29.2 C
Mumbai
July 11, 2026
Mumbai News Kannada
ಸುದ್ದಿ

ಭಟ್ಕಳದಲ್ಲಿ ಮಹಾ ದುರಂತ: ನದಿಯಲ್ಲಿ ಮಲವಿ ಹೆಕ್ಕಲು ಹೋದ ಎಂಟು ಮಹಿಳೆಯರು ನೀರು ಪಾಲು







ಭಟ್ಕಳ ತಾಲೂಕಿನ ಶಿರಾಲಿ ಸಮೀಪದ ತಟ್ಟಿಹಕ್ಲು ಪ್ರದೇಶದ ವೆಂಕಟಾಪುರ ನದಿಯಲ್ಲಿ ಮಲವಿ (ಕಪ್ಪೆಚಿಪ್ಪು) ಹೆಕ್ಕಲು ಹೋಗಿದ್ದ ಮಹಿಳೆಯರಲ್ಲಿ ಎಂಟು ಜನರು ನೀರಿನಲ್ಲಿ ಮುಳುಗಿ ಮೃತಪಟ್ಟ ಅತ್ಯಂತ ದಾರುಣ ಮತ್ತು ಘನಘೋರ ದುರಂತ ರವಿವಾರ (ಮೇ 24) ನಡೆದಿದೆ.
ರವಿವಾರ ಬೆಳಿಗ್ಗೆ ಶಿರಾಲಿಯ ಸಾರದಹೊಳೆಯ ನಿವಾಸಿಗಳೆನ್ನಲಾದ ಒಟ್ಟು 14 ಜನರು ಒಟ್ಟಾಗಿ ವೆಂಕಟಾಪುರ ನದಿಗೆ ಮಲವಿ ಹೆಕ್ಕಲು ಹೋಗಿದ್ದರು. ಇವರು ನದಿಯಲ್ಲಿ ಮಲವಿ ಆರಿಸುತ್ತಿದ್ದ ಸಂದರ್ಭದಲ್ಲೇ ಸಮುದ್ರದ ಉಬ್ಬರದಿಂದಾಗಿ (ಭರತ) ನದಿಯಲ್ಲಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಏರತೊಡಗಿದೆ. ಇದರ ಅರಿವಿಲ್ಲದೆ ಕೆಲಸದಲ್ಲಿ ಮುಳುಗಿದ್ದ ಮಹಿಳೆಯರು ಮರಳಿ ದಡಕ್ಕೆ ಬರುವಷ್ಟರಲ್ಲಿ ನದಿಯ ಆಳವಾದ ನೀರಿನ ಸುಳಿಗೆ ಸಿಲುಕಿದ್ದಾರೆ. ಈ ಘೋರ ದುರಂತದಲ್ಲಿ 8 ಮಂದಿ ಮಹಿಳೆಯರು ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡರೆ, ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ. ಸ್ಥಳದಲ್ಲಿದ್ದ ಮೂವರು ಮಹಿಳೆಯರನ್ನು ರಕ್ಷಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.
ಭಟ್ಕಳದ ಇತಿಹಾಸದಲ್ಲೇ ಇದೊಂದು ಅತ್ಯಂತ ದೊಡ್ಡ ಹಾಗೂ ಕರುಣಾಜನಕ ದುರಂತವಾಗಿದ್ದು, ಮೃತಪಟ್ಟ ಮಹಿಳೆಯರೆಲ್ಲರೂ ಪರಸ್ಪರ ಹತ್ತಿರದ ಸಂಬಂಧಿಕರು ಎಂದು ತಿಳಿದುಬಂದಿದೆ. ಎಲ್ಲರೂ ಒಂದೇ ಕುಟುಂಬ ಹಾಗೂ ನೆರೆಹೊರೆಯವರಾಗಿದ್ದು, ಒಟ್ಟಿಗೆ ಹೋಗಿ ಇಂತಹ ಘೋರ ದುರಂತಕ್ಕೆ ಈಡಾಗಿರುವುದು ಇಡೀ ತಾಲೂಕನ್ನೇ ತಲ್ಲಣಗೊಳಿಸಿದೆ ಮತ್ತು ಇಡೀ ಗ್ರಾಮವೇ ಬೆಚ್ಚಿಬೀಳುವಂತೆ ಮಾಡಿದೆ.
ಸದ್ಯ ಮೃತದೇಹಗಳನ್ನು ಇಲ್ಲಿನ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಆವರಣಕ್ಕೆ ಧಾವಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಭಟ್ಕಳ ತಾಲೂಕು ಶೋಕಸಾಗರದಲ್ಲಿ ಮುಳುಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಸ್ಪತ್ರೆಯ ಶವಾಗಾರದತ್ತ ಭೇಟಿ ನೀಡುತ್ತಿದ್ದಾರೆ. ಆಸ್ಪತ್ರೆಯ ಮುಂಭಾಗದಲ್ಲಿ ನೆರೆದಿರುವ ಜನಸ್ತೋಮ ಹಾಗೂ ಮೃತರ ಕುಟುಂಬದವರ ಗೋಳು ಎಂತಹ ಕಠಿಣ ಹೃದಯವನ್ನೂ ಕರಗಿಸುವಂತಿದೆ. ಸ್ಥಳದಲ್ಲಿ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಮೊಕ್ಕಾಂ ಹೂಡಿದ್ದು, ನಾಪತ್ತೆಯಾದ ಇಬ್ಬರಿಗಾಗಿ ತೀವ್ರ ಹುಡುಕಾಟ ಮುಂದುವರಿಸಿದ್ದಾರೆ.



Related posts

ಮಹಾರಾಷ್ಟ್ರದಲ್ಲಿ ಈದ್ ಮಿಲಾದ್ ರಜೆ ಸೆ.16 ರ ಬದಲು ಸೆ. 18ಕ್ಕೆ.

Mumbai News Desk

ಶಬರಿಮಲೆ ಯಾತ್ರೆಗೆ ಈ ವರ್ಷದಿಂದ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

Mumbai News Desk

ತೊಕ್ಕೊಟ್ಟು ಸಾಯಿ ಪರಿವಾರ್ ನ ಆಹಾರ ಸಾಮಗ್ರಿ‌ ಕಿಟ್ ಸ್ವೀಕರಿಸಿದ ನಿಜವಾದ ಅಶಕ್ತ ಬಂದುಗಳು, ಧನ್ಯತಾ ಭಾವ, ಸಾಯಿ ಸೇವೆಗೆ ಕೃತಜ್ಞತೆ. ತೆನೆಗೆ ಹಾಲೆರೆದು ಉದ್ಘಾಟಿಸಿದ ಜೀವ ರಕ್ಷಕ ಈಶ್ವರ್ ಮಲ್ಪೆ

Mumbai News Desk

ಮಹಾರಾಷ್ಟ್ರ ಪ್ರದೇಶ ಕಿಸನ್ ಕಾಂಗ್ರೆಸ್ ಸಮಿತಿಯ ಕಾರ್ಯಧ್ಯಕ್ಷರಾಗಿ ಸುರೇಶ್ ಶೆಟ್ಟಿ ಯೆಯ್ಯಾಡಿ ನಿಯುಕ್ತಿ.

Mumbai News Desk

ಮುಲ್ಕಿ ಹೊಸ ಆಂಗಣ ತಿಂಗಳ ಬೆಳಕು ಕಾರ್ಯಕ್ರಮ, ದೈವ ಪಾತ್ರಿ ಮಾನಂಪಾಡಿ ಯಾದವ ಪೂಜಾರಿಗೆ ಸನ್ಮಾನ.

Mumbai News Desk

ಫರಂಗಿಪೇಟೆ : ಬಾಲಕ ನಾಪತ್ತೆ ಪ್ರಕರಣ, ನಾಳೆ (ಶನಿವಾರ ) ಫರಂಗಿಪೇಟೆ ಬಂದ್

Mumbai News Desk