September 6, 2026
Mumbai News Kannada
ಮುಂಬಯಿ

ಮಂಜುನಾಥ ವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಅಕಾಡೆಮಿ ವರ್ಷದ ಪ್ರಶಸ್ತಿ ಪ್ರಧಾನ






ಡೊಂಬಿವಲಿ ಕರ್ನಾಟಕ ಸಂಘವು ವಿದ್ಯಾರ್ಥಿಗಳನ್ನು ಭವಿಷ್ಯದ ಸಜ್ಜನ ಪ್ರಜೆಗಳನ್ನಾಗಿ ರೂಪಿಸುತ್ತಿದೆ — ಸುಕುಮಾರ್ ಶೆಟ್ಟಿ

ಡೊಂಬಿವಲಿ, ಆಗಸ್ಟ್ 16:
ಭಾರತಮಾತೆಯ ತ್ರಿವರ್ಣ ಧ್ವಜವು ಆಕಾಶದಲ್ಲಿ ಲಲಿತವಾಗಿ ಲಹರಿಸಿದಾಗ, ಮಂಜುನಾಥ ವಿದ್ಯಾಲಯದ ಆವರಣ ದೇಶಭಕ್ತಿಯ ಭಾವನೆಯಲ್ಲಿ ಮಿಂದೇಳಿತು. ಸ್ವಾತಂತ್ರ್ಯದ 78ನೇ ವರುಷದ ಸಂಭ್ರಮಾಚರಣೆಯೊಡನೆ ಅಕಾಡೆಮಿ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭವು ಕರ್ನಾಟಕ ಸಂಘದ ಆಶ್ರಯದಲ್ಲಿ ಭವ್ಯವಾಗಿ ನೆರವೇರಿತು.

ಕಾರ್ಯಕ್ರಮವನ್ನು ಧ್ವಜಾರೋಹಣದ ಮೂಲಕ ಸಂಘದ ಅಧ್ಯಕ್ಷರಾದ ಸುಕುಮಾರ್ ಎನ್. ಶೆಟ್ಟಿ ಉದ್ಘಾಟಿಸಿದರು. ಬಳಿಕ ಅವರು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಸಂದೇಶ ನೀಡುತ್ತಾ ಹೀಗೆಂದರು:
“ಸ್ವಾತಂತ್ರ್ಯವೆಂದರೆ ಕೇವಲ ರಾಜಕೀಯ ಮುಕ್ತಿಯಲ್ಲ; ಅದರಲ್ಲಿ ತ್ಯಾಗ, ತಪಸ್ಸು ಹಾಗೂ ದೇಶಭಕ್ತಿಯ ತೀವ್ರ ಪ್ರಜ್ವಲನವಿದೆ. ನಮ್ಮ ಸ್ವಾತಂತ್ರ್ಯಸಮರ ಯೋಧರು ತೋರಿದ ಶೌರ್ಯವನ್ನು ಆತ್ಮಚರಿತ್ರೆಗಳ ಮೂಲಕ ಅರಿತುಕೊಳ್ಳುವುದು, ನಮಗೆ ನಿಜವಾದ ದೇಶಪ್ರೇಮವನ್ನು ಬಿತ್ತುವ ಮಾರ್ಗವಾಗಿದೆ. ಕರ್ನಾಟಕ ಸಂಘವು ಕಳೆದ ಹಲವು ದಶಕಗಳಿಂದ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಡೊಂಬಿವಲಿಯ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಿ, ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಕಾರ್ಯದಲ್ಲಿ ತೊಡಗಿದೆ.”

ಅವರು ಮುಂದುವರಿದು, ವಿದ್ಯಾಭ್ಯಾಸದಲ್ಲಿ ಸಂಘ ಸಾಧಿಸಿದ ಮೈಲುಗಲ್ಲುಗಳನ್ನು ಉಲ್ಲೇಖಿಸಿದರು:
“ಕಳೆದ ಹತ್ತು ವರ್ಷಗಳಿಂದ ನಮ್ಮ ವಿದ್ಯಾಲಯವು ಶೇಕಡಾ ನೂರು ಪ್ರತಿಶತ ಫಲಿತಾಂಶಗಳನ್ನು ತಂದುಕೊಡುತ್ತಿದೆ. ಡಿಜಿಟಲ್ ಶಿಕ್ಷಣ, ಗುಣಮಟ್ಟದ ಅಧ್ಯಾಪಕ ವರ್ಗ ಮತ್ತು ನವೀನ ಪದ್ದತಿಗಳ ಮೂಲಕ ವಿದ್ಯಾರ್ಥಿಗಳಿಗೆ ಶ್ರೇಷ್ಠ ವಿದ್ಯಾಭ್ಯಾಸ ಒದಗಿಸುತ್ತಿದ್ದೇವೆ. ಈ ಶಿಕ್ಷಣವೇ ಭವಿಷ್ಯದ ಭಾರತ ಕಟ್ಟುವ ಭದ್ರ ಬುನಾದಿಯಾಗಲಿದೆ” ಎಂದು ಅವರು ಆತ್ಮವಿಶ್ವಾಸದಿಂದ ಹೇಳಿದರು.

ಈ ಸಂದರ್ಭದಲ್ಲಿ ಎಸ್.ಎಸ್.ಸಿ.ಯಲ್ಲಿ 95% ಕ್ಕಿಂತ ಹೆಚ್ಚು ಅಂಕ ಪಡೆದ ಅಂಗ್ಲ ಮಾಧ್ಯಮದ ಮೂವರು ವಿದ್ಯಾರ್ಥಿಗಳು ಮತ್ತು ಕನ್ನಡ ಮಾಧ್ಯಮದ ಒಬ್ಬ ವಿದ್ಯಾರ್ಥಿಗೆ ಪ್ರತಿಯೊಬ್ಬರಿಗೂ ಐದು ಸಾವಿರ ರೂಪಾಯಿ ನಗದು ಬಹುಮಾನವನ್ನು ಶ್ರೀ ಸುಕುಮಾರ್ ಶೆಟ್ಟಿ ತಮ್ಮ ವೈಯಕ್ತಿಕ ಪ್ರೋತ್ಸಾಹದಿಂದ ನೀಡಿ ಗೌರವಿಸಿದರು.

“ಸ್ವಾತಂತ್ರ್ಯವು ಕೇವಲ ರಾಜಕೀಯವಲ್ಲ” — ಡಾ. ದಿವಾಕರ ಶೆಟ್ಟಿ ಇಂದ್ರಾಳಿ

ಕಾರ್ಯಾಧ್ಯಕ್ಷರಾದ ಡಾ. ದಿವಾಕರ ಶೆಟ್ಟಿ ಇಂದ್ರಾಳಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ಹೀಗೆಂದರು:
“ನಮ್ಮ ದೇಶ ಪಡೆದ ಸ್ವಾತಂತ್ರ್ಯವು ಕೇವಲ ರಾಜಕೀಯ ಬದಲಾವಣೆ ಅಲ್ಲ; ಅದರಲ್ಲಿ ಸಮಾನತೆ, ಆರ್ಥಿಕ ಪ್ರಗತಿ ಮತ್ತು ವೈಯಕ್ತಿಕ ಹಕ್ಕುಗಳ ಸಮಗ್ರತೆಯಿದೆ. ಇಂದಿನ ಸಂದರ್ಭದಲ್ಲಿ ನಿಜವಾದ ಸ್ವಾತಂತ್ರ್ಯವೆಂದರೆ, ವ್ಯಕ್ತಿಯ ಸಾಮರ್ಥ್ಯವನ್ನು ವ್ಯಕ್ತಪಡಿಸಿ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವುದು. ಈ ದೃಷ್ಟಿಯಿಂದ ಕರ್ನಾಟಕ ಸಂಘವು ನೀಡುತ್ತಿರುವ ಗುಣಮಟ್ಟದ ಶಿಕ್ಷಣ ದೇಶಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ನಮ್ಮ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳ ಅಧ್ಯಯನದ ಅವಕಾಶವಿದ್ದು, ಅವರು ತಮ್ಮ ಪ್ರತಿಭೆಯನ್ನು ಬೆಳೆಸಿ ರಾಷ್ಟ್ರದ ಕೀರ್ತಿಗೆ ಭಾಗಿಯಾಗಬೇಕು.”

ಕಾರ್ಯಕ್ರಮದಲ್ಲಿ ಸುರೇಖಾ ಪಂಡಿತ್ ಸ್ವಾಗತ ಭಾಷಣ ಮಾಡಿದರು; ಸುಪ್ರೀತಾ ಶೆಟ್ಟಿ ನಿರೂಪಣೆ ಮಾಡಿ ವಂದನಾ ಮಾತುಗಳೊಂದಿಗೆ ಸಮಾರಂಭವನ್ನು ಯಶಸ್ವಿಗೊಳಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಲೋಕನಾಥ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ದೇವದಾಸ್ ಕುಲಾಲ್, ಕಾರ್ಯದರ್ಶಿ ಪ್ರೋ. ಅಜಿತ್ ಉಮ್ರಾಣಿ, ಕೋಶಾಧಿಕಾರಿ ವಿಮಲಾ ವಿ. ಶೆಟ್ಟಿ, ಅಂಗ್ಲ ಮಾಧ್ಯಮದ ಮುಖ್ಯ ಅಧ್ಯಾಪಕಿ ಸುರೇಖಾ ಪಂಡಿತ್, ಕನ್ನಡ ಮಾಧ್ಯಮದ ನಾಗಪ್ಪ ಪೂಜಾರಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ರವಿ ಸನಿಲ್, ಆನಂದ ಶೆಟ್ಟಿ ಎಕ್ಕಾರ್, ರಮೇಶ್ ಶೆಟ್ಟಿ, ಜಗನ್ನಾಥ ಶೆಟ್ಟಿ, ರಾಮಣ್ಣ ಭಂಡಾರಿ, ಪ್ರಭಾಕರ ಶೆಟ್ಟಿ, ರಾಜೀವ್ ಭಂಡಾರಿ, ಚಂದ್ರ ನಾಯ್ಕ್, ಮಾಜಿ ಅಧ್ಯಕ್ಷ ವಿಠಲ ಎ. ಶೆಟ್ಟಿ, ಯೋಗಿನಿ ಎಸ್. ಶೆಟ್ಟಿ ಮತ್ತಿತರ ಗಣ್ಯರು ಹಾಜರಿದ್ದರು.



Related posts

ಗೋರೆಗಾಂವ್ ಕರ್ನಾಟಕ ಸಂಘದ ತುಳು ಪರ್ಬ ದತ್ತಿ ನಿಧಿ ಕಾರ್ಯಕ್ರಮ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಸೆ. 5 ರಂದು ಜರಗಿದ 25ನೇ ಸಂಸ್ಥಾಪನಾ ದಿನಾಚರಣೆ, ಸಂಘ ಸಂಸ್ಥೆಗಳಿಗೆ ಗೌರವ ಪುರಸ್ಕಾರ ಸಮಾರಂಭದಲ್ಲಿ ಕರ್ನಾಟಕದ ಸ್ಪೀಕರ್ ಯು. ಟಿ. ಖಾದರ್ ಅವರ ಮನದಾಳದ ನುಡಿ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ ಸಮಾಜ ಕಲ್ಯಾಣ ಸಹಾಯಹಸ್ತ

Mumbai News Desk

ಶ್ರೀ ಸಾಯಿಬಾಬಾ ಪೂಜಾ ಸಮಿತಿ ಕಾಲಘೋಡ ಇದರ 55ನೇ ವಾರ್ಷಿಕ ಮಹಾಪೂಜೆ.

Mumbai News Desk

ವಾಲ್ಕೇಶ್ವರದ ಕೈವಲ್ಯ ಮಠದಲ್ಲಿ ಮಾಘ ಮಹಾ ಪಂಚಮಿ ವೈಭವ

Mumbai News Desk

“ಅಂಬರ್ನಾಥ್ ಗೋಪಾಲ್ ಪೂಜಾರಿ” ಯವರಿಗೆ ಬಿಲ್ಲವರ ಅಸೋಸಿಯೇಷನ್, ಡೊಂಬಿವಲಿ ಸ್ಥಳೀಯ ಕಚೇರಿಯ ವತಿಯಿಂದ ಸನ್ಮಾನ

Mumbai News Desk