
ಸರಣಿ ಕಾರ್ಯಕ್ರಮ ಶ್ರೀರಾಮನಿಗೆ ಸಂದ ಪೂಜೆ: ಹರಿದಾಸ ಭಟ್
ಮುಂಬಯಿ ನಗರದಲ್ಲಿ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗದ ವತಿಯಿಂದ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಜಂಟಿ ಆಯೋಜನೆಯಲ್ಲಿ ಶ್ರೀ ರಾಮ ಕಥಾ ಹೃದಯ ಸರಣಿ ತಾಳಮದ್ದಳೆಯ ದಶಮ ಪ್ರಸ್ತುತಿ ‘ಸೀತಾನ್ವೇಷಣೆ’ ಮತ್ತು ಸಾಧಕ ಕಲಾವಿದರ ಗೌರವಾರ್ಪಣೆ ಕಾರ್ಯಕ್ರಮವು ಜೂನ್ 26 ರಂದು ವಿದ್ಯಾವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ಮಂದಿರದ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರು ಹಾಗೂ ಪ್ರಸಂಗಕರ್ತರಾದ ಕೊಲ್ಯಾರು ರಾಜು ಶೆಟ್ಟಿ, ಎಂ. ಟಿ. ಪೂಜಾರಿ, ಕಲಾವಿದರುಗಳಾದ ನ್ಯಾಯವಾದಿ ಗೀತಾ ಆರ್. ಎಲ್. ಭಟ್ ಮತ್ತು ನೇಪಥ್ಯ ಕಲಾವಿದ ಕೃಷ್ಣ ಬಂಗೇರ ದಂಪತಿಗಳನ್ನು ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಸ್ಮರಣಿಕೆ ಮತ್ತು ರಾಮಾಯಣ ಗ್ರಂಥವನ್ನಿತ್ತು ಆತ್ಮೀಯವಾಗಿ ಗೌರವಿಸಲಾಯಿತು.

ಕಲಾವಿದರನ್ನು ಸನ್ಮಾನಿಸಿ ಮಾತನಾಡಿದ ಹರಿದಾಸ ಭಟ್ ಅವರು, “ಇದೊಂದು ವಿಶೇಷ ಕಾರ್ಯಕ್ರಮ, ರಾಮಾಭಿವಂದ್ಯ ಯಕ್ಷ ಸೇವಾ ಬಳಗದ ಕಲಾ ಸೇವೆ ಅನುಪಮವಾಗಿದೆ. ಮುಂಬಯಿ ಮಹಾನಗರದ ಎಲ್ಲಾ ಕಲಾವಿದರನ್ನು ಪ್ರೋತ್ಸಾಹಿಸುವ ಪುಣ್ಯ ಕಾರ್ಯ ಮಹಾನಗರದಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ಈ ಸರಣಿ ಕಾರ್ಯಕ್ರಮವು ಶ್ರೀರಾಮನಿಗೆ ಸಲ್ಲಿಸುವ ನಿಜವಾದ ಪೂಜೆಯಾಗಿದೆ” ಎಂದರು.

ಮುಖ್ಯ ಆತಿಥಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಅವರು ತನ್ನ ಅನಿಸಿಕೆ ತಿಳಿಸುತ್ತಾ “ಯಕ್ಷಗಾನ ಕಲಾವಿದ ವಾಸುದೇವ ಮಾರ್ನಾಡ್ ಅವರು ಹಲವು ಸಮಯದಿಂದ ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದರು. ಇದೊಂದು ಸಾಮಾನ್ಯ ತಾಳಮದ್ದಳೆ ಕಾರ್ಯಕ್ರಮ ಎಂದು ಭಾವಿಸಿದ್ದೆ, ಆದರೆ ಇಲ್ಲಿ ಬಂದು ನೋಡುವಾಗ ಇದೊಂದು ಸಂಕಲ್ಪ ಸೇವೆಯಾಗಿದೆ ಎಂದು ತಿಳಿಯಿತು. ನಾನು ಬಾಲ್ಯದಲ್ಲಿ ಮಾಡಿರುವ ವೇಷ ಹಾಗೂ ತಾಳಮದ್ದಲೆಯಲ್ಲಿ ವಹಿಸಿದ ಪಾತ್ರ ಎಲ್ಲವೂ ಮತ್ತೆ ನೆನಪಾಯಿತು. ಗುರುನಾರಾಯಣ ಯಕ್ಷಗಾನ ಮಂಡಳಿಯಲ್ಲಿ ನಾವು ಆಯೋಜನೆ ಮಾಡುತ್ತಿದ್ದ ತಾಳಮದ್ದಲೆ ಕಾರ್ಯಕ್ರಮಗಳು ನಮಗೆ ಸ್ಫೂರ್ತಿ ತುಂಬಿದ ದಿನಗಳಾಗಿದ್ದವು. ಪೆರ್ಣಂಕಿಲ ಹರಿದಾಸ್ ಭಟ್ ಹರಿದಾಸ ಭಟ್ ಇವರ ಸಂಪೂರ್ಣ ಆಶೀರ್ವಾದದೊಂದಿಗೆ ಯುವ ಹಾಗೂ ಪ್ರತಿಭಾವಂತ ಕಲಾವಿದರಿಗಾಗಿಯೇ ಆಯೋಜಿಸಿರುವ ಈ ಸರಳ ಕಾರ್ಯಕ್ರಮವು ಸದಾ ಯಶಸ್ಸನ್ನು ಕಾಣಲಿ” ಎಂದು ಹಾರೈಸಿ, ಗೌರವ ಸ್ವೀಕರಿಸಿದ ಎಲ್ಲಾ ಕಲಾವಿದರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಗುರುನಾರಾಯಣ ಯಕ್ಷಗಾನ ಮಂಡಳಿಯ ಕಾರ್ಯಾಧ್ಯಕ್ಷರಾದ ನವೀನ್ ಪೂಜಾರಿ ಪಡು ಇನ್ನಾ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಭಾಗವತರಾದ ಜಯಲಕ್ಷ್ಮಿ ದೇವಾಡಿಗ ಅವರು ದೇವರ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಜ್ಜೇಫಾಡ ದೊಂಬಿವಲಿ ಇವರಿಂದ ಶ್ರೀ ಚಂದ್ರಹಾಸ ರೈ ಇವರ ನೇತೃತ್ವದಲ್ಲಿ ಶ್ರೀರಾಮ ಸಂಕೀರ್ತನೆ ನರವೇರಿತು. ಪೋರ್ಟ್ ಕನ್ನಡ ಭವನದ ಪ್ರಾಂಶುಪಾಲೆ ಅಮೃತಾ ಅಜಯ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಅತ್ಯಂತ ಸುಂದರವಾಗಿ ನಿರ್ವಹಿಸಿದರು. ವಾಸುದೇವ ಮಾರ್ನಾಡ್ ಹಾಗೂ ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅವರು ಸನ್ಮಾನಿತರನ್ನು ಸಭೆಗೆ ಪರಿಚಯಿಸಿ ವಂದಿಸಿದರು. ಕೊನೆಯಲ್ಲಿ ಶ್ರೀರಾಮ ತಾರಕ ಮಂತ್ರ ಪಠಣದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು, ಮತ್ತು ಕಲಾಭಿಮಾನಿಗಳು ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.




