32 C
Mumbai
April 24, 2026
Mumbai News Kannada
ಮುಂಬಯಿ

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್: 80ನೇ ವಾರ್ಷಿಕೋತ್ಸವ ಸಮಾರೋಪ ಹಾಗೂ ಸಾಧಕರಿಗೆ ಸನ್ಮಾನ





“ವ್ಯಕ್ತಿ ಜಾತಿಯಿಂದ ಮುಖ್ಯವಾಗದೆ ವ್ಯಕ್ತಿತ್ವದಿಂದ ಮುಖ್ಯವಾಗಬೇಕು” : ಪೊಲ್ಯ ಉಮೇಶ್ ಶೆಟ್ಟಿ

ಮುಂಬಯಿ: ಧರ್ಮವನ್ನು ಗೌರವಿಸುತ್ತಾ ಬಂದಿರುವ ವಿಶ್ವಕರ್ಮ ಸಮಾಜದ ಬಂಧುಗಳು, ನನ್ನನ್ನು ತಮ್ಮವನೆಂದು ಪ್ರೀತಿಯಿಂದ ಸ್ವಾಗತಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀಡಿದ್ದಾರೆ. ಇವರ ಈ ಅಭಿಮಾನಕ್ಕೆ ನಾನು ಸದಾ ಆಭಾರಿಯಾಗಿದ್ದೇನೆ ಎಂದು ಥಾಣೆ ಹೋಟೆಲ್ ಮಾಲೀಕರ ಸಂಘದ ಹಾಗೂ ವಿಶ್ವ ಹಿಂದೂ ಪರಿಷತ್ ಥಾಣೆ ಘಟಕದ ಅಧ್ಯಕ್ಷರಾದ ಪೊಲ್ಯ ಉಮೇಶ್ ಡಿ. ಶೆಟ್ಟಿ ನುಡಿದರು.

​ಮೀರಾ ರೋಡ್ ಪೂರ್ವದ ಗಾನಸಾಮ್ರಾಜ್ಞಿ ಲತಾ ಮಂಗೇಶ್ಕರ್ ಸಭಾಗೃಹದ ‘ಶ್ರೀಮತಿ ಲಲಿತಾ ಮತ್ತು ಎಡ್ಮೇರ್ ಶ್ರೀನಿವಾಸ ಆಚಾರ್ಯ ಸಂಸ್ಮರಣಾ ವೇದಿಕೆ’ಯಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮುಂಬಯಿ ಇದರ 80ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

“ಕರ್ನಾಟಕ ಎನ್ನುವ ಹೆಸರಿನಲ್ಲೇ ಒಂದು ಸೌಂದರ್ಯವಿದೆ. ವಿಶ್ವವೇ ಬೆರಗಾಗುವ ಹೊಯ್ಸಳ ವಾಸ್ತುಶಿಲ್ಪ ಹಾಗೂ ಉಡುಪಿ ಕೃಷ್ಣನ ಈ ನಾಡಿನ ಸಂಸ್ಕೃತಿಗೆ ವಿಶ್ವಕರ್ಮ ಸಮಾಜವೇ ಮೂಲ ಕಾರಣಕರ್ತರು. ಸನಾತನ ಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ನಮಗೆ ಅಭಿಮಾನವಿರಬೇಕು. ನಾವು ಪರಭಾಷೆ ಅಥವಾ ಪರ ಜಾತಿಗಳನ್ನು ಅವಮಾನಿಸುವವರಲ್ಲ, ಆದರೆ ನಮ್ಮ ಧರ್ಮವನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ. ವ್ಯಕ್ತಿ ಜಾತಿಯಿಂದ ದೊಡ್ಡವನಾಗದೆ, ತನ್ನ ವ್ಯಕ್ತಿತ್ವ ಮತ್ತು ಗುಣಗಳಿಂದ ಗುರುತಿಸಿಕೊಳ್ಳಬೇಕು,” ಎಂದು ಉಮೇಶ್ ಶೆಟ್ಟಿ ಅಭಿಪ್ರಾಯಪಟ್ಟರು.

​ಬೆಂಗಳೂರಿನ ವಿಪ್ರೋ ಸಂಸ್ಥೆಯ ನಿರ್ದೇಶಕ ಎಸ್. ಪಿ. ಹರಿದಾಸ ಆಚಾರ್ಯ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ, ಸಂಘಟನೆಯಲ್ಲಿ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾಜವನ್ನು ಮತ್ತಷ್ಟು ಸದೃಢಗೊಳಿಸಬೇಕು ಎಂದು ಹಾರೈಸಿದರು.

​ಮೂಡುಬಿದಿರೆಯ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಎಂಡಿ ಡಾ. ಜಿ. ರಾಮಕೃಷ್ಣ ಆಚಾರ್ ಮಾತನಾಡಿ, “ವಿಶ್ವಕರ್ಮ ಸಮಾಜವು ಆರ್ಥಿಕ ಮತ್ತು ರಾಜಕೀಯವಾಗಿ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಭಗವಂತನು ಎಲ್ಲ ಶಕ್ತಿಯನ್ನು ನೀಡಲಿ, ಸಮಾಜದ ಕಾರ್ಯಕ್ರಮಗಳು ನಮ್ಮದೇ ಸ್ವಂತ ಭವನದಲ್ಲಿ ನಡೆಯುವಂತಾಗಲಿ,” ಎಂದು ಆಶಿಸಿದರು.

​ಪ್ರಸಿದ್ಧ ಉದ್ಯಮಿ ಮುಂಡಪ್ಪ ಎಸ್. ಪಯ್ಯಡೆ ಮಾತನಾಡಿ, “ವಿಶ್ವವನ್ನೇ ಸೃಷ್ಟಿಸುವ ಶಕ್ತಿ ಹೊಂದಿರುವ ವಿಶ್ವಕರ್ಮ ಸಮಾಜವು ಮುಂಬಯಿಯಲ್ಲಿ ಸ್ವಂತ ಭವನ ಹೊಂದಲು ಸಂಕಲ್ಪ ಮಾಡಬೇಕು. ಪದಾಧಿಕಾರಿಗಳು ಮತ್ತು ಸದಸ್ಯರು ಒಗ್ಗಟ್ಟಿನಿಂದ ಶ್ರಮಿಸಿ ಸಮಾಜವನ್ನು ಬಲಿಷ್ಠಗೊಳಿಸಬೇಕು,” ಎಂದು ಕರೆ ನೀಡಿದರು.

​ಸಾಧಕರಿಗೆ ಸನ್ಮಾನ ಮತ್ತು ಆಶೀರ್ವಚನ

​ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ಸಾಧಕರಾದ ಎ. ನರಸಿಂಹ, ಮಾಧವ ಎಸ್. ಆಚಾರ್ಯ, ಉಪೇಂದ್ರ ಎ. ಆಚಾರ್ಯ, ಅಶೋಕ್ ಪುರೋಹಿತ್, ವಿಜಯ ಟಿ. ಆಚಾರ್ಯ, ಅರುಣ್ ಪಿ. ಆಚಾರ್ಯ, ರಮೇಶ್ ಎಸ್. ಆಚಾರ್ಯ, ಕುಮರೇಶ್ ಆಚಾರ್ಯ, ಹರೀಶ್ ಜಿ. ಆಚಾರ್ಯ, ಕೆ. ಸತೀಶ್ ಆಚಾರ್ಯ ಮತ್ತು ರವೀಂದ್ರನಾಥ್ ಎಸ್. ಬಸ್ರೂರ್ ಅವರನ್ನು ಸನ್ಮಾನಿಸಲಾಯಿತು.

​ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿ, “ಮೂಲ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮರೆಯದೆ ಮಕ್ಕಳಲ್ಲಿ ಸಮಾಜದ ಬಗ್ಗೆ ಅರಿವು ಮೂಡಿಸಬೇಕು,” ಎಂದು ಹರಸಿದರು.

​ಗಣ್ಯ ಅತಿಥಿಗಳ ನುಡಿ

  • ಸುರೇಶ ಕಾಂಚನ್ (ಗೌರವ ಅಧ್ಯಕ್ಷರು, ಮೊಗವೀರ ಮಹಾಜನ ಸಂಘ ಬಗ್ವಾಡಿ): “ದೇವಲೋಕವನ್ನೇ ಸೃಷ್ಟಿಸಿದ ವಿಶ್ವಕರ್ಮರು ಈ ನಗರದಲ್ಲಿ ಸ್ವಂತ ಭವನ ನಿರ್ಮಿಸಬೇಕು, ಅದಕ್ಕೆ ನಮ್ಮೆಲ್ಲರ ಸಹಕಾರವಿದೆ” ಎಂದರು.
  • ಪ್ರತಾಪ್ ಸರ್ನಾಯಕ್ (ಸಾರಿಗೆ ಸಚಿವರು, ಮಹಾರಾಷ್ಟ್ರ ಸರ್ಕಾರ): “ಕನ್ನಡಿಗರು ತಮ್ಮ ಭಾಷೆ-ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಈ ಭಾಗದಲ್ಲಿ ಕರ್ನಾಟಕ ಭವನ ನಿರ್ಮಾಣ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ” ಎಂದು ಶುಭ ಹಾರೈಸಿದರು.

​ಅಸೋಸಿಯೇಷನ್ ಅಧ್ಯಕ್ಷ ರವೀಶ್ ಆಚಾರ್ಯ ಮಾತನಾಡಿ, 80 ವರ್ಷಗಳಿಂದ ಸಂಘವು ಸಮಾಜದವರನ್ನು ಒಗ್ಗೂಡಿಸುತ್ತಾ ಬಂದಿದೆ ಎಂದು ಹಿರಿಯರ ಸೇವೆಯನ್ನು ಸ್ಮರಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಗಣೇಶ್ ಕುಮಾರ್ ಆಚಾರ್ಯ, ಜೊತೆ ಕಾರ್ಯದರ್ಶಿಗಳಾದ ಪ್ರಸಾದ್ ಆಚಾರ್ಯ, ಸುಧೀರ್ ಜೆ. ಆಚಾರ್ಯ, ಕೋಶಾಧಿಕಾರಿ ಬಾಬುರಾಜ್ ಎಂ. ಆಚಾರ್ಯ, ಜೊತೆ ಕೋಶಾಧಿಕಾರಿ ರವೀಂದ್ರ ಐ. ಪಿ. ಆಚಾರ್ಯ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

​ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಸದಾನಂದ ಆಚಾರ್ಯ ಸ್ವಾಗತಿಸಿದರು. ಪ್ರಸಾದ್ ಆಚಾರ್ಯ ಮತ್ತು ಜಯಶ್ರೀ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಕುಮಾರ್ ಆಚಾರ್ಯ, ಅನಿತಾ ಡಿ. ಆಚಾರ್ಯ, ಜಯಮಾಲಾ ಪೂಜಾ ಆಚಾರ್ಯ, ರಾಜೇಶ್ ಎಸ್. ಆಚಾರ್ಯ ಮತ್ತು ಪ್ರಭಾಕರ್ ಆಚಾರ್ಯ ಅತಿಥಿಗಳನ್ನು ಪರಿಚಯಿಸಿದರು. ಬಾಬುರಾಜ್ ಎಂ. ಆಚಾರ್ಯ ವಂದಿಸಿದರು.

​ಸಾಂಸ್ಕೃತಿಕ ವೈಭವ

​ದಿನವಿಡೀ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ‘ಶ್ರೀ ಕಾಳಿಕಾ ಪುರಾಣ’ ರೂಪಕ, ಅಶೋಕ ಆಚಾರ್ಯ ಕೊಡ್ಯಡ್ಕ ನಿರ್ದೇಶನದ ‘ಕೆಬಿ ಪಿತ್ತಲೆ’ ತುಳು ಪ್ರಹಸನ, ‘ಮಹಿಷಾಸುರ ಮರ್ದಿನಿ’ ಯಕ್ಷಗಾನ ರೂಪಕ, ‘ಭಾರತೀಯ ಸೀರೆ ಸಂಸ್ಕೃತಿ’ ಪ್ರದರ್ಶನ ಹಾಗೂ ‘ಈ ರಾತ್ರೆಗ್ ಪಗೆಲ್ಗ್ ಯಾನ್’ ತುಳು ಹಾಸ್ಯ ನಾಟಕವು ಪ್ರೇಕ್ಷಕರ ಮನರಂಜಿಸಿದವು.

ವರದಿ: ದಿನೇಶ್ ಕುಲಾಲ್



Related posts

ವಿದ್ಯಾದಾಯಿನಿ ಸಭಾ ಫೋರ್ಟ್ ವತಿಯಿಂದ ಗುರುಜಯಂತಿ ಉತ್ಸವಾಚರಣೆ.

Mumbai News Desk

ಕರ್ನಾಟಕ ವಿಶ್ವಕರ್ಮ ಎಸೋಸಿಯೇಶನ್ ಮುಂಬಯಿ, ಭಕ್ತಿ, ಸಡಗರದಿಂದ ಜರಗಿದ ವಿಶ್ವಕರ್ಮ ಮಹೋತ್ಸವ.

Mumbai News Desk

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ: ವೈದ್ಯಕೀಯ ನೆರವು ಹಾಗೂ ವಿದ್ಯಾರ್ಥಿವೇತನ ವಿತರಣೆ ಸಮಾರಂಭ

Mumbai News Desk

ಡೊಂಬಿವಲಿಯಲ್ಲಿ ಜಗಜ್ಯೋತಿ ಕಲಾವೃಂದದ 39ನೇ ವಾರ್ಷಿಕೋತ್ಸವ ಸಂಭ್ರಮ: ಸಾಹಿತಿಗಳಾದ ಪ್ರಜ್ಞಾ ಮತ್ತಿಹಳ್ಳಿ ಹಾಗೂ ತೇಜಾವತಿ ಎಚ್.ಡಿ ಅವರಿಗೆ ಪ್ರತಿಷ್ಠಿತ ಸ್ಮಾರಕ ಪ್ರಶಸ್ತಿ ಪ್ರದಾನ

Mumbai News Desk

ಶ್ರೀ ಕಟೀಲ್ ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ 5ನೇ ವಾರ್ಷಿಕೋತ್ಸವ

Mumbai News Desk

ಕನ್ನಡ ನವತಾರಾ ಕಲಾ ಮಂಡಳಿ ಮಲಾಡ್ (ಪ): 51ನೇ ವಾರ್ಷಿಕ ಮಹಾಪೂಜೆ, ಸಾಧಕರಿಗೆ ಸನ್ಮಾನ ಹಾಗೂ ಯಕ್ಷಗಾನ

Mumbai News Desk