ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಭಾಗದ ರೈಲ್ವೆ ಪ್ರಯಾಣಿಕರ ದಶಕಗಳ ಸುದೀರ್ಘ ಬೇಡಿಕೆಗೆ ಕೊನೆಗೂ ಕೇಂದ್ರ ರೈಲ್ವೆ ಸಚಿವಾಲಯ ಸ್ಪಂದಿಸಿದೆ. ಪ್ರಸ್ತುತ ದಕ್ಷಿಣ ರೈಲ್ವೆಯ (SR) ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ವಲಯವನ್ನು ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗಕ್ಕೆ ಅಧಿಕೃತವಾಗಿ ಸೇರ್ಪಡೆಗೊಳಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ. ಈ ಐತಿಹಾಸಿಕ ಬದಲಾವಣೆಯು ಅಕ್ಟೋಬರ್ 1, 2026 ರಿಂದ ಜಾರಿಗೆ ಬರಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ರೈಲ್ವೆ ಮಂಡಳಿಯ ಹೊಸ ಆದೇಶದಂತೆ, ಉಳ್ಳಾಲವರೆಗಿನ ಮಂಗಳೂರು ಪ್ರದೇಶವು ಮೈಸೂರು ವಿಭಾಗದ ಆಡಳಿತಾತ್ಮಕ ವ್ಯಾಪ್ತಿಗೆ ಒಳಪಡಲಿದೆ. ಇದರಿಂದಾಗಿ ನೈಋತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆ ನಡುವಿನ ಇಂಟರ್ಚೇಂಜ್ ಕೇಂದ್ರವು ಪಡೀಲ್ನಿಂದ ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ. ಇನ್ನು ಕೊಂಕಣ ರೈಲ್ವೆ ವ್ಯಾಪ್ತಿಯಲ್ಲಿರುವ ತೋಕೂರು ನಿಲ್ದಾಣವು ಕೆಆರ್ಸಿಎಲ್ ಮತ್ತು ನೈಋತ್ಯ ರೈಲ್ವೆ ನಡುವಿನ ಸಂಪರ್ಕ ಕೇಂದ್ರವಾಗಿ ಯಥಾವತ್ತಾಗಿ ಮುಂದುವರಿಯಲಿದೆ.
ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಈ ಬಗ್ಗೆ ಕಾರ್ಯಪ್ರವತ್ತನಾಗಿದ್ದು,, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ನಿರಂತರ ಬೆಂಬಲದಿಂದ ಈ ಬಹುನಿರೀಕ್ಷಿತ ನಿರ್ಧಾರ ಸಾಧ್ಯವಾಗಿದೆ ಎಂದು ಚೌಟ ಹರ್ಷ ವ್ಯಕ್ತಪಡಿಸಿದ್ದಾರೆ. ಈ ವರ್ಗಾವಣೆಯಿಂದಾಗಿ ವಲಯಗಳ ನಡುವಿನ ಆಡಳಿತಾತ್ಮಕ ಗೊಂದಲಗಳು ಬಗೆಹರಿದು, ಕರಾವಳಿ ಕರ್ನಾಟಕದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹೊಸ ರೈಲು ಸಂಪರ್ಕ ಕಲ್ಪಿಸಲು ಹಾದಿ ಸುಗಮವಾಗಲಿದೆ. ಪ್ರಯಾಣಿಕರ ದೂರುಗಳಿಗೆ ಶೀಘ್ರ ಪರಿಹಾರ ಸಿಗಲಿದ್ದು, ಮಂಗಳೂರು ಪ್ರದೇಶದ ರೈಲ್ವೆ ವಿಕಾಸದ ಹಾದಿಯಲ್ಲಿ ವೇಗವಾಗಿ ಮುನ್ನಡೆಯಲಿದೆ.




