
ಸಮಿತಿಯ ಸಮಾಜ ಸೇವೆಗೆ ಭಕ್ತರ ಸಹಕಾರ ಅಗತ್ಯ – ಮಾಧವ ಎಸ್.ಶೆಟ್ಟಿ.
ಚಿತ್ರ,ವರದಿ: ಉಮೇಶ್ ಕೆ.ಅಂಚನ್.
ಮುಂಬಯಿ ,ಅ.23 : ಸಮಿತಿಯು ಕಳೆದ 5 ದಶಕಗಳಿಂದ ಸಾಯಿಬಾಬಾರವರ ಆಶೀರ್ವಾದದಿಂದ ಹಲವಾರು ಸಮಾಜಪರ ಸೇವೆಯನ್ನು ಕೈಗೊಂಡಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಪ್ರತಿಭಾ ಪುರಸ್ಕಾರ, ವೈದ್ಯಕೀಯ ನೆರವು, ಅನಾಥಾಶ್ರಮ ವೃದ್ಧಾಶ್ರಮಕ್ಕೆ ಸಹಕಾರ ಹಾಗೂ ಬೊರಿವಿಲಿ ಕಚೇರಿಯಲ್ಲಿ ಅಬಲೆಯರಿಗೆ ಉಚಿತ ಹೊಲಿಗೆ ತರಬೇತಿಯನ್ನು ನೀಡುತ್ತಿದೆ. ಈ ಎಲ್ಲಾ ಸೇವೆಗಳಿಗೆ ವರ್ಷದಲ್ಲಿ ಹಲವಾರು ಲಕ್ಷ ಹಣವನ್ನು ವ್ಯಯಿಸುತ್ತಿದೆ. ಕಾಲಘೋಡಾ ಸಿಟಿ ಸಿವಿಲ್ ನ್ಯಾಯಾಲಯದ ಬಳಿ ಇದ್ದ ಸಾಯಿಬಾಬಾರವರ ಚಿಕ್ಕ ಮಂದಿರವನ್ನು ಮಹಾನಗರಪಾಲಿಕೆ ಕೆಡವಿದ್ದರೂ ಸಮಿತಿಯು ಪ್ರತೀ ವರ್ಷ ದೀಪಾವಳಿ ಹಬ್ಬದಂದು ಸಾಯಿ ಮಹಾಪೂಜೆಯನ್ನು ವಿಜ್ರಂಭಣೆಯಿಂದ ಆಚರಿಸುತ್ತಿದೆ. ಇಂದು ಆರ್ಥಿಕ ಸಹಾಯ ಪಡೆದ ವಿದ್ಯಾರ್ಥಿಗಳು ಮುಂದೆ ಸಮಾಜದ ಶ್ರೇಷ್ಠ ನಾಗರಿಕರಾಗಿ ಬೆಳೆದು ಬಡ ಮಕ್ಕಳಿಗೆ ಸಹಾಯ ಹಸ್ತ ನೀಡುವಂತಾಗಬೇಕು.ಸಮಿತಿಯ ಸಮಾಜ ಸೇವೆಗೆ ಸಾಯಿಭಕ್ತರು ಕೈಜೋಡಿಸಬೇಕು ಎಂದು ಸಾಯಿಬಾಬಾ ಪೂಜಾ ಸಮಿತಿ ಕಾಲಘೋಡ ಇದರ ಅಧ್ಯಕ್ಷ ಮಾಧವ ಎಸ್.ಶೆಟ್ಟಿ ಹೇಳಿದರು.
ಅವರು ಅ.21ರಂದು ಕಾಲಘೋಡಾ ಸಿಟಿ ಸಿವಿಲ್ ನ್ಯಾಯಾಲಯದ ಬಳಿ ಸಮಿತಿಯ ವತಿಯಿಂದ ನಡೆದ 55ನೇ ಸಾಯಿ ಮಹಾಪೂಜೆಯ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಿ ಮಾತನಾಡಿದರು.

ಸಮಿತಿಯ ಗೌರವ ಕಾರ್ಯದರ್ಶಿ ಪ್ರೊ.ಕೆ.ಎಚ್.ಕರ್ಕೇರ ಎಲ್ಲರನ್ನೂ ಸ್ವಾಗತಿಸಿ ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಮಿಜಾರು ವಂದಿಸಿದರು.

ಆರಂಭದಲ್ಲಿ ಭುವಾಜಿ ರಮೇಶ್ ಪೂಜಾರಿಯವರಿಂದ ಸಾಯಿ ಕಲಶ ಪ್ರತಿಷ್ಠೆ ನಡೆದು ಶ್ರೀ ಸತ್ಯನಾರಾಯಣ ಮಹಾಪೂಜೆಯು ಸಾಕಿನಾಕ ಅರುಣ್ ಭಟ್ ರವರ ಪೌರೋಹಿತ್ಯದಲ್ಲಿ ನಡೆಯಿತು. ಸದಾಶಿವ ಭಟ್ ಸಹಕರಿಸಿದ್ದರು. ವಿದ್ಯಾಧರ್ ಎನ್ .ಶೆಟ್ಟಿ ದಂಪತಿಗಳು ಪೂಜಾವೃತ ಕೈಗೊಂಡಿದ್ದರು. ತದನಂತರ ಭಜನೆ , ಮಹಾಪೂಜೆ, ಮಹಾ ಆರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.ಅಪಾರ ಸಂಖ್ಯೆಯಲ್ಲಿ ಸಾಯಿಭಕ್ತರು ಮಹಾಪೂಜೆ ಯಲ್ಲಿ ಭಾಗವಹಿಸಿದ್ದರು.
ಸಮಿತಿಯ ಉಪಾಧ್ಯಕ್ಷ ಅಡ್ವೆ ಜಯ ಎಸ್.ಶೆಟ್ಟಿ, ಕೋಶಾಧಿಕಾರಿ ರವೀಂದ್ರ ಡಿ.ಶೇಣವ, ಜೊತೆ ಕೋಶಾಧಿಕಾರಿ ಭಾಸ್ಕರ್ ಶೆಟ್ಟಿ ಅತ್ತೂರು , ಟ್ರಸ್ಟಿಗಳಾದ ಸುಧಾಕರ್ ಎಮ್. ಶೆಟ್ಟಿ, ರವೀಂದ್ರ ಎಮ್.ಶೆಟ್ಟಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸತೀಶ್ ಭಂಡಾರಿ, ಪ್ರಸಾದ್ ಶೆಟ್ಟಿ, ಪ್ರದೀಪ್ ಸುವರ್ಣ, ರವಿ ಎಸ್.ಶೆಟ್ಟಿ, ಅಬೂಬಕ್ಕರ್, ಶ್ಯಾಮ್ ಎಸ್.ಕೋಟ್ಯಾನ್,ಪಾರಿತೋಷ್ ಎನ್.ರೈ,ನಿತಿನ್ ಬಿ.ಶೆಟ್ಟಿ, ಕಮಲಾ ಎಸ್.ಶೆಟ್ಟಿ, ರಾಧಿಕಾ ಆರ್.ಶೇಣವ, ಯಶೋಧಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.




