
ಯಕ್ಷಗಾನದ ಮೂಲಕ ಭಾರತೀಯ ಪರಂಪರೆಯನ್ನು ಮಾತ್ರ ಕಾಣಲು ಸಾಧ್ಯ: ವೇ| ಮೂ| ಪೆರ್ಣಂಕಿಲ ಹರಿದಾಸ ಭಟ್
ಚಿತ್ರ ವರದಿ: ದಿನೇಶ್ ಕುಲಾಲ್
ಮುಂಬಯಿ, ಮಾ. 31: ರಾಮಾಭಿವಂದ್ಯಾ ಯಕ್ಷ ಸೇವಾ ಬಳಗ ಮತ್ತು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯಲ್ಲಿ ಸರಣಿ ತಾಳಮದ್ದಲೆಯ 4ನೇ ಕಂತು ‘ಭರತಾಗಮನ’ ಎಂಬ ಕಥಾಭಾಗವು ಮಾರ್ಚ್ 26ರ ರಾಮನವಮಿಯಂದು ವಿದ್ಯಾ ವಿಹಾರ್ನ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ತಾಳಮದ್ದಲೆ ಕಾರ್ಯಕ್ರಮದ ನಡುವೆ ನಡೆದ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ವೇ| ಮೂ| ಪೆರ್ಣಂಕಿಲ ಹರಿದಾಸ ಭಟ್, ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹರಿದಾಸ ಗೋಪಾಲ ಶೆಟ್ಟಿ, ಮುಖ್ಯ ಅತಿಥಿಯಾಗಿ ಬಂಟರ ಸಂಘದ ಕುರ್ಲಾ-ಭಾಂಡುಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಭೂಮಿಕಾ ಶೆಟ್ಟಿ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಠಾಣೆ ಪ್ರಮುಖರಾದ ಪೊಲ್ಯ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುಂಬೈ ನಗರದ ಮಹಿಳಾ ಭಾಗವತೆ ಜಯಲಕ್ಷ್ಮಿ ರಘು ದೇವಾಡಿಗ ಮತ್ತು ಯಕ್ಷಗಾನ ಕಲಾವಿದ ಹಾಗೂ ಸಂಘಟಕ ರಾಘವೇಂದ್ರ ಮೊಗವೀರ ಬಗ್ವಾಡಿ ಅವರನ್ನು ಸನ್ಮಾನಿಸಲಾಯಿತು.
ಇಬ್ಬರು ಕಲಾವಿದರನ್ನು ಸನ್ಮಾನಿಸಿ ಆಶೀರ್ವಚನ ನೀಡಿದ ವೇದಮೂರ್ತಿ ಪೆರ್ಣಂಕಿಲ ಹರಿದಾಸ ಭಟ್ಟರು, “ಮುಂಬೈ ಮಹಾನಗರದ ಇಬ್ಬರು ಕಲಾವಿದರನ್ನು ಗೌರವಿಸಿರುವುದು ಸೀತಾರಾಮರನ್ನು ಪೂಜಿಸಿದಷ್ಟೇ ಆನಂದ ನೀಡುತ್ತಿದೆ. ಪತಿ-ಪತ್ನಿ ಸಮೇತರಾಗಿ ಗೌರವ ಸ್ವೀಕರಿಸಿದ ಭಾಗವತೆ ಜಯಲಕ್ಷ್ಮಿ ರಘು ದೇವಾಡಿಗ ಹಾಗೂ ಕಲಾವಿದ ರಾಘವೇಂದ್ರ ಮೊಗವೀರ ಬಗ್ವಾಡಿ ಅವರ ಸೇವೆ ಶ್ಲಾಘನೀಯ. ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗದ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮವು ಮುಂದಿನ ಜನಾಂಗದ ಭದ್ರ ಬುನಾದಿಯಾದ ಇಂದಿನ ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯ ಬೀಜ ಬಿತ್ತಲು ಸಹಕಾರಿಯಾಗಿದೆ,” ಎಂದರು.

ಮುಂದುವರಿದು ಮಾತನಾಡಿದ ಅವರು, “ರಾಮಾಯಣ ಮಹಾಕಾವ್ಯವು ಮನಸ್ಸಿಗೆ ಶಾಂತಿ ನೀಡುವುದರೊಂದಿಗೆ, ಇಂದಿನ ‘ಭರತಾಗಮನ’ ಪ್ರಸಂಗವು ಅಣ್ಣ-ತಮ್ಮಂದಿರ ಭ್ರಾತೃ ಪ್ರೇಮ ಹೇಗಿರಬೇಕು ಎಂಬ ಸಂದೇಶ ನೀಡುತ್ತದೆ. ಅಣ್ಣನೊಂದಿಗೆ ಸದಾ ನಿಲ್ಲುವ ತಮ್ಮಂದಿರು, ತಮ್ಮಂದಿರನ್ನು ಅರ್ಥೈಸಿ ನಡೆಸುವ ಜೇಷ್ಠ ಅಣ್ಣ—ಹೀಗೆ ತಾಯಿ ತಪ್ಪಿದರೂ ಮಗ ತಪ್ಪಬಾರದು ಎನ್ನುವ ಜೀವನ ಮೌಲ್ಯಗಳನ್ನು ಈ ಪ್ರಸಂಗ ಸಾರುತ್ತದೆ. ಇಂತಹ ಮೌಲ್ಯಗಳನ್ನು ನಾವು ಭಾರತೀಯ ಪರಂಪರೆಯಲ್ಲಿ ಮಾತ್ರ ಕಾಣಲು ಸಾಧ್ಯ,” ಎಂದು ತಿಳಿಸಿದರು.
ಅತಿಥಿ ಭೂಮಿಕಾ ಶೆಟ್ಟಿ ಮಾತನಾಡಿ, “ಇದೊಂದು ಅಪೂರ್ವ ಕಾರ್ಯಕ್ರಮ. ನಮ್ಮ ಸನಾತನ ಪರಂಪರೆಯಲ್ಲಿ ಇತಿಹಾಸ ಮತ್ತು ಪುರಾಣವನ್ನೊಳಗೊಂಡ ರಾಮಾಯಣವು ಜಗತ್ತಿಗೆ ಮಾದರಿ. ಪ್ರಪಂಚದಲ್ಲಿ ಪ್ರೀತಿ-ಪ್ರೇಮದ ಸಂಕೇತ ಎಂದರೆ ಅದು ತಾಜ್ ಮಹಲ್ ಅಲ್ಲ, ಬದಲಾಗಿ ‘ರಾಮ ಸೇತುವೆ’ ಆಗಬೇಕಿತ್ತು,” ಎಂದು ಅಭಿಪ್ರಾಯಪಟ್ಟರು.
ಇನ್ನೋರ್ವ ಅತಿಥಿ ಪೊಲ್ಯ ಉಮೇಶ್ ಶೆಟ್ಟಿ ಮಾತನಾಡಿ, “ಹಿಂದೆ ವಾಸುದೇವ ಮಾರ್ನಾಡ್ ಅವರು ಆಹ್ವಾನ ನೀಡಿದ್ದರೂ ಅನಿವಾರ್ಯ ಕಾರಣಗಳಿಂದ ಬರಲಾಗಿರಲಿಲ್ಲ. ಇಂದು ತಾಳಮದ್ದಲೆ ನೋಡಲೆಂದೇ ಬಂದಿರುವೆ. ಇಲ್ಲಿ ನೀಡಿದ ಗೌರವಕ್ಕೆ ನಾನು ಚಿರಋಣಿ. ಈ ಸರಣಿ ತಾಳಮದ್ದಲೆಯ ಸಮಾರೋಪ ಸಮಾರಂಭವನ್ನು ನನ್ನ ಸಂಪೂರ್ಣ ಸಹಕಾರದೊಂದಿಗೆ ಅದ್ಧೂರಿಯಾಗಿ ನಡೆಸೋಣ,” ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಸಂಯೋಜಕರಾದ ವಾಸುದೇವ ಮಾರ್ನಾಡ್ ನಿರೂಪಿಸಿದರು. ಕನ್ನಡ ಭವನದ ಪ್ರಾಂಶುಪಾಲರಾದ ಅಮೃತಾ ಶೆಟ್ಟಿ ಸ್ವಾಗತಿಸಿ, ಸಂಯೋಜಕ ಸುರೇಶ್ ಶೆಟ್ಟಿ ನಂದ್ರೊಳ್ಳಿ ಸನ್ಮಾನಿತರನ್ನು ಪರಿಚಯಿಸಿದರು. ಸಿ.ಎ. ರಾಜಶ್ರೀ ಜೆ. ಶೆಟ್ಟಿ ವಂದನಾರ್ಪಣೆ ಮಾಡಿದರು.
ಸಭಾ ಕಾರ್ಯಕ್ರಮದ ನಂತರ ತಾಳಮದ್ದಲೆ ಮುಂದುವರಿಯಿತು.
- ಭಾಗವತಿಕೆ: ಜಯಲಕ್ಷ್ಮಿ ರಘು ದೇವಾಡಿಗ.
- ಹಿಮ್ಮೇಳ: ಪ್ರವೀಣ್ ಶೆಟ್ಟಿ ಕಟೀಲು (ಚೆಂಡೆ-ಮದ್ದಲೆ), ಹರೀಶ್ ನಾರಾಯಣ ಸಾಲ್ಯಾನ್, ಪ್ರಥಮ್ ಶೆಟ್ಟಿ.
- ಅರ್ಥಧಾರಿಗಳು: ವಾಸುದೇವ ಮಾರ್ನಾಡ್, ಸುರೇಶ್ ಶೆಟ್ಟಿ ನಂದ್ರೊಳ್ಳಿ, ಟಿ.ಆರ್. ಶೆಟ್ಟಿ, ನಾರಾಯಣ ಕುಂಬಳೆ, ರಾಘವೇಂದ್ರ ಬಗ್ವಾಡಿ, ಅಮೃತಾ ಶೆಟ್ಟಿ (ಕೌಸಲ್ಯೆ), ಸಿ.ಎ. ರಾಜಶ್ರೀ ಶೆಟ್ಟಿ ಮತ್ತು ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ.
ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಯಕ್ಷಗಾನ ಅಭಿಮಾನಿಗಳು ಹಾಗೂ ಕಲಾವಿದರು ಉಪಸ್ಥಿತರಿದ್ದರು.




