
ವಿಟ್ಲ: ಜೀವಭಾವದಲ್ಲಿ ಬೇರೆಯಾದರೂ ದೇವಭಾವದಲ್ಲಿ ರಾಮ-ಆಂಜನೇಯರು ಒಂದಾಗಿದ್ದಾರೆ. ಕುಟುಂಬ ಪ್ರೀತಿಯ ಆದರ್ಶವನ್ನು ರಾಮಾಯಣದಲ್ಲಿ ಕಾಣಬಹುದು. ಶ್ರೀರಾಮನ ಸೇವೆ ಎಂದರೆ ಅದು ರಾಷ್ಟ್ರದ ಸೇವೆಯೇ ಆಗಿದೆ. ಅಂತರಂಗವನ್ನು ಅರಳಿಸುವ ಇಂತಹ ಉತ್ಸವಗಳನ್ನು ನಿರಂತರವಾಗಿ ಕಾಣಲು ಭಾರತದಲ್ಲಿ ಮಾತ್ರ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀ ಕ್ಷೇತ್ರದಲ್ಲಿ ಹನುಮಜ್ಜಯಂತಿ ಮಹೋತ್ಸವದ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ಆಯೋಜಿಸಲಾಗಿದ್ದ ಶ್ರೀಮದ್ ರಾಮಾಯಣ ಮಹಾಯಜ್ಞದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ವೇದಮೂರ್ತಿ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀಮದ್ ರಾಮಾಯಣ ಮಹಾಯಜ್ಞ ಆರಂಭಗೊಂಡು, ನಾಗದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ನಾಗತಂಬಿಲ ಸೇವೆಗಳು ನಡೆದವು. ಮಧ್ಯಾಹ್ನ ಮಹಾಯಜ್ಞದ ಪೂರ್ಣಾಹುತಿ, ಮಹಾಪೂಜೆ ನಡೆದು ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. 144 ಗಂಟೆಗಳ ಕಾಲ ನಿರಂತರವಾಗಿ ಭಗವನ್ನಾಮ ಸಂಕೀರ್ತನೆ ನಡೆಸಿದ ವಿವಿಧ ಭಜನಾ ಮಂಡಳಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಕ್ಷೇತ್ರದ ಸಹಸಂಸ್ಥೆಗಳ ಪ್ರಮುಖರಾದ ವಾಮಯ್ಯ ಬಿ. ಶೆಟ್ಟಿ ಮುಂಬೈ, ಉಷಾ ಕುಮಾರ್ ಶೆಟ್ಟಿ, ಎ. ಸುರೇಶ್ ರೈ, ಶಂಕರ ಶೆಟ್ಟಿ, ಹನುಮಂತಪ್ಪ, ನೀಲಕಂಠಪ್ಪ, ಡಾ. ಅದೀಪ್ ಶೆಟ್ಟಿ ಹಾಗೂ ಅಜಿತ್ ಕುಮಾರ್ ಪಂದಳಂ ಉಪಸ್ಥಿತರಿದ್ದರು. ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ ವಿಶೇಷ ಶ್ರೀ ಹನುಮದ್ವ್ರತ ಪೂಜೆ ನೆರವೇರಿತು. ರೇಣುಕಾ ಎಸ್. ರೈ ಆಶಯಗೀತೆ ಹಾಡಿದರು. ಮಾತೇಶ್ ಭಂಡಾರಿ ಸ್ವಾಗತಿಸಿ, ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಭಂಡಾರಿ ವಂದಿಸಿದರು.




