30.9 C
Mumbai
June 8, 2026
Mumbai News Kannada
ಮುಂಬಯಿ

ಕನ್ನಡ ನವತಾರಾ ಕಲಾ ಮಂಡಳಿ ಮಲಾಡ್ (ಪ): 51ನೇ ವಾರ್ಷಿಕ ಮಹಾಪೂಜೆ, ಸಾಧಕರಿಗೆ ಸನ್ಮಾನ ಹಾಗೂ ಯಕ್ಷಗಾನ





ಧರ್ಮ ಮತ್ತು ನೀತಿ ಪಾಠ ಯಕ್ಷಗಾನದಲ್ಲಿ ಲಭ್ಯ: ಸಿಎ ಸುರೇಂದ್ರ ಶೆಟ್ಟಿ

ಚಿತ್ರ ವರದಿ: ದಿನೇಶ್ ಕುಲಾಲ್

ಮುಂಬಯಿ, ಮಾರ್ಚ್ 31: ಮಲಾಡ್ ಪಶ್ಚಿಮದ ಸಮಾಜ ಸೇವಕ ಹಾಗೂ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾದ ದಿವಾಕರ್ ಶೆಟ್ಟಿಗಾರ್ ಗುರುಸ್ವಾಮಿ ಅವರು ಸ್ಥಾಪಿಸಿರುವ ‘ಕನ್ನಡ ನವತಾರಾ ಕಲಾ ಮಂಡಳಿ ಮಲಾಡ್’ ಸಂಸ್ಥೆಯ 51ನೇ ವಾರ್ಷಿಕ ಉತ್ಸವ ಮತ್ತು ಅತಿ ಪುರಾತನ ಕ್ಷೇತ್ರವಾಗಿರುವ ಶ್ರೀ ಪಾಟ್ಲಾದೇವಿ ಮಂದಿರದ ಮಹಾಪೂಜೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಏಪ್ರಿಲ್ 4ನೇ ಶನಿವಾರದಂದು ಮಲಾಡ್‌ನ ಸೋಮವಾರ ಬಜಾರ್‌ನಲ್ಲಿರುವ ಶ್ರೀ ಪಾಟ್ಲಾದೇವಿ ಮಂದಿರದಲ್ಲಿ (ರಾಮ ಮಂದಿರ) ಜರುಗಿತು.

​ಸಂಜೆ ಶ್ರೀ ವರಮಹಾಲಕ್ಷ್ಮಿ ಭಜನಾ ಮಂಡಳಿ ಮಲಾಡ್ ಇವರಿಂದ ಭಜನೆ ನಡೆಯಿತು. ಚಾರ್ಕೋಪ್‌ನ ನಾಗೇಶ್ ಭಟ್ ಪುರೋಹಿತರಿಂದ ಕಳಸಾಭಿಷೇಕ ನಡೆದ ಬಳಿಕ ದಿವಾಕರ್ ಗುರುಸ್ವಾಮಿ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಿದರು.

​ರಾತ್ರಿ ದೇವಸ್ಥಾನದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಂಬೆ ಬಂಟ್ಸ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ ವಹಿಸಿದ್ದರು. ಗೌರವ ಅತಿಥಿಗಳಾಗಿ ಭಾರತ್ ಬ್ಯಾಂಕಿನ ನಿರ್ದೇಶಕ ಸಂತೋಷ್ ಕೆ. ಪೂಜಾರಿ, ಬಿಲ್ಲವರ ಅಸೋಸಿಯೇಷನ್ ಮುಂಬೈನ ಅಧ್ಯಕ್ಷ ಹರೀಶ್ ಜಿ. ಅಮೀನ್, ಶ್ರೀ ಶನಿಮಹಾತ್ಮ ಪೂಜಾ ಸಮಿತಿ ಲಕ್ಷ್ಮಣ್ ನಗರದ ಅಧ್ಯಕ್ಷ ಶ್ರೀನಿವಾಸ್ ಸಾಪಲ್ಯ, ಪದ್ಮಶಾಲಿ ಸೇವಾ ಸಂಘದ ಮಾಜಿ ಅಧ್ಯಕ್ಷ ಉತ್ತಮ್ ಶೆಟ್ಟಿಗಾರ್, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸರೋಜಿನಿ ಶೆಟ್ಟಿಗಾರ್ ಹಾಗೂ ಮಲಾಡ್ ಕನ್ನಡ ಸಂಘದ ಅಧ್ಯಕ್ಷ ಅಡ್ವಕೇಟ್ ಜಗದೀಶ್ ಹೆಗ್ಡೆ, ಅಡ್ವಕೇಟ್ ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು, ಉದ್ಯಮಿ ಲಖನ್ ಕಾಶಿನಾಥ್ ದತ್ ಮತ್ತು ಭಾರತಿ ಲಖನ್ ದತ್ ಉಪಸ್ಥಿತರಿದ್ದರು.

​ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷೀಯ ನುಡಿ:

ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿಎ ಸುರೇಂದ್ರ ಶೆಟ್ಟಿ ಮಾತನಾಡಿ, “ನನ್ನ ಬದುಕಿನಲ್ಲಿ ಇದೊಂದು ಸೌಭಾಗ್ಯ. ವೈವಾಹಿಕ ಜೀವನಕ್ಕೆ ಕಾಲಿರಿಸಿದ ದಿನವೇ ಈ ಪವಿತ್ರ ಸಾನಿಧ್ಯಕ್ಕೆ ಆಗಮಿಸುತ್ತಿದ್ದೇನೆ. ನನ್ನ ಯಶಸ್ಸಿನ ಹಿಂದೆ ಈ ಕ್ಷೇತ್ರದ ದೇವಿಯ ಆಶೀರ್ವಾದವಿದೆ. ಶ್ರೀದೇವಿಗೆ ಯಕ್ಷಗಾನ ಅತ್ಯಂತ ಪ್ರಿಯವಾದ ಕಲೆ, ನನಗೂ ಈ ಕಲೆಯ ಮೇಲೆ ಅಪಾರ ಗೌರವವಿದೆ. ಬಾಲ್ಯದಲ್ಲಿ ವಿದ್ಯಾಭ್ಯಾಸದ ಜೊತೆಗೆ ಯಕ್ಷಗಾನದಲ್ಲಿ ಪಾತ್ರ ಮಾಡುವ ಮೂಲಕ ಸಮಯ ಕಳೆದಿದ್ದೇನೆ. ಭಾರತದ ಸಂಸ್ಕೃತಿ ಉಳಿಯಬೇಕಿದ್ದರೆ ಧರ್ಮ ಜಾಗೃತಿಯಾಗಬೇಕು. ದಿವಾಕರ್ ಶೆಟ್ಟಿಗಾರ್ ಅವರು ಈ ನಿಟ್ಟಿನಲ್ಲಿ ಮಾಡುತ್ತಿರುವ ಕೆಲಸ ಶ್ಲಾಘನೀಯ. ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಿದರೆ ಸಾಲದು, ಅವರಲ್ಲಿ ಸಂಸ್ಕಾರವಿದ್ದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ,” ಎಂದರು.

ಗಣ್ಯರ ಮಾತುಗಳು:

  • ಶ್ರೀನಿವಾಸ ಸಾಫಲ್ಯ: “ಬದುಕಿನಲ್ಲಿ ನಿರುತ್ಸಾಹ ಇರಬಾರದು, ಅದಕ್ಕಾಗಿಯೇ ಇಂತಹ ಉತ್ಸವಗಳು ನಡೆಯುತ್ತವೆ. ದಿವಾಕರ್ ಗುರುಸ್ವಾಮಿಯವರ ಉತ್ಸಾಹ ಮತ್ತು ಸೇವಾ ಕಾರ್ಯಗಳು ಇಷ್ಟೊಂದು ಭಕ್ತರನ್ನು ಒಟ್ಟುಗೂಡಿಸಿವೆ.”
  • ಹರೀಶ್ ಜಿ. ಅಮೀನ್: “ಸಂಸ್ಥೆಯು ದಶಕಗಳಿಂದ ಮಾಡುತ್ತಿರುವ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳ ಬಗ್ಗೆ ಅಭಿಮಾನವಿದೆ. ಈ ಸನ್ಮಾನವನ್ನು ದೇವಿಯ ಪ್ರಸಾದವೆಂದು ಸ್ವೀಕರಿಸಿದ್ದೇನೆ.”
  • ಸರೋಜಿನಿ ಶೆಟ್ಟಿಗಾರ್: “ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಓದಬೇಕು. ಶ್ರೀಕೃಷ್ಣನ ಸಂದೇಶ ಬದುಕಿಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ.”

​ಯಕ್ಷಗಾನ ಕಲಾವಿದ ಗಣೇಶ್ ಶೆಟ್ಟಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ, “ಯಕ್ಷಗಾನ ನನಗೆ ಎಲ್ಲವನ್ನೂ ನೀಡಿದೆ, ಈ ಗೌರವ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ,” ಎಂದರು.

​ಕಾರ್ಯಕ್ರಮವನ್ನು ರಂಗನಟ ಹಾಗೂ ನಿರ್ದೇಶಕ ಗುಣಪಾಲ ಉಡುಪಿ ನಿರೂಪಿಸಿದರು. ನಳಿನಿ ಕರ್ಕೇರ ಮತ್ತು ದಿಶಾ ಕರ್ಕೇರ ಅತಿಥಿಗಳನ್ನು ಪರಿಚಯಿಸಿದರು. ಸನತ್ ಪೂಜಾರಿ ಕೆಲ್ಲಪುತ್ತಿಗೆ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಗೀತಾಂಬಿಕ ಕೃಪಾಪೋಷಿತ ಯಕ್ಷಗಾನ ಮಂಡಳಿ ಅಸಲ್ಪ ಇವರಿಂದ ‘ಕೋಟಿ ಚೆನ್ನಯ’ ತುಳು ಯಕ್ಷಗಾನ ಪ್ರದರ್ಶನಗೊಂಡಿತು.

ಧಾರ್ಮಿಕ ಮತ್ತು ಸಾಮಾಜಿಕ ಸೇವೆ ಆತ್ಮತೃಪ್ತಿ ನೀಡುತ್ತದೆ: ದಿವಾಕರ್ ಶೆಟ್ಟಿಗಾರ್ ಗುರುಸ್ವಾಮಿ

​ಕಳೆದ 51 ವರ್ಷಗಳಿಂದ ಶ್ರೀ ಪಾಟ್ಲಾದೇವಿ ಮಂದಿರದಲ್ಲಿ ವೈಭವದ ಸೇವೆಗಳನ್ನು ನಡೆಸುತ್ತಾ ಬಂದಿರುವ ದಿವಾಕರ್ ಶೆಟ್ಟಿಗಾರ್ ಗುರುಸ್ವಾಮಿ ಮಾತನಾಡಿ, “ಭಕ್ತರೆಲ್ಲರ ಸಹಕಾರದಿಂದ ಈ ಎಲ್ಲಾ ಸೇವೆಗಳನ್ನು ಮಾಡುವ ಭಾಗ್ಯ ನಮಗೆ ಒದಗಿ ಬಂದಿದೆ. ದೇವರ ಮೇಲಿನ ನಂಬಿಕೆ ಮತ್ತು ವಿಶ್ವಾಸದಿಂದ ಮಾಡಿದ ಈ ಸೇವೆಗಳು ನನಗೆ ಯಶಸ್ಸು ಮತ್ತು ಆತ್ಮತೃಪ್ತಿಯನ್ನು ತಂದಿವೆ,” ಎಂದು ಹರ್ಷ ವ್ಯಕ್ತಪಡಿಸಿದರು.



Related posts

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ – ವಿಜೃಂಭಣೆಯಿಂದ ಜರಗಿದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 170ನೇ ಜಯಂತ್ಯುತ್ಸವ

Mumbai News Desk

ಮುಂಬಯಿ ಸ್ವರ್ಣೋದ್ಯಮಿ ಶ್ರೀಧರ ವಿ. ಆಚಾರ್ಯ ಅವರಿಗೆ ‘ಬಿ. ಹರಿಶ್ಚಂದ್ರ ಆಚಾರ್ಯ ಸ್ಮಾರಕ ಪ್ರಶಸ್ತಿ’ ಪ್ರದಾನ

Mumbai News Desk

ಕಾಲಘೋಡ ಶ್ರೀ ಸಾಯಿಬಾಬಾ ಪೂಜಾ ಸಮಿತಿಯ 53ನೇ ವಾರ್ಷಿಕ ಮಹಾಪೂಜೆ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಾಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಗುರು ಪೂರ್ಣಿಮ ಪೂಜೆ.

Mumbai News Desk

ಶ್ರೀ ಮೂಕಾಂಬಿಕ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ : ಮಹಾ ಶಿವರಾತ್ರಿಯ ಅಂಗವಾಗಿ ಏಕಹಾ ಭಜನೆ

Mumbai News Desk

ಕುಲಾಲ ಸಂಘ ಮುಂಬಯಿ,ಥಾಣ, ಕಸರಾ , ಕರ್ಜತ್ ಮತ್ತು ಭಿವಂಡಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಹಳದಿ ಕುಂಕುಮ

Mumbai News Desk