
ಸಾಮಾಜಿಕ ಕಳಕಳಿಯ ವೈದ್ಯರು, ಪ್ರಾಧ್ಯಾಪಕರು, ಪತ್ರಕರ್ತ-ಸಾಹಿತಿಗಳು, ಯಶಸ್ವಿ ಸಂಘಟಕರು ಹಾಗೂ ಸಮಾಜ ವಿಜ್ಞಾನಿಯೂ ಆಗಿರುವ ಬಹುಮುಖ ಪ್ರತಿಭೆಯ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅವರಿಗೆ ಗುರು ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ ಪ್ರತಿಷ್ಠಿತ ಈಶ್ವರಾನುಗ್ರಹ ಗೌರವ ಪುರಸ್ಕಾರ’ ನೀಡಿ ಭಕ್ತಿಪೂರ್ವಕವಾಗಿ ಗೌರವಿಸಲಾಯಿತು.

ಶ್ರೀ ಕ್ಷೇತ್ರ ಶಂಕರಪುರದ ಶ್ರೀ ದ್ವಾರಕಾ ಮಠ ಹಾಗೂ ಶ್ರೀ ಸಾಯಿ ಸಾಂತ್ವನ ಮಂದಿರದ ದರ್ಬಾರಿನಲ್ಲಿ ಜರುಗಿದ ಈ ವಿಶೇಷ ಗೌರವ ಸನ್ಮಾನ ಸಮಾರಂಭವನ್ನು ಶ್ರೀ ಸಾಯಿ ಸಾಂತ್ವನ ಮಂದಿರದ ರೂವಾರಿಗಳಾದ ಶ್ರೀ ಸಾಯಿ ಈಶ್ವರ ಗುರೂಜಿ ಹಾಗೂ ಅವರ ಬಳಗ ಅತ್ಯಂತ ವೈಭವದಿಂದ ಆಯೋಜಿಸಿತ್ತು.

ಕಳೆದ ಮೂರು ದಶಕಗಳಿಂದ ವೈದ್ಯಕೀಯ ಕ್ಷೇತ್ರದ ಜೊತೆಗೆ ಸಮಾಜದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಡಾ. ಅಣ್ಣಯ್ಯ ಕುಲಾಲ್ ಅವರ ನಿಷ್ಕಾಮ ಸೇವೆಯನ್ನು ಗುರುತಿಸಿ ಈ ಗೌರವವನ್ನು ಸಮರ್ಪಿಸಲಾಗಿದೆ. ಇವರ ನಿಸ್ವಾರ್ಥ ಸಮಾಜಸೇವೆಯನ್ನು ಪರಿಗಣಿಸಿ ಈಗಾಗಲೇ ರಾಷ್ಟ್ರ ಮಟ್ಟದ ಅತ್ಯುನ್ನತ ‘ಡಾ. ಬಿ. ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ’ ಹಾಗೂ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ,’ದೇವರಾಜ ಅರಸು’ ಪುರಸ್ಕಾರ ಲಭಿಸಿರುವುದು ಇವರ ಸೇವಾ ನಿಷ್ಠೆಗೆ ಸಾಕ್ಷಿಯಾಗಿದೆ.
ಮಂದಿರದ ಸಭಾಂಗಣದಲ್ಲಿ ನಡೆದ ಈ ಅಪರೂಪದ ಕ್ಷಣಕ್ಕೆ ಮಂದಿರದ ಧರ್ಮದರ್ಶಿಗಳು, ದಾನಿಗಳು ಹಾಗೂ ನೂರಾರು ಸಾಯಿ ಭಕ್ತಾದಿಗಳು ಸಾಕ್ಷಿಯಾದರು. ಈ ಮಂಗಲಕರ ಸಮಾರಂಭದಲ್ಲಿ ಶ್ರೀ ಸಾಯಿ ಈಶ್ವರ ಗುರೂಜಿ ಅವರ ದಿವ್ಯ ಉಪಸ್ಥಿತಿಯೊಂದಿಗೆ ಶ್ರೀಮತಿ ವೀಣಾ ಶೆಟ್ಟಿ, ಶ್ರೀಮತಿ ಗೀತಾಂಜಲಿ ಸುವರ್ಣ, ವಿನೋದ ಜೋಗಿ, ಪ್ರಗತಿಪರ ಕೃಷಿಕ, ಸಮಾಜ ಸೇವಕ, ಜಯಕರ ಪೂಜಾರಿ ಹೆಜಮಾಡಿ ಸೇರಿದಂತೆ ಹಲವು ಪ್ರಮುಖ ಗಣ್ಯರು ಭಾಗವಹಿಸಿ, ಡಾ. ಕುಲಾಲ್ ಅವರ ಮುಂದಿನ ಸಮಾಜಮುಖಿ ಕಾಯಕಕ್ಕೆ ಭಾವಪೂರ್ಣ ಶುಭ ಹಾರೈಸಿದರು.





