘ ಸಯನ್ ನ ಸ್ಥಾಪಕ ಸದಸ್ಯ ಉದ್ಯಮಿ, ಹ್ಯಾರಿ ಸಿಕ್ವೇರಾ ತನ್ನ ಅಭಿಪ್ರಾಯ ತಿಳಿಸುತ್ತಾ “ಭಾರತ್ ಕೋ_ಆಪರೇಟಿವ್ ಬ್ಯಾಂಕ್ ಎನ್ನುವುದು ಕೇವಲ ಒಂದು ಬ್ಯಾಂಕ್ ಮಾತ್ರವಲ್ಲ, ಇದು ನಮ್ಮ ಸ್ವಂತ ಕುಟುಂಬ ಹಾಗೂ ಮನೆಯಿದ್ದಂತೆ. ಇಲ್ಲಿ ಪ್ರತಿಯೊಬ್ಬ ಗ್ರಾಹಕರಿಗೂ ಅತ್ಯಂತ ಉತ್ತಮವಾದ ಸೇವಾ ಸೌಲಭ್ಯಗಳು ದೊರೆಯುತ್ತವೆ.ನಿಮ್ಮೆಲ್ಲರ ನಿರಂತರ ಸಹಕಾರ ಮತ್ತು ಬೆಂಬಲದಿಂದಾಗಿ ಬ್ಯಾಂಕ್ ಇದುವರೆಗೆ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದೆ. ಮುಂದಿನ ದಿನಗಳಲ್ಲೂ ಸಹ ಬ್ಯಾಂಕ್ ಇದೇ ರೀತಿ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಬೇಕು. ನಾವೆಲ್ಲರೂ ಸದಾ ನಿಮ್ಮೊಂದಿಗೆ ಇರುತ್ತೇವೆ ಹಾಗೂ ಎಲ್ಲರೂ ಒಗ್ಗೂಡಿ ಭಾರತ್ ಬ್ಯಾಂಕ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸೋಣ ಎಂದರು.
ಉದ್ಯಮಿ ಗಿರೀಶ್ ವರಿಯ ತನ್ನ ಅಭಿಪ್ರಾಯ ತಿಳಿಸುತ್ತಾ ,”ಯಾರೋ ನನಗೆ ಹೇಳಿದರು ಅಂತ ನಾನು ಇಲ್ಲೇ ಅಕೌಂಟ್ ಓಪನ್ ಮಾಡಿದೆ. ಇಲ್ಲಿನ ಎಲ್ಲಾ ಸಿಬ್ಬಂದಿ ಕೂಡ ತುಂಬಾ ಚೆನ್ನಾಗಿ, ಮೃದುವಾಗಿ ಮಾತನಾಡುತ್ತಾರೆ. ಯಾರಿಗೂ ಏನೂ ತೊಂದರೆಯಾಗುವುದಿಲ್ಲ, ಯಾರದ್ದಾದರೂ ಚೆಕ್ ರಿಟರ್ನ್ ಹೋದರೆ ಫೋನ್ ಮಾಡಿ ತಿಳಿಸುತ್ತಾರೆ. ಎಲ್ಲಾ ರೀತಿಯ ಸೇವೆ ತುಂಬಾ ಚೆನ್ನಾಗಿ ಸಿಗುತ್ತದೆ, ಅದಕ್ಕೆ ಬ್ಯಾಂಕ್ಗೆ ಧನ್ಯವಾದಗಳು” ಎಂದರು.
ಹಿರಿಯ ಗ್ರಾಹಕರೂ, ಹಿತೇಷಿ ಹೊನ್ನಯ ಪೂಜಾರಿ ಮಾತನಾಡುತ್ತಾ,”ನಾವು ಈ ಬ್ಯಾಂಕ್ ಅನ್ನು ಪ್ರಾರಂಭಿಸಿದಾಗ ನಾನು ಇದರ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದೆ. ಬಡ ಜನರಿಗೆ ಮತ್ತು ಅಗತ್ಯವಿರುವ ಪ್ರತಿಯೊಬ್ಬರಿಗೂ ಸಹಾಯ ಮಾಡಬೇಕೆಂಬ ಏಕೈಕ ಉದ್ದೇಶದಿಂದ ಇದನ್ನು ಸ್ಥಾಪಿಸಲಾಯಿತು.
ಆರಂಭಿಕ ದಿನಗಳಲ್ಲಿ ಬ್ಯಾಂಕ್ ಸ್ಥಾಪನೆಗಾಗಿ ಹಾಗೂ ಸದಸ್ಯರನ್ನು ಸೇರಿಸಲು ನಾವು ರಾತ್ರಿ-ಹಗಲು ಶ್ರಮಿಸಿದ್ದೇವೆ. ಭಾಂಡೂಪ್ನಲ್ಲಿ ಕೇವಲ 10ರೂಪಾಯಿ ಶೇರು ನೀಡಿ 200 ಸದಸ್ಯರನ್ನು ಮಾಡಲು ಹೋದಾಗ ಜನರ ಬೈಗುಳ, ಟೀಕೆಗಳನ್ನು ಎದುರಿಸಬೇಕಾಯಿತು. ಆದರೆ ಇಂದು ಅದೇ ಜನರ ಮಕ್ಕಳು ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಮತ್ತು ಬ್ಯಾಂಕ್ ಈ ಮಟ್ಟಕ್ಕೆ ಬೆಳೆದು ನಿಂತಿರುವುದು ನಾವು ಅಂದು ಪಟ್ಟ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ ಎಂದು ಹೇಳಿದರು.
ಉದ್ಯಮಿ ಅಂತೋಣಿ ಮಾತನಾಡುತ್ತಾ “ಧಾರಾವಿಯಂತಹ ಕೊಳೆಚೆ ಪ್ರದೇಶದಲ್ಲಿ (ಸ್ಲಂ ಏರಿಯಾ) ಈ ಬ್ಯಾಂಕಿಂಗ್ ಸೇವೆಯನ್ನು ತರಲು ಜಯ ಸಿ ಸುವರ್ಣ ಬಹಳ ಶ್ರಮಿಸಿದ್ದರು.ಬ್ಯಾಂಕ್ ಇಷ್ಟೊಂದು ಪ್ರಗತಿ ಕಾಣಲು ಇಲ್ಲಿನ ಸಿಬ್ಬಂದಿ ಹಾಗೂ ಮ್ಯಾನೇಜರ್ಗಳು ಕಾರಣ. ರಾಜೇಶ್ ಭಾಯ್, ಅದಕ್ಕೂ ಮುನ್ನ ಪ್ರೇಮ್ ಭಾಯ್, ನರೇಶ್ ಭಾಯ್ ಮುಂತಾದವರು ತುಂಬಾ ಶ್ರಮಿಸಿದ್ದಾರೆ. ಅವರೆಲ್ಲರ ಪರಿಶ್ರಮದಿಂದಲೇ ಇಂದು ಬ್ಯಾಂಕ್ ಈ ಹಂತದಲ್ಲಿ ಬಂದು ನಿಂತಿದೆ.ಇಲ್ಲಿನ ಸಿಬ್ಬಂದಿ ರಾತ್ರಿ-ಹಗಲು ಗ್ರಾಹಕರನ್ನು ಅತ್ಯಂತ ಉತ್ತಮವಾಗಿ ಒಪ್ಪಿಸುತ್ತಾರೆ. ನಾವು ಇಂದು ಬ್ಯಾಂಕ್ ಜೊತೆ ಜತೆಯಾಗಿದ್ದೇವೆ ಎಂದರೆ ಅದಕ್ಕೆ ಅವರ ಸಿಹಿ ಮಾತುಗಳು ಮತ್ತು ನಮ್ಮೊಂದಿಗೆ ಇರುವ ಉತ್ತಮ ವ್ಯವಹಾರವೇ ಕಾರಣ. ಜನರು ನಮ್ಮ ಬಳಿ ಬಂದು ‘ಬ್ಯಾಂಕ್ ಸೇವೆ ಹೇಗಿದೆ?’ ಎಂದು ಕೇಳಿದಾಗ, ನಾವು ‘ಒಮ್ಮೆ ಅಕೌಂಟ್ ಓಪನ್ ಮಾಡಿ ನೋಡಿ, ಆಮೇಲೆ ನಿಮಗೇ ತಿಳಿಯುತ್ತದೆ’ ಎಂದು ಹೇಳುತ್ತೇವೆ ಎಂದು ಅಭಿಮಾನದಿಂದ ನುಡಿದರು.
ಯುವ ಉದ್ಯಮಿ ಹರಿರಾಮ್ ಸುಂದರ್ ಉಡಿಯರ್ ತನ್ನ ಅನಿಸಿಕೆ ತಿಳಿಸುತ್ತಾ “ಭಾರತ್ ಕೋಆಪರೇಟಿವ್ ಬ್ಯಾಂಕ್ನ ಹೆಸರಿನಲ್ಲೇ ‘ಕೋಆಪರೇಟಿವ್’ (ಸಹಕಾರ) ಎಂಬ ಭಾವನೆಯಿದೆ. ಇಲ್ಲಿಯ ಎಲ್ಲಾ ಸಿಬ್ಬಂದಿಯಿಂದ ಹಿಡಿದು ವ್ಯವಸ್ಥಾಪಕರವರೆಗೆ (ಮ್ಯಾನೇಜರ್) ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾನು ರಾಜೇಶ್ ಬಂಗೇರ ಅವರೊಂದಿಗೆ ಮೂರ್ನಾಲ್ಕು ಬಾರಿ ಭೇಟಿಯಾಗಿದ್ದೇನೆ, ಅವರ ಉತ್ತಮ ಸ್ವಭಾವ ಏನೆಂಬುದು ನನಗೆ ಅರ್ಥವಾಗಿದೆ.ಸಾಮಾನ್ಯವಾಗಿ ಇತರ ಬ್ಯಾಂಕ್ಗಳಲ್ಲಿ ಮ್ಯಾನೇಜರ್ಗಳಲ್ಲಿ ಕಂಡುಬರುವ ಬಿಗುವಿನ ನಡವಳಿಕೆ ಇಲ್ಲಿಲ್ಲ. ಬದಲಿಗೆ, ಇಲ್ಲಿ ಎಲ್ಲರೊಂದಿಗೆ ಅತ್ಯಂತ ಗೌರವದಿಂದ ಮತ್ತು ಮೃದುವಾಗಿ ವ್ಯವಹರಿಸುತ್ತಾರೆ. ಗ್ರಾಹಕರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು, ಸೂಕ್ತ ದಾರಿ ತೋರಿಸಿ ಪ್ರತಿಯೊಂದನ್ನೂ ಸ್ಪಷ್ಟವಾಗಿ ತಿಳಿಸಿ ಹೇಳುತ್ತಾರೆ ಎಂದು ನುಡಿದರು.
ಧಾರವಿ ಶಾಖೆಯ ಮುಖ್ಯಸ್ಥ ರಾಜೇಶ್ ಜೆ ಬಂಗೇರ ಎಲ್ಲರನ್ನು ಸ್ವಾಗತಿಸಿದರು.ಶಾಖೆಯ ಉಪ ಮುಖ್ಯಸ್ತೆ ಜಯಶ್ರೀ ಶಶಿ ಬಂಗೇರ, ಸಿಬ್ಬಂದಿಗಳಾದ ಮಮತಾ ಸಾಂಗ್ಳೆ, ಚಂದ್ರಶೇಖರ್ ಕೋಟ್ಯಾನ್, ಮನೀಶ್ ಅಮೀನ್, ದೀಪ ಚಂದ್ರಶೇಖರ್ ಪಾಲೆತಾಡಿ, ಧನುಶ್ರೀ ಪೂಜಾರಿ, ಸಹಾಯಕ ಸಿಬ್ಬಂದಿಗಳಾದ ಅರುಣ್, ಉದ್ದೇಶ್ , ಲಕ್ಷ್ಮಿ ಸಹಕರಿಸಿದರು.




