ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಿಲ್ದಾಣದ ಅಭಿವೃದ್ಧಿ ಹಾಗೂ ಪ್ಲಾಟ್ಫಾರ್ಮ್ ವಿಸ್ತರಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ, ಕರ್ನಾಟಕ ಮತ್ತು ಮುಂಬೈ ನಡುವಿನ ರೈಲು ಸಂಚಾರದಲ್ಲಿ ಮೇ 19ರವರೆಗೆ ಭಾರಿ ವ್ಯತ್ಯಯ ಉಂಟಾಗಲಿದೆ. ಸಿಎಸ್ಎಂಟಿ ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 16 ಮತ್ತು 17ರ ವಿಸ್ತರಣಾ ಕೆಲಸಗಳು ಭರದಿಂದ ಸಾಗುತ್ತಿರುವುದರಿಂದ ರೈಲುಗಳ ಕಾರ್ಯಾಚರಣೆಯಲ್ಲಿ ಬದಲಾವಣೆ ತರಲಾಗಿದ್ದು, ಇದರಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ಕೊಂಚ ತೊಂದರೆಯಾಗುವ ಸಾಧ್ಯತೆಯಿದೆ.
ಕೊಂಕಣ ರೈಲ್ವೆ ಮತ್ತು ದಕ್ಷಿಣ ರೈಲ್ವೆ ಜಂಟಿಯಾಗಿ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಮಂಗಳೂರು ಜಂಕ್ಷನ್ನಿಂದ ಮುಂಬೈಗೆ ತೆರಳುವ ಅತ್ಯಂತ ಜನಪ್ರಿಯ ‘ಮಂಗಳೂರು-ಮುಂಬೈ ಸೂಪರ್ಫಾಸ್ಟ್ ಎಕ್ಸ್ಪ್ರೆಸ್’ (ರೈಲು ಸಂಖ್ಯೆ 12134) ಮೇ 19ರವರೆಗೆ ತನ್ನ ಸಂಚಾರವನ್ನು ಥಾಣೆ ನಿಲ್ದಾಣದಲ್ಲಿಯೇ ಕೊನೆಗೊಳಿಸಲಿದೆ. ಇದರರ್ಥ ಪ್ರಯಾಣಿಕರು ಮುಖ್ಯ ನಿಲ್ದಾಣಕ್ಕೆ ಹೋಗಲು ಥಾಣೆಯಲ್ಲೇ ಇಳಿದು ಉಪನಗರ ರೈಲು (Local Train) ಅಥವಾ ಇತರ ಮಾರ್ಗಗಳನ್ನು ಅವಲಂಬಿಸಬೇಕಾಗುತ್ತದೆ.ಇದಲ್ಲದೆ, ಮಂಗಳೂರು-ಮುಂಬೈ ತೇಜಸ್ ಎಕ್ಸ್ಪ್ರೆಸ್ ಸೇರಿದಂತೆ ಪ್ರಮುಖ ರೈಲುಗಳು ಸಿಎಸ್ಎಂಟಿ ಬದಲಿಗೆ ದಾದರ್ ಮತ್ತು ಥಾಣೆ ನಿಲ್ದಾಣಗಳವರೆಗೆ ಮಾತ್ರ ಸಂಚರಿಸಲಿವೆ. ಏಪ್ರಿಲ್ 27ರಿಂದ ಜಾರಿಗೆ ಬಂದಿರುವ ಈ ಬದಲಾವಣೆಯು ಒಟ್ಟು 23 ದಿನಗಳ ಕಾಲ ಇರಲಿದ್ದು, ಮೇ 19ರವರೆಗೆ ಮುಂದುವರಿಯಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಪರಶುರಾಮ್ ಎಕ್ಸ್ಪ್ರೆಸ್ ಸೇವೆಯಲ್ಲೂ ಭಾಗಶಃ ವ್ಯತ್ಯಯವಾಗಿದ್ದು, ಪ್ರಯಾಣಿಕರು ರೈಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ ಅಥವಾ ಸಹಾಯವಾಣಿ ಸಂಖ್ಯೆಗಳ ಮೂಲಕ ಅಪ್ಡೇಟ್ ಪಡೆದುಕೊಂಡು ಪ್ರಯಾಣ ಬೆಳೆಸಲು ಕೋರಲಾಗಿದೆ.




