
ಮುಂಬಯಿ: ಶ್ರೀ ನಾರಾಯಣ ಗುರು ಭಜನಾ ಮಂಡಳಿಯ ಸಾಂತಾಕ್ರೂಜ್ ಘಟಕದ ವತಿಯಿಂದ ಮೇ 30 ರಂದು ಕಲಿನಾದ ಭಗವತಿ ದೇವಸ್ಥಾನದಲ್ಲಿ ಭಜನಾ ಸಂಕೀರ್ತನ ಕಾರ್ಯಕ್ರಮ ಜರುಗಿತು. ಘಟಕದ ಕಾರ್ಯಾಧ್ಯಕ್ಷರಾದ ರವೀಂದ್ರ ಶಾಂತಿ, ಮಂಡಳಿಯ ಗೌರವಾನ್ವಿತ ಪ್ರಧಾನ ಕಾರ್ಯದರ್ಶಿ ಕೇಶವ್ ಪೂಜಾರಿ ಮತ್ತು ಕೋಶಾಧಿಕಾರಿ ಮಹೇಶ್ ಕಾರ್ಕಳ ಇವರುಗಳ ಮುಂದಾಳತ್ವದಲ್ಲಿ ಈ ಭಜನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸಾಂತಾಕ್ರೂಜ್ ಘಟಕದ ಈ ಪ್ರಥಮ ಭಜನಾ ಸಂಕೀರ್ತನವನ್ನು ಭಗವತಿ ಕ್ಷೇತ್ರದ ಮೊಕ್ತೇಸರರಾದ ಕುಮಾರ್ ಸ್ವಾಮಿ, ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ, ನಿರ್ದೇಶಕರುಗಳಾದ ಗಂಗಾಧರ್ ಜೆ. ಪೂಜಾರಿ ಹಾಗೂ ಮೋಹನ್ ಜಿ. ಪೂಜಾರಿ ಮತ್ತು ಬಿಜೆಪಿ ಕರ್ನಾಟಕ ಸೆಲ್ನ ಅಧ್ಯಕ್ಷರಾದ ಶೈಲೇಂದ್ರ ಸುವರ್ಣ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಭಗವತಿ ದೇವಸ್ಥಾನದ ಪರವಾಗಿ ಶ್ರೀ ಕುಮಾರ್ ಸ್ವಾಮಿಯವರು ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ಹಾಗೂ ಬ್ಯಾಂಕಿನ ನಿರ್ದೇಶಕರುಗಳಿಗೆ ಶಾಲು ಹೊದಿಸಿ, ಫಲ-ಪುಷ್ಪ ಮತ್ತು ಪ್ರಸಾದ ನೀಡಿ ಗೌರವಿಸಿದರು.

ಭಜನಾ ಸಂಕೀರ್ತನೆಯಲ್ಲಿ ಸಾಂತಾಕ್ರೂಜ್ ಪರಿಸರದ ಸಂಘಟಕರುಗಳಾದ ಉಮೇಶ್ ಕಾಪು, ದಿನೇಶ್ ಅಮೀನ್, ಸುಭಾಷ್ ಮಾಬ್ಯಾನ್, ಸುರೇಶ್ ಸುವರ್ಣ, ಶ್ರೀಮತಿ ಪ್ರೇಮ ಕೋಟ್ಯಾನ್, ಶ್ರೀಮತಿ ಸುಮಾ ಹಾಗೂ ಜಯ ಸಿ. ಸುವರ್ಣ ಅವರ ಅಭಿಮಾನಿಗಳು ಮತ್ತು ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಶ್ರೀ ನಾರಾಯಣ ಗುರು ಭಜನಾ ಮಂಡಳಿಯ ಪರವಾಗಿ ಶ್ರೀ ಕುಮಾರ್ ಸ್ವಾಮಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಮಹಾ ಆರತಿಯ ನಂತರ ಭಕ್ತಾದಿಗಳೆಲ್ಲರಿಗೂ ಅನ್ನಪ್ರಸಾದ ವಿತರಣೆ ಮಾಡಲಾಯಿತು.




