


ಚಿಣ್ಣರಬಿಂಬ ಸಾಕಿನಾಕ ಶಿಬಿರದಲ್ಲಿ ಜುಲೈ. 6ರಂದು ವನ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸ್ಥಳೀಯ ಶ್ರೀ ದುರ್ಗಾಪರಮೇಶ್ವರಿ ಮಂದಿರ ಮಂಡಳಿಯ ಅಧ್ಯಕ್ಷರಾಗಿರುವ ಶೇಖರ್ ಪೂಜಾರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಗಿಡಗಳನ್ನು ಎಲ್ಲರೂ ಸೇರಿ ನೆಡುವ ಮೂಲಕ ಮಕ್ಕಳಿಗೆ ವನಮಹೊತ್ಸವದ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಚಿಣ್ಣರ ಬಿಂಬ ಕೇಂದ್ರ ಸಮಿತಿಯ ಸದಸ್ಯರುಗಳಾದ ರಮೇಶ್ ರೈ, ಸವಿತಾ ಶೆಟ್ಟಿ, ಅನಿತಾ ಯು ಶೆಟ್ಟಿ, ರಾಜವರ್ಮ ಜೈನ್, ವಲಯ ಮುಖ್ಯಸ್ಥೆ ಉಷಾ ಷೇರುಗಾರ್, ಶಿಬಿರ ಮುಖ್ಯಸ್ಥೆ ಶೋಭ ಅಮೀನ್, ಸಾಂಸ್ಕೃತಿಕ ಮುಖ್ಯಸ್ಥೆ ಲತಾ ಶೆಟ್ಟಿ, ಶೋಭಾ ರೈ, ಅರುಣಾ ಶೆಟ್ಟಿ, ಕನ್ನಡ ಶಿಕ್ಷಕಿಯರಾದ ಹರಿಣಿ ಶೆಟ್ಟಿ, ಪ್ರೀತಿ ಶೆಟ್ಟಿ ಮತ್ತು ಭಜನಾ ಶಿಕ್ಷಕಿ ಶಶಿ ಶೆಟ್ಟಿ, ಮಾಜಿ ಭಜನೆ ಶಿಕ್ಷಕಿ ವಿದ್ಯಾ ಶೆಟ್ಟಿ, ಪಾಲಕರು ಮತ್ತು ಮಕ್ಕಳು ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.

ಈ ಸಂಧರ್ಭ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಶೇಖರ್ ಪೂಜಾರಿ “ಮರ ಗಿಡಗಳು ಜಾಸ್ತಿಯಾದಷ್ಟು ಮಳೆ ಜಾಸ್ತಿಯಾಗುತ್ತದೆ. ನಾವು ಸಣ್ಣವರಿದ್ದಾಗ ನಮ್ಮ ಶಾಲೆಗಳಲ್ಲಿ ಜೂನ್ ತಿಂಗಳಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ನಡೆಸುತ್ತಿದ್ದೆವು. ಮರ ಗಿಡಗಳಿಂದಾಗಿ ನಮಗೆ ಶುದ್ಧವಾದ ಗಾಳಿ ಸಿಗುತ್ತದೆ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದರು.
ರಮೇಶ ರೈ ಮಾತನಾಡುತ್ತಾ ನವರು ” ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರು ಈ ಬಾರಿ ಹೊಸ ಯೋಜನೆಯನ್ನು ಹಾಕಿ ಕೊಂಡಿದ್ದು ಎಲ್ಲಾ ಶಿಬಿರಗಳಲ್ಲಿ ಈ ಕಾರ್ಯಕ್ರಮ ನಡೆಯುತಿದೆ. ಚಿಣ್ಣರ ಬಿಂಬ ಯಾವುದೇ ಭೇದ ಭಾವವಿಲ್ಲದ ನಿಸ್ವಾರ್ಥ ಸಂಸ್ಥೆಯಾಗಿದ್ದು, ಇದರ ಪ್ರಯೋಜನವನ್ನು ಎಲ್ಲರೂ ಪಡೆಕೊಳ್ಳಬೇಕು. ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪರಿಸರದ ರಕ್ಷಣೆ ಸಾಧ್ಯ” ಎಂದರು.
ಕನ್ನಡ ಶಿಕ್ಷಕಿ ಹರಿಣಿ ಶೆಟ್ಟಿಯವರು ಮಾತನಾಡುತ್ತಾ “ಮರ ಗಿಡಗಳನ್ನು ಬೆಳೆಸುವುದು ತುಂಬಾ ಮುಖ್ಯವಾಗಿದೆ, ಇವುಗಳಿಂದಾಗಿ ನಾವು ಉಸಿರಾಡುವ ಆಮ್ಲಜನಕ ನಮಗೆ ನೈಸರ್ಗಿಕವಾಗಿ ಸಿಗುತ್ತಿದೆ. ಈಗ ತುಂಬಾ ಮರ ಗಿಡಗಳನ್ನು ಕಡಿದು ಕಾಡನ್ನು ನಾಡನ್ನಾಗಿ ಮಾರ್ಪಾಡು ಮಾಡುತ್ತಿದ್ದೇವೆ, ಒಂದು ವೇಳೆ ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ನಾವು ಆಮ್ಲಜನಕಕ್ಕೂ ಹಣ ಕೊಟ್ಟು ಖರೀದಿಸುವ ದಿನ ಬರಬಹುದು” ಎಂದರು.
ವಲಯ ಮುಖ್ಯಸ್ಥೆ ಶೋಭಾ ಅಮೀನ್ ರವರು ವಂದನಾರ್ಪಣೆ ಮಾಡಿದರು. ಮಕ್ಕಳಿಗೆ ಸಿಹಿ ತಿಂಡಿ ನೀಡಿ ವಿತರಿಸಲಾಯಿತು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಂಡಿತು.




