July 19, 2026
Mumbai News Kannada
ಮುಂಬಯಿ

ಮಲಾಡ್ ಪೂರ್ವ: ಸ್ವಾಮಿ ಕೊರಗಜ್ಜ ನೇಮೋತ್ಸವ







ಭಕ್ತರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿ: ನವೀನ್ ಅಂಚನ್ ಪಕ್ಷಿಕೆರೆ


​ಮುಂಬಯಿ, ಜೂ. 3: ಮಲಾಡ್ ಪೂರ್ವದ ಪುಷ್ಪಾ ಪಾರ್ಕ್‌ನಲ್ಲಿರುವ ಉತ್ಕರ್ಷ ಶಾಲೆಯ ಮೈದಾನದಲ್ಲಿ ಸ್ವಾಮಿ ಕೊರಗಜ್ಜ ನೇಮೋತ್ಸವ ಸಮಿತಿಯ ಆಶ್ರಯದಲ್ಲಿ ಮೇ 30ರಂದು ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸ್ವಾಮಿ ಕೊರಗಜ್ಜನ ನೇಮೋತ್ಸವವು ಅತ್ಯಂತ ಭಕ್ತಿ-ಸಂಭ್ರಮದೊಂದಿಗೆ ಸಂಪನ್ನಗೊಂಡಿತು.


​ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾದ ನವೀನ್ ಅಂಚನ್ ಪಕ್ಷಿಕೆರೆ ಅವರ ಮಾರ್ಗದರ್ಶನದಲ್ಲಿ ಈ ನೇಮೋತ್ಸವ ಜರುಗಿತು. ಇದರ ಅಂಗವಾಗಿ ಸಂಜೆ ಮಲಾಡ್ ಪೂರ್ವದ ಗೋಲ್ ಗಾರ್ಡನ್‌ನಿಂದ ಉತ್ಕರ್ಷ ಮೈದಾನದವರೆಗೆ ಚೆಂಡೆ ವಾದ್ಯ ಹಾಗೂ ಭಜನೆಗಳೊಂದಿಗೆ ಕೊರಗಜ್ಜನ ಭಂಡಾರವನ್ನು ಭವ್ಯ ಮೆರವಣಿಗೆಯ ಮೂಲಕ ತರಲಾಯಿತು.



​ನೇಮೋತ್ಸವವನ್ನು ನಡೆಸಿಕೊಡಲು ಊರಿನಿಂದಲೇ ವಾದ್ಯದವರು, ಮಧ್ಯಸ್ಥರು ಹಾಗೂ ದೈವದ ಸೇವಕರ್ತರ ತಂಡ ಆಗಮಿಸಿತ್ತು. ಅತ್ಯಂತ ಶಿಸ್ತುಬದ್ಧವಾಗಿ ನಡೆದ ನೇಮೋತ್ಸವವು ತಡರಾತ್ರಿಯವರೆಗೆ ಮುಂದುವರಿಯಿತು. ತದನಂತರ ಭಕ್ತರಿಗೆ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು. ಮಲಾಡ್ ಪೂರ್ವದ ‘ಉಡುಪಿ ಕ್ಯಾಟರರ್ಸ್’ ಮಾಲಕರಾದ ದಿನೇಶ್ ಕಾಮತ್ ಅವರು ಅನ್ನದಾನದ ಪ್ರಸಾದವನ್ನು ತಯಾರಿಸಿದ್ದರು.


​ಈ ನೇಮೋತ್ಸವವು ವ್ಯವಸ್ಥಿತವಾಗಿ ನೆರವೇರಲು ಸಮಿತಿಯ ಪ್ರಮುಖರಾದ ಜಗನ್ ಕೋಟ್ಯಾನ್ (ಮಲಾಡ್ ಕಾಕಾ ಬಾರ್), ಉದ್ಯಮಿ ಉದಯ ಕೋಟ್ಯಾನ್, ರವಿ ಸುರೇಶ್ ಶೆಟ್ಟಿ ಭಾಯಂದರ್, ಸದಾನಂದ ಶೆಟ್ಟಿ, ಅಮಿತ್ ಶೆಟ್ಟಿ ಪೊವಾಯಿ, ರಮೇಶ್ ಶೆಟ್ಟಿ, ನಾರಾಯಣ ಕುಲಕರ್ಣಿ, ಜೈರಾಜ್ ಕರ್ಕೇರ, ಸುರೇಶ್ ನಾಡರ್, ದಿನೇಶ್ ಸುವರ್ಣ, ಮಧುಸೂದನ್ ಪಾಲನ್, ಜಯರಾಮ್ ಶೆಟ್ಟಿ, ದಿನೇಶ್ ಬಂಗೇರ ಖಾರ್ ದಾಂಡ, ವಿಶ್ವನಾಥ್ ಪೂಜಾರಿ ಮತ್ತಿತರ ಸದಸ್ಯರು ಶ್ರಮಿಸಿದರು. ಮಹಿಳಾ ಸದಸ್ಯರಾದ ವನಿತಾ ನವೀನ್ ಅಂಚನ್, ಶೋಭಾ ಸಚಿನ್ ಪೂಜಾರಿ, ಹೇಮಲತಾ ಸಾಲ್ಮಾನ್, ನಲಿನಿ ಕರ್ಕೇರ ಸೇರಿದಂತೆ ಹಲವರು ಸಹಕರಿಸಿದರು.


​ನೇಮೋತ್ಸವಕ್ಕೆ ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಮತ್ತು ಪದಾಧಿಕಾರಿಗಳು ಆಗಮಿಸಿದ್ದರು. ಅಲ್ಲದೆ, ಮಹಾನಗರದ ವಿವಿಧ ಉಪನಗರಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಪೊವಾಯಿ ಮಹಾಶೇಷ ರುಂಡಮಾಲಿನಿ ದೇವಸ್ಥಾನದ ರಾಹುಲ್ ಸುವರ್ಣ, ಭಾಯಂದರ್ ಶ್ರೀ ಮೂಕಾಂಬಿಕಾ ಶಾಂತಾದುರ್ಗ ದೇವಸ್ಥಾನದ ಆಡಳಿತ ಮಂಡಳಿಯವರು ಮತ್ತು ಸದಸ್ಯರು, ಕನ್ನಡ ನವತಾರ ಕಲಾ ಮಂಡಳಿಯ ಸಂಸ್ಥಾಪಕ ದಿವಾಕರ್ ಗುರುಸ್ವಾಮಿ, ಸ್ಥಳೀಯ ನಗರಸೇವಕರು, ವಿವಿಧ ಜಾತಿ ಸಂಘಟನೆಗಳ ಪದಾಧಿಕಾರಿಗಳು, ಹೋಟೆಲ್ ಉದ್ಯಮಿಗಳು, ಸಮಾಜ ಸೇವಕರು ಹಾಗೂ ಧಾರ್ಮಿಕ ಮುಖಂಡರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.



ಪಾಲ್ಗೊಂಡ ಭಕ್ತರಿಗೆ ಕೊರಗಜ್ಜನ ಪ್ರಸಾದ ನೀಡಿ ಹರಸಿದ ನವೀನ್ ಅಂಚನ್ ಪಕ್ಷಿಕೆರೆ ಅವರು ಮಾಧ್ಯಮದವರೊಂದಿಗೆ ಮಾತನಾಡಿ, “ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಕೊರಗಜ್ಜನು ಕರುಣಿಸಲಿ ಎನ್ನುವ ಸದುದ್ದೇಶದಿಂದ ಈ ದೈವದ ನೇಮೋತ್ಸವವನ್ನು ಆಯೋಜಿಸಿದ್ದೇವೆ. ಭಕ್ತರೆಲ್ಲರೂ ತುಂಬು ಹೃದಯದಿಂದ ಸಹಕಾರ ನೀಡಿದ್ದಾರೆ. ಆದುದರಿಂದಲೇ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ,” ಎಂದು ಕೃತಜ್ಞತೆ ಸಲ್ಲಿಸಿದರು.



Related posts

ಮುಂಬೈ : ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರಣವಿ ಸುಧೀರ್ ಅಮೀನ್ ಗೆ ಶೇ.94.60 ಅಂಕ.

Mumbai News Desk

ಬಿಲ್ಲವರ ಅಸೋಸಿಯೇಶನ್ ಕಲ್ವಾ ಸ್ಥಳೀಯ ಕಚೇರಿಗೆ ಬೆಳ್ಳಿ ಹೊಳಪು! ರಜತ ಮಹೋತ್ಸವ ಸಂಭ್ರಮ.

Mumbai News Desk

ಬಿಲ್ಲವರ ಅಸೋಸಿಯೇಶನ್‌ನ ಮೀರಾರೋಡ್ ಸ್ಥಳೀಯ ಕಚೇರಿಯಲ್ಲಿ, ‘ಮಕ್ಕಳ ಭಜನಾ ತಂಡ’ ದ ಉದ್ಘಾಟನೆ

Mumbai News Desk

ಕರ್ನಾಟಕ ಸಂಘ ಮುಂಬಯಿ, ಡಾ.ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ ಪ್ರಧಾನ ಮತ್ತು ಕೃತಿ ಬಿಡುಗಡೆ ಸಮಾರಂಭ

Mumbai News Desk

ಮೈಸೂರು ಅಸೋಸಿಯೇಷನ್‌ನಲ್ಲಿ ‘ಶ್ರೀರಂಗ ಸ್ಮರಣೆ’ ನಾಟಕೋತ್ಸವ: -ವೀಕ್ಷಕರನ್ನು ಮನರಂಜಿಸಿದ “ಕಾಲಜ್ಞಾನಿ ಕನಕ”

Mumbai News Desk

ಡೊಂಬಿವಲಿ: ಬಡ ರೋಗಿಗಳಿಗೆ ಆಸರೆಯಾದ ಉಚಿತ ಡಯಾಲಿಸಿಸ್ ಕೇಂದ್ರ ಲೋಕಾರ್ಪಣೆ: ಮೊಗವೀರ ವ್ಯವಸ್ಥಾಪಕ ಮಂಡಳಿಯಿಂದ ಜನಪರ ಆರೋಗ್ಯ ಸೇವೆಗೆ ಚಾಲನೆ

Mumbai News Desk