32 C
Mumbai
March 7, 2026
Mumbai News Kannada
ಪ್ರಕಟಣೆ

ಕೊಡ್ಯಡ್ಕ ದೇವಸ್ಥಾನಕ್ಕೆ ಹೋದಾಗ ಆದ ಪ್ರೇರಣೆಯಂತೆ ಬೆಳಗಾವಿಯಲ್ಲಿ ನೆಲೆ ನಿಂತ ಅನ್ನಪೂರ್ಣೇಶ್ವರಿ ; ದೇವಿಯ ವಾರ್ಷಿಕ ಮಹೋತ್ಸವ ಶುಕ್ರವಾರದಿಂದ ಆರಂಭ





ಮಂಗಳೂರಿನ ಹುಲಿವೇಷ, ಕೇರಳದ ಕಲಾವಿದರ ಸಾಂಸ್ಕೃತಿಕ ವೈಭವ

ಬೆಳಗಾವಿ: ವಡಗಾವಿ ಯಳ್ಳೂರು ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ನಗರದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಾರ್ಷಿಕ ಮಹೋತ್ಸವ ಮೇ 16, 17,18 ರಂದು ನಡೆಯಲಿದೆ.
ಉಡುಪಿ ಜಿಲ್ಲೆ ಉಚ್ಚಿಲದ ವಿಶ್ವನಾಥ ಜೋಯಿಸರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಲಿದೆ.

ಮೇ 16 ರಂದು ಸಂಜೆ 6 ಕ್ಕೆ ಪ್ರಾರ್ಥನೆ, ವಾಸ್ತು ಶುದ್ದಿ, ವಾಸ್ತು ಹೋಮ, 7 ಕ್ಕೆ ಸಾಂಗ್ಲಿಯ ಬಾಲಕೃಷ್ಣ ಮುಳೆ ಅವರಿಂದ ಕೀರ್ತನೆ ನಡೆಯಲಿದೆ.

ಮೇ 17 ರಂದು ಬೆಳಗ್ಗೆ 6 ಕ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಿ ಮತ್ತು ಪರಿವಾರ ದೇವರಿಗೆ ಕಳಶಾಭಿಷೇಕ, 7 ಕ್ಕೆ ಪುಣ್ಯಾಹ ವಾಚನ, ಗಣಹೋಮ, 8 ಕ್ಕೆ ನವಗೃಹ ಹೋಮ, 10 ಕ್ಕೆ ಅನ್ನಪೂರ್ಣೇಶ್ವರಿ ಯಾಗ, ಮಹಾಪೂಜೆ, ಪ್ರಸನ್ನ ಪೂಜೆ, ಸಂಜೆ 4 ಕ್ಕೆ ರಂಗಪೂಜೆ, ಶ್ರೀದೇವಿಯ ಪಲ್ಲಕ್ಕಿ ಮೆರವಣಿಗೆ, ದೀಪೋತ್ಸವ ನಡೆಯಲಿದೆ. ಮೆರವಣಿಗೆಗೆ ಮಂಗಳೂರಿನ ಸುಪ್ರಸಿದ್ಧ ಹುಲಿವೇಷಧಾರಿಗಳು ಪಲ್ಲಕ್ಕಿ ಮೆರವಣಿಗೆಯಲ್ಲಿ ಭಾಗವಹಿಸಿ ಭಕ್ತರನ್ನು ರಂಜಿಸಲಿದ್ದಾರೆ. ಕೇರಳದಿಂದ ಮಹಿಷಾಸುರ ಮರ್ದಿನಿ ಕುರಿತ ವಿಶೇಷ ತಂಡ ಆಗಮಿಸಿ ಕಾರ್ಯಕ್ರಮ ನೀಡಲಿದೆ.

ಮೇ 18 ರಂದು ಬೆಳಗ್ಗೆ 7 ಕ್ಕೆ ಸಂಪ್ರೋಕ್ಷಣೆ, ಸುಬ್ರಮಣ್ಯ ದೇವರಿಗೆ ಅಶ್ಲೇಷಾ ಬಲಿ ಪೂಜೆ, 9 ಕ್ಕೆ ಮಹಾ ಚಂಡಿಕಾ ಹೋಮ, ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ಮಹಾ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ರವಿರಾಜ ಹೆಗ್ಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಡ್ಯಡ್ಕ ದೇವಸ್ಥಾನಕ್ಕೆ ಹೋದಾಗ ಆದ ಪ್ರೇರಣೆಯಂತೆ ಬೆಳಗಾವಿಯಲ್ಲಿ ನೆಲೆ ನಿಂತ ಅನ್ನಪೂರ್ಣೇಶ್ವರಿ :

ಬೆಳಗಾವಿಯ ವಡಗಾವಿ ಯಳ್ಳೂರು ರಸ್ತೆಯಲ್ಲಿ ಶ್ರೀ ಅನ್ನಪೂರ್ಣ ದೇವಿಯ ಭವ್ಯ ದೇಗುಲ ನಿರ್ಮಾಣಗೊಂಡಿದೆ. ದೇವಸ್ಥಾನ ಇದೀಗ ವಾರ್ಷಿಕ ಧಾರ್ಮಿಕ ಮಹೋತ್ಸವಕ್ಕೆ ಅಣಿಯಾಗಿದ್ದು ಸಂಭ್ರಮ ಕಳೆಗಟ್ಟಿದೆ.

ಈ ಸುಂದರ ದೇಗುಲ ನಿರ್ಮಿಸಿದವರು ಬೆಳಗಾವಿಯ ಹೋಟೆಲ್ ಉದ್ಯಮಿ 87 ವರ್ಷದ ರವಿರಾಜ ಹೆಗ್ಡೆ. ಮೂಲತಃ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮಿಯ್ಯಾರಿನವರಾದ ರವಿರಾಜ್ ಹೆಗ್ಡೆ ಅವರು 21 ವರ್ಷಗಳ ಹಿಂದೆ ಮೂಡುಬಿದಿರೆ ಬಳಿಯ ಪ್ರಸಿದ್ದ ಸುಕ್ಷೇತ್ರ ಕೊಡ್ಯಡ್ಕ ಹೊಸನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ದೇವಿಯ ದರ್ಶನಕ್ಕೆ ಹೋಗಿದ್ದರು. ದೇವಸ್ಥಾನ ಸಂದರ್ಶಿಸಿ ದೇವಿಯ ದರ್ಶನ ಭಾಗ್ಯ ಲಭಿಸಿದಾಗ ರವಿರಾಜ ಹೆಗ್ಡೆಯವರಿಗೆ ಮನಸ್ಸಿನಲ್ಲಿ ಒಂದು ಪ್ರೇರಣೆಯಾಯಿತಂತೆ. ತಾನೇಕೆ ಇಂಥ ದೇವಸ್ಥಾನವನ್ನು ಕಟ್ಟಬಾರದೇಕೆ ಎಂಬ ಯೋಚನೆ ಬಂತಂತೆ.

ನಂತರ ಅವರು ಬೆಳಗಾವಿಗೆ ಬಂದು ಈ ಬಗ್ಗೆ ದೃಢ ಚಿಂತನೆ ಮಾಡಿದರು. ದೇವಸ್ಥಾನ ನಿರ್ಮಿಸಲು ಮನಸ್ಸಿನಲ್ಲಿ ಗಟ್ಟಿ ನಿರ್ಧಾರ ತಳೆದರು.
ಹೊಟೇಲು ಉದ್ಯಮದಿಂದ ಸ್ವಲ್ಪ ಸ್ವಲ್ಪವೇ ಹಣ ಸಂಗ್ರಹಿಸಿ ದೇವಸ್ಥಾನ ನಿರ್ಮಾಣದ ಬಗ್ಗೆ ನೀಲನಕ್ಷೆ ತಯಾರಿಸಿದರು. ನಂತರ ಅದರ ನಿರ್ಮಾಣಕ್ಕೆ ಮುಂದಾದರು. ಲಕ್ಷಾಂತರ ರೂ. ವೆಚ್ಚದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನವನ್ನು ನಿರ್ಮಿಸಿದರು.

ದೇವಿಯ ಆಲಯ ನಿರ್ಮಾಣಕ್ಕೆ ತಾವೇ ಸ್ವತಃ ಛಲದಿಂದ ತಮ್ಮ ಮಕ್ಕಳೊಂದಿಗೆ ಸೇರಿ ಸ್ವಂತ ಜಾಗ ಖರೀದಿಸಿ 2013 ರಲ್ಲಿ ಸುಂದರ ದೇಗುಲ ನಿರ್ಮಿಸಿದ್ದಾರೆ.

ಅಂದಿನಿಂದ ವರ್ಷ ವರ್ಷವೂ ದೇವಸ್ಥಾನದಲ್ಲಿ ವಿವಿಧ ಸೇವಾ ಕಾರ್ಯಗಳು ನೆರವೇರುತ್ತವೆ ವರ್ಷಾವಧಿ ಪೂಜೆ, ನವರಾತ್ರಿ ಸೇರಿದಂತೆ ವಿಶೇಷ ದಿನಗಳಲ್ಲಿ ಪೂಜಾ ಕಾರ್ಯಗಳು ನಡೆಯುತ್ತಿದೆ. ಈಗ 12 ನೇ ವರ್ಷದ ವರ್ಷಾವಧಿ ಸೇವೆಯ ಸಂಭ್ರಮ.
ದೇವಸ್ಥಾನಕ್ಕೆ ವರ್ಷವೂ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಜತೆಗೆ ಈ ಭಾಗದಲ್ಲಿ ಕಲ್ಯಾಣ ಮಂಟಪದ ಅವಶ್ಯಕತೆ ಇರುವುದನ್ನು ಮನಗಂಡು ರವಿರಾಜ ಹೆಗ್ಡೆಯವರು ಇದೀಗ ದೇವಸ್ಥಾನದ ಪಕ್ಕದಲ್ಲಿ ಜಾಗ ಖರೀದಿ ಮಾಡಿ ಸುಂದರ ಹಾಗೂ ಭವ್ಯ ಕಲ್ಯಾಣ ಮಂಟಪ ನಿರ್ಮಿಸಿ ಈ ಭಾಗದ ಜನತೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ದೇವಸ್ಥಾನದಲ್ಲಿ ಈಗ ಪ್ರತಿ ಶುಕ್ರವಾರ ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ಸೇವೆ ನಡೆಸಲಾಗುತ್ತದೆ.



Related posts

ಪೆ 9: ಮೀರಾ – ಡಹಾಣು ಬಂಟ್ಸ್ ಕ್ರೀಡೋತ್ಸವ 2025

Mumbai News Desk

ಡೊಂಬಿವಲಿ: ಫೆ. 28ರಂದು ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ ಮತ್ತು ಭಜನಾ ಸ್ಪರ್ಧೆ

Mumbai News Desk

ಆ.16 ರಂದು ಶ್ರೀ ಜಗದಂಬ ಮಂದಿರ(ರಿ) ಡೊಂಬಿವಲಿಯಲ್ಲಿ ವರಮಹಾಲಕ್ಷ್ಮಿ ಪೂಜೆ.

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ ಫಲಿಮಾರು ಹೊಸಾಗ್ಮೆನಾಳೆ (ಮೇ. 1) 91ನೇ ವಾರ್ಷಿಕ ಮಂಗಲೋತ್ಸವ, ಶ್ರೀ ದೇವರ ಮೂರ್ತಿ ಪ್ರತಿಷ್ಠಾ ದಿನಾಚರಣೆ, ಏಕಹಾ ಭಜನಾ ಕಾರ್ಯಕ್ರಮ

Mumbai News Desk

ಜ. 24:ಪರಮ ಪೂಜ್ಯ ಶ್ರೀ ವಿಜಯಾನಂದ ಸ್ವಾಮೀಜಿ ಅವರ 75ನೇ ಜನ್ಮದಿನಾಚರಣೆಯ ಅಂಗವಾಗಿ ವಜ್ರ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ

Mumbai News Desk

ಗುರುನಾರಾಯಣ ಯಕ್ಷಗಾನ ಮಂಡಳಿಯ ಭಾಗವತರಾದ ಗಂಗಾಧರ್ ಸುವರ್ಣ ಅವರ ಕಲಾ ಸೇವೆಗೆ 25 ವರ್ಷ, ಆಗಸ್ಟ್ 2ರಂದು ”ಯಕ್ಷ ಸಂಭ್ರಮ’

Mumbai News Desk