.
ಪಡುಬಿದ್ರಿ ನಡಿಪಟ್ನ ಮೊಗವೀರ ಸಭಾ ಮುಂಬೈ ಇದರ ಮಹಿಳಾ ವಿಭಾಗದ ಆಶ್ರಯದಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಚರಣೆ ‘ಆಟಿಡೊಂಜಿ ಕೂಟ’ ಕಾರ್ಯಕ್ರಮವು ದಿನಾಂಕ 1-08.2026 ರಂದು ಮುಂಬೈನ ಬೊರಿವಲಿ ಯ ವಝಿರಾ ನಾಕಾ ದಲ್ಲಿ ರುವ ರೈಲ್ ನಗರ್ ಸಮಾಜ ಮಂದಿರ ಹಾಲ್ ನಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. ಆಟಿ ತಿಂಗಳಿನ ಕಷ್ಟ-ಕಾರ್ಪಣ್ಯಗಳನ್ನು ಮರೆತು, ಯುವ ಪೀಳಿಗೆಗೆ ನಮ್ಮ ನೆಲದ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಮಹಿಳಾ ವಿಭಾಗದ ಸದಸ್ಯೆಯರು ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮವು, ಪ್ರವಾಸೀ ನೆಲದಲ್ಲೂ ನಮ್ಮ ಹೆಮ್ಮೆಯ ತುಳುನಾಡಿನ ಸಂಸ್ಕೃತಿ ಮತ್ತು ಸಭೆಯ ಒಗ್ಗಟ್ಟನ್ನು ವೃದ್ಧಿಸುವಲ್ಲಿ ಯಶಸ್ವಿಯಾಯಿತು.

ಈ ಆಟಿ ಕೂಟದ ಪ್ರಮುಖ ಆಕರ್ಷಣೆಯಾಗಿದ್ದುದೇ ಪ್ರಕೃತಿ ಸಿದ್ಧ ಆಹಾರ ಪದಾರ್ಥಗಳು. ಮಹಿಳಾ ವಿಭಾಗದ ಸದಸ್ಯೆಯರು ಅತ್ಯಂತ ಉತ್ಸಾಹದಿಂದ ನೈಸರ್ಗಿಕ ಸೊಪ್ಪು ಹಾಗೂ ತರಕಾರಿಗಳಿಂದ ತಯಾರಿಸಿದ ವಿವಿಧ ಬಗೆಯ ಪೌಷ್ಟಿಕಯುಕ್ತ ಖಾದ್ಯಗಳನ್ನು ಸಿದ್ಧಪಡಿಸಿದ್ದರು.
ಆಹಾರ ವೈವಿಧ್ಯತೆಯ ಜೊತೆಗೆ ಮಹಿಳಾ ವಿಭಾಗದ ಸದಸ್ಯೆರಿಂದ ತುಳುನಾಡಿನ ಜನಪದ ಕಲೆಗಳ ಮತ್ತು ವಸ್ತುಗಳ ಪ್ರದರ್ಶನ, ಪಾಡ್ದನ, ಗಾಯನ, ಶ್ರೀಮತಿ ನಳಿನಿ ಕರ್ಕೇರ ರ ಒಗಟು ಮತ್ತು ಕುಮಾರಿ ದಿಶಾ ನಾರಾಯಣ್ ಕಾಂಚನ್ ಅವರ ತುಳುನಾಡಿನ ಸಾಂಸ್ಕೃತಿಕ ನೃತ್ಯಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಮುಂಬೈ ಸಭೆಯ ಅಧ್ಯಕ್ಷರಾದ ಶ್ರೀ ಜನಾರ್ಧನ್.ಜಿ. ಮೆಂಡನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಇಂತಹ ಕಾರ್ಯಕ್ರಮಗಳು ನಮ್ಮ ಸಭೆಯ ಒಗ್ಗಟ್ಟುಅನ್ಯೋನ್ಯತೆ ಇನ್ನಷ್ಟು ಬಲಗೊಳ್ಳುತ್ತದೆ ಎಂದರು. ಕಾಪು ಮೊಗವೀರ ಸಭಾ ಮುಂಬೈ ಇದರ ಅಧ್ಯಕ್ಷ ಸತೀಶ್ ಕರ್ಕೇರ ಆಟಿ ತಿಂಗಳ ಮಹತ್ವದ ಬಗ್ಗೆ ಮಾತನಾಡಿ, “ಆಟಿ ತಿಂಗಳು ಎಂದರೆ ಕೇವಲ ತಿನ್ನುವ ಹಬ್ಬವಲ್ಲ. ಇದು ನಮ್ಮ ಪೂರ್ವಜರು ಮಳೆಗಾಲದ ರೋಗರುಜಿನಗಳಿಂದ ದೂರವಿರಲು ಕಂಡುಕೊಂಡ ಪ್ರಕೃತಿ ಚಿಕಿತ್ಸಾ ಪದ್ಧತಿ. ಮುಂಬೈನಂತಹ ಮಹಾನಗರದಲ್ಲೂ ನಮ್ಮ ತಾಯಂದಿರು ಮತ್ತು ಸೋದರಿಯರು ಒಟ್ಟಾಗಿ ಸೇರಿ ನಮ್ಮ ಮೂಲ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಹಸ್ತಾಂತರಿಸುವ ಈ ಪ್ರಯತ್ನ ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು. ಮತ್ತು ಆಟಿ ಕಳೆಂಜ ದ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಪಡುಬಿದ್ರಿ ನಡಿಪಟ್ನ ಮೊಗವೀರ ಸಭಾದ ಗೌರವ ಅಧ್ಯಕ್ಷರಾದ ಎಂ .ಟಿ. ಪುತ್ರನ್, ಉಪಾಧ್ಯಕ್ಷ ಶಂಕರ್ ಪುತ್ರನ್ ಆಟಿ ತಿಂಗಳಿನ ಮಹತ್ವದ ಬಗ್ಗೆ ಮಾತನಾಡಿದರು. ಕಾರ್ಯದರ್ಶಿ ತೇಜಪಾಲ್ ಪುತ್ರನ್, ಕೋಶಾಧಿಕಾರಿ ಭರತ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಶ್ರೀಮತಿ ಹೀರಾ ಡಿ ಶ್ರೀಯಾನ್ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು. ಸಾವಿತ್ರಿ ರೋಹಿದಾಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಾಂಪ್ರದಾಯಿಕ ಶೈಲಿಯ ಭೋಜನ ದ ವ್ಯವಸ್ಥೆ ಮಾಡಲಾಗಿತ್ತು.




