ಮುಂಬಯಿ : ಮಂಗಳೂರು ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಕರ ಸೇವೆ ಮತ್ತು ಸೌಲಭ್ಯಗಳ ಸುಧಾರಣೆಗೆ ಕೋರಿಕೆ ,ಕೊಂಕಣ ಪ್ರದೇಶದ ಪ್ರಯಾಣಿಕರು ಮತ್ತು ನಿವಾಸಿಗಳ ಪರವಾಗಿ ಮುಂಬಯಿ – ಮಂಗಳೂರು ರೈಲು ಮಾರ್ಗದಲ್ಲಿ ಕೆಲವು ಬೇಡಿಕೆಗಳನ್ನು ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವಾಲಯದ ರಾಜ್ಯ ಸಚಿವ ವಿ ಸೋಮಣ್ಣ ಅವರಿಗೆ ಉಡುಪಿಯ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಉಪಸ್ಥಿತಿಯಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿ ಮತ್ತು ಅಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್ ಮನವಿ ಪತ್ರ ಹಾಗೂ ಸಮಿತಿಯ ಬೆಳ್ಳಿ ಹಬ್ಬದ ಆಮಂತ್ರಣ ಪತ್ರಿಕೆಯನ್ನು ನೀಡಿದರು. ಆ ನಂತರ ಮಂಗಳೂರು ಸಂಸದ ಬ್ರಿಜೇಶ್ ಚೌಟ ಇವರನ್ನು ಬೇಟಿಯಾಗಿ ಮನವಿ ಪತ್ರ ಹಾಗೂ ಸಮಿತಿಯ ಬೆಳ್ಳಿ ಹಬ್ಬದ ಆಮಂತ್ರಣ ಪತ್ರಿಕೆಯನ್ನು ನೀಡಿದರು.

ಮನವಿ ಪತ್ರದಲ್ಲಿ ಮತ್ಸ್ಯಗಂಧ ಎಕ್ಸ್ಪ್ರೆಸ್ ಮಾದರಿಯಲ್ಲಿ ಮುಂಬೈ – ಮಂಗಳೂರು ಮಾರ್ಗದಲ್ಲಿ ಹೆಚ್ಚುವರಿ ರೈಲನ್ನು ಪ್ರಾರಂಭಿಸಬೇಕು. ಮುಂಬೈ ಮತ್ತು ಮಂಗಳೂರು ನಡುವೆ ವಂದೇ ಭಾರತ್ ಸ್ಲೀಪರ್ ರೈಲನ್ನು ಪ್ರಾರಂಭಿಸಬೇಕು. ಇದಕ್ಕೆ ಕೊಂಕಣ ರೈಲ್ವೆಗೆ ದಿವಂಗತ ಶ್ರೀ ಜಾರ್ಜ್ ಫರ್ನಾಂಡಿಸ್ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರ ಸ್ಮರಣಾರ್ಥವಾಗಿ ಹೆಸರಿಸಲು ವಿನಂತಿಸಲಾಯಿತು. ಪ್ರಯಾಣಿಕರ ಸುರಕ್ಷತೆಗೆ ರೈಲಿನಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆ ಮತ್ತು ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಸುರಕ್ಷತೆಯನ್ನು ಬಲಪಡಿಸಬೇಕು. ಹಿರಿಯ ನಾಗರಿಕರಿಗೆ ರೈಲು ಟಿಕೆಟ್ ದರ ರಿಯಾಯಿತಿಯನ್ನು ಪುನಃ ಜಾರಿಗೆ ತರಬೇಕು. ಹಿರಿಯ ನಾಗರಿಕರಿಗೆ ಟಿಕೆಟ್ ಬುಕಿಂಗ್ನಲ್ಲಿ ಕೆಳ ಬೆರ್ತ್ಗಳನ್ನು ಮೀಸಲಿಡಲು ಸೂಕ್ತ ಅವಕಾಶ ಕಲ್ಪಿಸಬೇಕು. ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಕೋಟಾವನ್ನು ತರ್ಕಬದ್ಧಗೊಳಿಸಬೇಕು. ಸ್ವಚ್ಛತೆ ಮತ್ತು ಇತರ ಸೌಲಭ್ಯಗಳುನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಸ್ವಚ್ಛತೆ, ನೈರ್ಮಲ್ಯ, ವಿಪತ್ತು ನಿರ್ವಹಣಾ ಸಿದ್ಧತೆ ಮತ್ತು ಇತರ ಪ್ರಯಾಣಿಕರ ಸೌಲಭ್ಯಗಳನ್ನು ಸುಧಾರಿಸಬೇಕು.

ಕೊಂಕಣ ರೈಲ್ವೆಯು ಲಕ್ಷಾಂತರ ಪ್ರಯಾಣಿಕರ ಜೀವನಾಡಿಯಾಗಿದೆ. ಮೇಲಿನ ಕ್ರಮಗಳನ್ನು ಜಾರಿಗೆ ತರುವುದರಿಂದ ಹಿರಿಯ ನಾಗರಿಕರು, ನಿತ್ಯ ಪ್ರಯಾಣಿಕರು ಮತ್ತು ದೂರದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ಬಗ್ಗೆ ಇತ್ತಿಚೆಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ) ವತಿಯಿಂದ ಮುಂಬಯಿಯಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಿದ್ದು ಇದರಲ್ಲಿ ಜನಸಾಮಾನ್ಯರಿಂದ ಬಂದ ಪ್ರತಿಕ್ರೆಯ ಬಗ್ಗೆಯೂ ಸಚಿವರಲ್ಲಿ ಚರ್ಚಿಸಿ ಜನಸಾಮಾನ್ಯರ ಪರವಾಗಿ ನೀಡಿದ ಈ ಮೇಲಿನ ಬೇಡಿಕೆಯನ್ನು ಅತೀ ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲು ವಿನಂತಿಸಲಾಯಿತು.
ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಗೌರವ ಕೋಶಾಧಿಕಾರಿ ಸದಾನಂದ ಆಚಾರ್ಯ, ಉಪಾಧ್ಯಕ್ಷರುಗಳು, ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷರು, ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪರವಾಗಿ ಸಚಿವರನ್ನು ಮತ್ತು ಸಂಸದರನ್ನು ಗೌರವಿಸಲಾಯಿತು




