ಮುಂಬಯಿ: ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಮಲಾಡ್ ಇದರ 17ನೇ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಮುಂಬರುವ ಆಗಸ್ಟ್ 30ರಂದು ಮಲಾಡ್ ಪೂರ್ವದ ದತ್ತ ಮಂದಿರ ರಸ್ತೆಯಲ್ಲಿರುವ ಶಾರದಾ ಗ್ಯಾನಪೀಠ ಇಂಟರ್ನ್ಯಾಷನಲ್ ಶಾಲೆಯ ಹತ್ತಿರದ ಶ್ರೀ ಸ್ವಾಮಿ ನಾರಾಯಣ ಮಂದಿರ ಸಭಾಗೃಹದಲ್ಲಿ ಜರುಗಲಿದೆ.
ಈ ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಆಗಸ್ಟ್ 3ರಂದು ಮಲಾಡ್ ಪೂರ್ವದಲ್ಲಿರುವ ಸಮಿತಿಯ ಭಜನಾ ಅಭ್ಯಾಸ ಕೇಂದ್ರದಲ್ಲಿ ಬಿಡುಗಡೆ ಮಾಡಲಾಯಿತು. ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಕೆ. ಆಚಾರ್ಯ ಹಾಗೂ ಇತರ ಪದಾಧಿಕಾರಿಗಳು ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಿಸಿದರು.
ಕಾಲಮಿತಿಗೆ ಆದ್ಯತೆ: ನ್ಯಾಯವಾದಿ ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು,
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅಧ್ಯಕ್ಷ ನ್ಯಾಯವಾದಿ ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು, “ಈ ಬಾರಿಯ ಪೂಜಾ ಮಹೋತ್ಸವದಲ್ಲಿ ಪುತ್ತಿಗೆ ಮಠದ ಶ್ರೀಗಳು ಹಾಗೂ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸಂಜೆ 6:00 ಗಂಟೆಗೆ ಸರಿಯಾಗಿ ಪೂಜಾ ವಿಧಿವಿಧಾನಗಳು ಪ್ರಾರಂಭಗೊಳ್ಳಲಿದ್ದು, ಕಾರ್ಯಕ್ರಮವು ನಿಗದಿತ ಸಮಯಕ್ಕೆ ಸರಿಯಾಗಿ ನಡೆಯಲು ಎಲ್ಲರೂ ಸಹಕರಿಸಬೇಕು. ವಿಶೇಷವಾಗಿ ಮಹಿಳೆಯರು ಸೂಕ್ತ ಸಮಯಕ್ಕೆ ಆಗಮಿಸಿ ಪೂಜೆಯ ಯಶಸ್ಸಿಗೆ ಪ್ರೋತ್ಸಾಹ ನೀಡಬೇಕು,” ಎಂದು ವಿನಂತಿಸಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಕೆ. ಆಚಾರ್ಯ ಮಾತನಾಡಿ, “ಆಗಸ್ಟ್ 30ರ ಮಧ್ಯಾಹ್ನ 2:00 ಗಂಟೆಯಿಂದ ಭಜನಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸಂಜೆ 4:00 ಗಂಟೆಗೆ ಸಮಿತಿಯ ಯುವ ವಿಭಾಗದ ಸದಸ್ಯರಿಂದ ವೈಭವದ ‘ನೃತ್ಯರೂಪ ಕನ್ನಡಿಗರು’ ಸಾಂಸ್ಕೃತಿಕ ವೈವಿಧ್ಯ ನೆರವೇರಲಿದೆ. ತದನಂತರ ಸಂಜೆ 6:00 ಗಂಟೆಗೆ ಧಾರ್ಮಿಕ ಪೂಜಾ ವಿಧಿಗಳು ಜರುಗಲಿದ್ದು, ಭಕ್ತಾದಿಗಳು ಹಾಗೂ ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಮಯಕ್ಕೆ ಸರಿಯಾಗಿ ಆಗಮಿಸಬೇಕು,” ಎಂದು ವಿನಂತಿಸಿಕೊಂಡರು.
ಕಾರ್ಯಕ್ರಮದ ಆರಂಭದಲ್ಲಿ ಗೌರವ ಕಾರ್ಯದರ್ಶಿ ಸನತ್ ಪೂಜಾರಿ ಕೆಲ್ಲಪುತ್ತಿಗೆ ಸ್ವಾಗತಿಸಿದರು. ಕೋಶಾಧಿಕಾರಿ ಸುರೇಂದ್ರ ಆಚಾರ್ಯ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಜೊತೆ ಕಾರ್ಯದರ್ಶಿ ಲಕ್ಷ್ಮಣ್ ರಾವ್ ಗಾಣಿಗ, ಮಹಿಳಾ ವಿಭಾಗದ ಕಾರ್ಯದರ್ಶಿ ಶೀಲಾ ಎಂ. ಪೂಜಾರಿ, ಕೋಶಾಧಿಕಾರಿ ನಳಿನಿ ಪಿ. ಕರ್ಕೇರ, ಉಪ ಕಾರ್ಯಾಧ್ಯಕ್ಷೆಯರಾದ ಗೀತಾ ಜೆ. ಮೆಂಡನ್ ಹಾಗೂ ಸಂಧ್ಯಾ ಎಸ್. ಪ್ರಭು ಉಪಸ್ಥಿತರಿದ್ದರು.
ಅಲ್ಲದೆ, ಜೊತೆ ಕಾರ್ಯದರ್ಶಿಗಳಾದ ಭಾರತಿ ಎಸ್. ಆಚಾರ್ಯ, ವಿದ್ಯಾ ಡಿ. ಆಚಾರ್ಯ, ಜೊತೆ ಕೋಶಾಧಿಕಾರಿ ಶೋಭಾ ಎಲ್. ರಾವ್ ಗಾಣಿಗ, ಸಲಹಾ ಸಮಿತಿಯ ಸದಸ್ಯೆ ರತ್ನ ಡಿ. ಕುಲಾಲ್ ಸೇರಿದಂತೆ ಕಾರ್ಯಾಂಗ ಸಮಿತಿ ಹಾಗೂ ಯುವ ವಿಭಾಗದ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.




