ಮುಂಬಯಿ: ಮಾಟುಂಗಾ ಧಾರಾವಿಯ ಟ್ರಾನ್ಸಿಟ್ ಕ್ಯಾಂಪ್ನಲ್ಲಿ ವಾಸವಾಗಿದ್ದ ಆನಂದ್ ಮೋನಪ್ಪ ಪೂಜಾರಿ (51) ಅನಾರೋಗ್ಯದಿಂದ ಸಯಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇವರು ದಕ್ಷಿಣ ಕನ್ನಡ ಜಿಲ್ಲೆ ಮೂಲದ ವ್ಯಕ್ತಿ ಎನ್ನಲಾಗಿದ್ದು, “ಅವರ ಸಂಬಂಧಿಕರ ಬಗೆಗೆ ಯಾವುದೇ ಮಾಹಿತಿ ಇಲ್ಲ. ವಾರಿಸುದಾರರು ಸಯಾನ್ ಆಸ್ಪತ್ರೆಯನ್ನು ಸಂಪರ್ಕಿಸಲು ಕೋರಲಾಗಿದೆ” ಎಂದು ಡಾ. ಶಿವ ಮೂಡಿಗೆರೆ ಮತ್ತು ಶಾಹುನಗರ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಸಾಯಿ ಚಂದ್ರಭಾನ್ ಪಾಟೀಲ್ ಅವರನ್ನು ಸಂಪರ್ಕಿಸಲು ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಪ್ರಕಟಣೆ ನೀಡಲಾಗಿತ್ತು.
ಆನಂದ ಪೂಜಾರಿ ಮುಂಬಯಿಯಲ್ಲಿ ಧಾರಾವಿ ಪ್ರದೇಶದಲ್ಲಿ ಒಬ್ಭರೇ ವಾಸಿಸುತ್ತಿದ್ದು ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಪಾಣೆ ಮಂಗಳೂರಿನಲ್ಲಿರುವ ಅವರ ಕುಟುಂಬದವರೂ ತೀರ ಬಡವರು. ಪತ್ರಿಕಾ ಪ್ರಕಟಣೆ ಓದಿ ಜಯ ಸುವರ್ಣ ಅಭಿಮಾನಿಗಳು ಮೃತರ ಕುಟುಂಬದವರನ್ನು ಸಂಪರ್ಕಿಸಿದರು.
ಆ ಊರಿನವರ ಸಹಕಾರದಿಂದ ಆನಂದ ಪೂಜಾರಿ ಕುಟುಂಬದ ಮೂವರು ಬುಧವಾರದಂದು ಮುಂಬಯಿಗೆ ಬಂದಿದ್ದಾರೆ. ಮೃತ ದೇಹವನ್ನು ಆಸ್ಪತ್ರೆಯಿಂದ ಅವರ ಕುಟುಂಬಕ್ಕೆ ಒಪ್ಪಿಸುವ ಪ್ರಕ್ರಿಯೆಯಲ್ಲಿ ಎರಡು ದಿನಗಳ ಕಾಲ ಡಾ ಶಿವಮೂಡಿಗೆರೆ ಮತ್ತು ಅಶೋಕ್ ಕುಕ್ಯಾನ್ ಸಸಿಹಿತ್ಲು ಅವರು ರಾತ್ರಿ ಹಗಲೆನ್ನದೆ ಶ್ರಮಿಸಿದ್ದಾರೆ. ಮೃತರ ದೇಹವನ್ನು ಊರಿಗೆ ಸಾಗಿಸುವ ಅಂಬುಲೆನ್ಸ್ ವ್ಯವಸ್ಥೆ ಮತ್ತು ಮುಂದಿನ ಕಾರ್ಯಕ್ಕೆ ಅನುಕೂಲವಾಗುವಂತೆ ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಮತ್ತು ಜಯ ಸುವರ್ಣ ಅಭಿಮಾನಿಗಳು ಸಹಕರಿಸಿದ್ದಾರೆ.




