
ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯವತಿಯಿಂದ ಡೊಂಬಿವಲಿ ಕಲ್ಯಾಣ ಪರಿಸರದ ಸಮಾಜದ ವಿದ್ಯಾರ್ಥಿಗಳಿಗಾಗಿ ಪುಸ್ತಕ ಹಾಗೂ ಶಾಲಾ ಪರಿಕರಗಳ ವಿತರಣೆ ಕಾರ್ಯಕ್ರಮ ಆದಿತ್ಯವಾರ ಜುಲೈ 6 ರಂದು ಸಂಜೆ 4 ಗಂಟೆಗೆ ಡೊಂಬಿವಲಿ ಪಶ್ಚಿಮದ ಪ್ರೀತಿ ಸಭಾಗ್ರಹದಲ್ಲಿ ನಡೆಯಿತು.
ಪ್ರಪ್ರಥಮವಾಗಿ ಕುಲಮಾತೆ ಶ್ರೀ ಮಹಿಷಮರ್ದಿನಿಗೆ ಉಪಾಧ್ಯಕ್ಷರಾದ ಶ್ರೀಯುತ ಬಾಬು ಮೊಗವೀರರವರು ಪೂಜೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಮುಖ್ಯ ಕಚೇರಿಯ ಅಧ್ಯಕ್ಷರಾದ ಶ್ರೀಯುತ ರಾಜು ಮೆಂಡನ್ ವಂಡ್ಸೆಯವರು ವಹಿಸಿ ನಡೆಸಿ ಕೊಟ್ಟರು. ಉದ್ಘಾಟಕರಾಗಿ ಆಗಮಿಸಿದ ಸಂಘದ ಹಿತಚಿಂತಕ ಹಾಗೂ ಮುಖ್ಯ ಕಚೇರಿಯ ಗೌರವ ಅಧ್ಯಕ್ಷರಾದ ಶ್ರೀಯುತ ಸುರೇಶ ಕಾಂಚನ್ ರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.




ಅತಿಥಿ ಗಣ್ಯರಾಗಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಯುತ ಮಹಾಬಲ ಕುಂದರ್, ಶ್ರೀಯುತ ನಾಣು ಡಿ.ಚಂದನ್, ಮುಖ್ಯ ಕಚೇರಿಯ ಗೌರವ ಪ್ರಧಾನ ಕೋಶಾಧಿಕಾರಿ ಶ್ರೀಯುತ ಸತೀಶ್ ಶ್ರೀಯಾನ್, ಮೊಗವೀರ ವ್ಯವಸ್ಥಾಪಕ ಮಂಡಳಿ ಡೊಂಬಿವಲಿ ಶಾಖೆಯ ಮಾಜಿ ಕಾರ್ಯಾಧ್ಯಕ್ಷರಾದ ಶ್ರೀಯುತ ಯದುವೀರ್ ಪುತ್ರನ್, ಡೊಂಬಿವಲಿ ಸಮಿತಿಯ ಗೌರವ ಅಧ್ಯಕ್ಷರಾದ ಶ್ರೀಯುತ ಭಾಸ್ಕರ್ ಕಾಂಚನ್, ಕಾರ್ಯಾಧ್ಯಕ್ಷರಾದ ಶ್ರೀಯುತ ರಾಜು ಮೊಗವೀರ ತಗ್ಗರ್ಸೆ, ಕಾರ್ಯದರ್ಶಿ ಶ್ರೀಯುತ ಸಂತೋಷ ಪುತ್ರನ್, ಉಪಾಧ್ಯಕ್ಷರಾದ ಶ್ರೀಯುತ ಬಾಬು ಮೊಗವೀರ, ಕೋಶಾಧಿಕಾರಿ ಶೇಖರ್ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಭೆಗೆ ಶೋಭೆಯನ್ನಿತ್ತರು.
ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀಯುತ ರಾಜು ಮೊಗವೀರ ತಗ್ಗರ್ಸೆಯವರು ಬಂದ ಅಥಿತಿ ಗಣ್ಯರನ್ನು ಸ್ವಾಗತಿಸಿದರೆ ಗೌರವ ಅಧ್ಯಕ್ಷರಾದ ಶ್ರೀಯುತ ಭಾಸ್ಕರ್ ಕಾಂಚನ್ ರವರು ಸಮಿತಿಯು ನಡೆದು ಬಂದ ರೀತಿ ಮತ್ತು ಮಾಡಿದ ಕಾರ್ಯಕ್ರಮಗಳನ್ನು ಪ್ರಾಸ್ತವಿಕವಾಗಿ ವಿವರಿಸಿದರು.
ನಂತರ ವೇದಿಕೆಯ ಮಧ್ಯದಲ್ಲಿ ಇಂಡೋನೆಶ್ಯಾದಲ್ಲಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು ಪಡೆದ ಶ್ರೀಮತಿ ಸುಮತಿ ರಾಜು ಮೊಗವೀರ ದೊಂಬೆ ಹಾಗೂ ಡೊಂಬಿವಲಿ ಸಮಿತಿಯ ಸಕ್ರಿಯ ಸದಸ್ಯ, ಕೊಡುಗೈ ದಾನಿ ಶ್ರೀಯುತ ರಾಜು ಮೊಗವೀರ ದೊಂಬೆ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಹಿತಚಿಂತಕರಾದ ಶ್ರೀಯುತ ಸುರೇಶ್ ಕಾಂಚನ್ ರವರು ಮಾತನಾಡುತ್ತ ಡೊಂಬಿವಲಿ ಸಮಿತಿಯ ಕಾರ್ಯಕಲಾಪಗಳನ್ನು ನೋಡಿ ತುಂಬಾ ಸಂತೋಷವಾಗುತ್ತಿದೆ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಲಿ. ದಾನಗಳಲ್ಲಿ ಎರಡು ದಾನ ಶ್ರೇಷ್ಠವಾದದ್ದು, ಒಂದು ಅನ್ನದಾನ ಮತ್ತೊಂದು ವಿದ್ಯಾದಾನ. ಇಂತಹ ಒಳ್ಳೆಯ ಯೋಜನೆ ಯೋಚನೆಗಳು ಕಂಡು ಡೊಂಬಿವಲಿ ಶಾಖೆಯು ಇನ್ನಷ್ಟು ಉತ್ತಮ ಸಮಾಜಪರ ಕಾರ್ಯ ನೀಡುವಿರೆಂದು ಭರವಸೆ ನನಗಿದೆ. ಮುಂದೆ ನಿಮ್ಮಿಂದಾದರೆ ಸ್ವಲ್ಪ ವಿದ್ಯಾರ್ಥಿವೇತನವನ್ನು ಕೊಡಲು ಪ್ರಯತ್ನಿಸಿ, ಈ ಕಾರ್ಯಕ್ರಮಕ್ಕೆ ಪ್ರತಿ ವರ್ಷ ನನ್ನಿಂದಾದ ಹೆಚ್ಚು ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು. ಡೊಂಬಿವಲಿ ಶಾಖೆಯ ಕಾರ್ಯ ವೈಖರ್ಯವು ಬಹಳ ಶಿಸ್ತುಬದ್ಧವಾಗಿದ್ದು ಉತ್ತಮ ರೀತಿಯಲ್ಲಿ ಜರುಗುತ್ತಿದೆ ಎಂದು ಸಮಿತಿಯ ಎಲ್ಲಾ ಸದಸ್ಯರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಯುತ ಮಹಾಬಲ ಕುಂದರ್ ರವರು ಮಾತನಾಡುತ್ತ ಇಂತಹ ಕಾರ್ಯಕ್ರಮಕ್ಕೆ ನನ್ನ ಬೆಂಬಲ ಸದಾ ಇದೆ. ಮುಂಬಯಿಯಲ್ಲಿ ಏನಾದರೂ ಸಭಾಭವನ ಮಾಡುವುದಿದ್ದರೆ ಅದನ್ನು ಡೊಂಬಿವಲಿ ಪ್ರದೇಶದಲ್ಲಿಯೇ ಮಾಡುವ ಎಂದು ಶುಭ ಹಾರೈಸಿದರು.
ಇನ್ನೋರ್ವ ಅತಿಥಿ ಶ್ರೀಯುತ ಯದುವೀರ್ ಪುತ್ರನ್ ರವರು ಮಾತನಾಡುತ್ತ ಸುರೇಶ್ ಕಾಂಚನ್ ರವರು ಓರ್ವ ಧೀಮಂತ ನಾಯಕ, ಅವರಿಗೆ ಸಮಾಜದ ಬಗ್ಗೆ ಬಹಳಷ್ಟು ಚಿಂತನೆಗಳಿವೆ. , ಡೊಂಬಿವಲಿಯಲ್ಲಿ ಮಂಡಳಿ ಮೊಗವೀರರು ಮತ್ತು ಬಗ್ವಾಡಿ ಮೊಗವೀರರು ಎಂದು ಭೇಧ ಭಾವವಿಲ್ಲ, ಇಲ್ಲಿ ನಾವೆಲ್ಲರೂ ಒಂದೇ ಮೊಗವೀರರು ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀಯುತ ನಾಣು.ಡಿ. ಚಂದನ್ ರವರು ಮಾತನಾಡುತ್ತ ಡೊಂಬಿವಲಿ ಸಮಿತಿಯ ಕಾರ್ಯ ಶೈಲಿಯನ್ನು ಕಂಡು ಸಂತೋಷದಿಂದ ಶುಭ ಹಾರೈಸಿದರು. ಶ್ರೀಯುತ ರಾಜು ಮೆಂಡನ್ ವಂಡ್ಸೆಯವರು ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತ ಎಲ್ಲಾ ಸಮಿತಿಗಿಂತ ಡೊಂಬಿವಲಿ ಸಮಿತಿ ಅತೀ ಮುಂಚೂಣಿಯಲ್ಲಿದೆ, ಈ ಸಮಿತಿಯು ಪ್ರತಿ ಮೂರು ತಿಂಗಳಿಗೆ ಒಮ್ಮೆ ಒಳ್ಳೊಳ್ಳೆ ಸಮಾಜ ಪರ ಕಾರ್ಯ ಮಾಡುತ್ತ ಬಂದಿದೆ, ಇವರ ಕಾರ್ಯಕ್ಕೆ ಸದಾ ನನ್ನ ವಯಕ್ತಿಕ ಮತ್ತು ಮುಖ್ಯ ಕಚೇರಿಯಿಂದ ಬೆಂಬಲ ಖಂಡಿತ ಇದೆ ಎಂದು ಸಮಿತಿಯ ಎಲ್ಲಾ ಸದಸ್ಯರಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿದ್ದ ಗಣ್ಯರ ಹಸ್ತದಿಂದ ಮಕ್ಕಳಿಗೆ ಶಾಲಾ ಪರಿಕರಗಳನ್ನು ವಿತರಿಸಿ ನಂತರ ಸುಮಾರು 180 ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಲಘು ಉಪಹಾರದ ವ್ಯವಸ್ಥೆಯನ್ನು ಸಭಾಗ್ರಹದ ಮಾಲಿಕರಾದ ಶ್ರೀಯುತ ಲಕ್ಷ್ಮಣ್ ಪೂಜಾರಿಯವರಿಂದ ಮಾಡಲಾಯಿತು.
ಮುಖ್ಯ ಕಚೇರಿಯ ಕಾಂಚನಿ ಕಲಾಕೇಂದ್ರ ಮತ್ತು ವಾಗ್ವಾರ್ದಿನಿ ಸಭೆಯ ಕಾರ್ಯದರ್ಶಿ ಶ್ರೀಯುತ ರಾಘವೇಂದ್ರ ಬಗ್ವಾಡಿಯವರು ಕಾರ್ಯಕ್ರಮವನ್ನು ನಿರೂಪಿಸಿದರೆ, ಅಮೃತ ಮೊಗವೀರ, ಜ್ಯೋತಿ ನಾಯ್ಕ್,
ಸಾನಿಕ ಮೊಗವೀರ ಮತ್ತು ಪೂಜಾ ಬಂಗೇರ ಪ್ರಾರ್ಥನೆಗೈದರೆ, ಡೊಂಬಿವಲಿ ಸಮಿತಿಯ ಕಾರ್ಯದರ್ಶಿ ಶ್ರೀಯುತ ಸಂತೋಷ ಪುತ್ರನ್ ರವರು ಧನ್ಯವಾದವನ್ನಿತ್ತರು.




