
ಚಿತ್ರ ಹಾಗೂ ಸುದ್ದಿ : ಪಿ.ಆರ್.ರವಿಶಂಕರ್
ಮುಂಬೈ News : 21.05.2026
ಶ್ರೀ ಸಿದ್ಧಿವಿನಾಯಕ ಮಂದಿರದ ಮಾಜಿ ಟ್ರಸ್ಟಿ ಹಾಗೂ ನೇಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ( ಎಸ್.ಪಿ.)ಮಹಾರಾಷ್ಟ್ರ ರಾಜ್ಯದ ಪ್ರಧಾನ ಕಾರ್ಯದರ್ಶಿಯಾಗಿರುವ ನಿತಿನ್ ಕದಮ್ ನೇತೃತ್ವದಲ್ಲಿನ ‘ ನಿತಿನ್ ಇಂದಿರಾ ವಿಷ್ಣು ಕದಮ್ ‘ ಹೆಸರಲ್ಲಿ ಟ್ರೆಂಡ್ ಸೆಟ್ಟರ್ಸ್ ಸಂಸ್ಥೆಯು , ಮುಂಬೈಯಲ್ಲಿನ ಶೀತಲ್ ಲೋಢಾ ಫೌಂಡೇಶನ್ ಇದರ ಸಹಯೋಗದೊಂದಿಗೆ ಹೊಸತಾಗಿ ನಿರ್ಮಿಸಿರುವ ಅತ್ಯಾಧುನಿಕವಾದ ಹೆರಿಗೆ ವಾರ್ಡ್ ಇದೇ ಮೇ ತಿಂಗಳ ತಾ.21 ರಂದು ಲೋಕಾರ್ಪಣೆಗೊಂಡಿತು.

ಮುಂಬೈ ನ ಸರ್. ಜೆ ಜೆ ಆಸ್ಪತ್ರೆಯ ಬಾಳರಾಮ್ ಕಟ್ಟಡದ ಮೊದಲನೆಯ ಮಹಡಿಯಲ್ಲಿ ನೂತನವಾಗಿ ನಿರ್ಮಿಸಿದ ಅತ್ಯಾಧುನಿಕ ವ್ಯವಸ್ಥೆಯುಳ್ಳ ಸುಸಜ್ಜಿತ ಹೆರಿಗೆ ವಾರ್ಡ್ ನಲ್ಲಿ ಶುಭಾರಂಭದ ನಿಮಿತ್ತ ಬೆಳಿಗ್ಗೆ ಶ್ರೀ ಗಣೇಶ ಪೂಜೆಯು ಜರಗಿತು.
ಈ ಸಂದರ್ಭದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ನಿತಿನ್ ಕದಮ್ ಅವರ ಆಪ್ತವರ್ಗದವರು ಉಪಸ್ಥಿತರಿದ್ದರು. ಬೊಯಿಸರ್ ನ ಸ್ವಾಮಿ ನಿತ್ಯಾನಂದ ಮಂದಿರದ ವಿಶ್ವಸ್ಥರು ಹಾಗೂ ಉದ್ಯಮಿಗಳಾದ ಶ್ರೀ ಸತ್ಯಾ ಕೋಟ್ಯಾನ್ ಮಾತನಾಡಿ ” ಆಪ್ತ ಮಿತ್ರರಾದ ನಿತಿನ್ ಕದಮ್ ಅವರ ಸಮಾಜ ಸೇವಾ ಕಾರ್ಯಗಳನ್ನು ಹಲವು ವರ್ಷಗಳಿಂದ ಗಮನಿಸುತ್ತಾ ಬಂದಿರುವೆನು. ಕೋವಿಡ್ ಸಮಯದಲ್ಲಿ ರೋಗಿ ಹಾಗೂ ಚಿಕಿತ್ಸಕ ವೈದ್ಯರಿಗೆ ಅಗತ್ಯವಿರುವ ಪ್ರೊಟೀನ್ ಬಾರ್ , ಎನ್ 95 ಮಾಸ್ಕ್, ಪಿ ಪಿ ಸೂಟ್ , ಡೆಡ್ ಬಾಡಿ ಬ್ಯಾಗ್ ಸೇರಿದಂತೆ ಲಕ್ಷಾಂತರ ಜೀವನಾವಶ್ಯ ವಸ್ತುಗಳನ್ನು ಉಚಿತವಾಗಿ ಹಂಚಿ ತಮ್ಮ ಮಾನವೀಯತೆ ಮೆರೆದಿದ್ದರು.

ಕಳೆದ ಬಾರಿ ಜೆ ಜೆ ಆಸ್ಪತ್ರೆಯ ಇದೇ ಮಹಡಿಯಲ್ಲಿ ನವಜಾತ ಶಿಶುಗಳಿಗೋಸ್ಕರ ಅತ್ಯಾಧುನಿಕ ನ್ಯೂ ಬೋರ್ನ್ ಐ ಸಿ ಯು ವಾರ್ಡ್ ಒಂದನ್ನು ನಿರ್ಮಿಸಿ ವೈದ್ಯಕೀಯ ಸೇವೆಗೆ ಅರ್ಪಿಸಿದ್ದನ್ನು ನೋಡಿರುತ್ತೇವೆ.
ಇಂದು ಗುರು ಪುಷ್ಯಾಮೃತ ಯೋಗವಿದ್ದು ಶ್ರೀಗಣೇಶ ಪೂಜೆಯೊಂದಿಗೆ ಲೋಕಾರ್ಪಣೆಗೊಂಡ ಫೈವ್ ಸ್ಟಾರ್ ಅನುಕೂಲತೆಯುಳ್ಳ ಈ ಸುಸಜ್ಜಿತ ಅತ್ಯಾಧುನಿಕ ಹೆರಿಗೆ ವಾರ್ಡ್ ಇಲ್ಲಿಗೆ ಭರವಸೆ ಇಟ್ಟುಆಸ್ಪತ್ರೆಗೆ ಬರುವ ಅಸಂಖ್ಯ ಮಾತೆಯಂದಿರಿಗೆ ವರದಾನವಾಗಲಿದ್ದು , ನಿತಿನ್ ಕದಮ್ ಅವರು ಪ್ರಚಾರವಿಲ್ಲದೆಯೇ ಮಾಡುವ ಈ ಮಹಾನ್ ಸೇವಾಕಾರ್ಯಗಳು ಇತರರಿಗೂ ಮಾದರಿಯಾಗಿವೆ.” ಎಂದು ಅಭಿನಂದಿಸಿದರು.
ಉಪಸ್ಥಿತರಿದ್ದ ಮುಂಬೈ ಫೋರ್ಟ್ ಮಹೇಶ ಲಂಚ್ ಹೋಮ್ ನ ಮಹೇಂದ್ರ ಕರ್ಕೆರಾ ” ಕೆರೆಯ ನೀರನ್ನು ಕೆರೆಗೆ ಚೆಲ್ಲಿ ” ಎಂಬಂತೆ ಯಾವುದೇ ಅಬ್ಬರ , ಪ್ರಚಾರವಿಲ್ಲದೆಯೇ ಮನವೀಯತೆಯ ಔದಾರ್ಯ ಮೆರೆಯುವ ನಿತಿನ್ ಕದಮ್ ಇವರಿಂದ ಭವಿಷ್ಯದಲ್ಲಿಯೂ ಇಂತಹ ಹಲವು ಸತ್ಕಾರ್ಯಗಳು ಜರಗಲಿ ” ಎಂದು ಹಾರೈಸಿದರು.
ನೂತನ ಹೆರಿಗೆ ವಾರ್ಡ್ ನಲ್ಲಿ ಅಳವಡಿಸಿದ ನ್ಯೂ ಬೋರ್ನ್ ವಾರ್ಮ್ ರೂಮ್ , ಅತ್ಯಾಧುನಿಕ ಡೆಲಿವರಿ ಬೆಡ್ ಸಿಸ್ಟಮ್ ಮತ್ತು ಇತರ ಹಲವಾರು ಆಧುನಿಕ ಪಾಲಿಕಾರ್ಬೋನೇಟ್ ಉಪಕರಣಗಳ ಬಗ್ಗೆ ಮಾಹಿತಿ ನೀಡಿದ ನಿತಿನ್ ಕದಮ್ ”
ಬದುಕು ರೂಪಿಸಿದ ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ನೀಡುವ ಒಂದು ತುಡಿತ ನಮ್ಮಲ್ಲಿತ್ತು. ಯಾವುದೇ ಜಾತಿ , ಮತ ಭೇದವಿಲ್ಲದೆಯೇ ಮಾನವ ವರ್ಗಕ್ಕೆ ಏನಾದರೂ ಕೊಡುಗೆಯನ್ನು ನೀಡುತ್ತಾ ನಮ್ಮ ಉದ್ದೇಶವನ್ನು ಪೂರ್ಣಗೊಳಿಸುತ್ತಾ ಇದ್ದೇನೆ. ಇದಕ್ಕೆ ಸಹೃದಯಿ ಸ್ನೇಹಿತರ ಬೆಂಬಲವೂ ಧಾರಾಳವಾಗಿ ದೊರಕುತ್ತಿದೆ. ಕೇವಲ 20 ರುಪಾಯಿ ವೆಚ್ಚದಲ್ಲಿ ಇಲ್ಲಿನ ವೈದ್ಯಕೀಯ ಚಿಕಿತ್ಸೆಯು ಎಲ್ಲರಿಗೂ ಲಭಿಸುತ್ತಿದೆ ” ಎಂದು ನುಡಿದರು .
ಈ ಸಂದರ್ಭದಲ್ಲಿ ಜೆ.ಜೆ. ಆಸ್ಪತ್ರೆಯ ನಿರ್ದೇಶಕರಾದ ಡಾ • ಚಂದನ್ ವಾಲ , ಮೇಟ್ರನ್ಸ್ , ವಿಭಾಗೀಯ ಮುಖ್ಯಸ್ಥ ವೈದ್ಯರು , ದಾದಿಯರು , ಇತರ ಸಿಬ್ಬಂದಿ ವರ್ಗದವರು ಮತ್ತು ಸಮಾಜ ಸೇವಕಿ ಶ್ರೀಮತಿ ಪ್ರಪುಲ್ಲಾ ಜೆ. ಶೆಟ್ಟಿ ಮತ್ತು ಇತರ ಆಮಂತ್ರಿತ ಗಣ್ಯರು ಉಪಸ್ಥಿತರಿದ್ದರು.
ಸುದ್ದಿ ಮತ್ತು ವಿವರ :
ಪಿ.ಆರ್.ರವಿಶಂಕರ್
8483980035




