
ಮುಂಬಯಿ, ಡಿಸೆಂಬರ್ 2: ಬೆಂಗಳೂರಿನ ಸಿರಿಕಲಾ ಮೇಳ ಈ ಬಾರಿ ಪುಣೆ-ಮುಂಬೈ ಯಕ್ಷಗಾನ ತಿರುಗಾಟದ ದಶಮಾನೋತ್ಸವದ ಆಚರಣೆಯನ್ನು ಸಂಭ್ರಮದಲ್ಲಿ ಆಚರಿಸಲು ಸಜ್ಜಾಗಿದೆ.
ಯಕ್ಷಗಾನ ಮೇಳವನ್ನು ಕಟ್ಟುವುದು ಹೆಚ್ಚಿನವರಿಗೆ ಹಣ ಸಂಪಾದನೆಯ ಒಂದು ಗುರಿಯಾದರೆ, ಮತ್ತೆ ಕೆಲವರಿಗೆ ಕಲೆಯ ಪ್ರಚಾರ, ಉಳಿಸುವಿಕೆ ಮತ್ತು ಬೆಳೆಸುವಿಕೆ ಗುರಿಯಾಗಿರುತ್ತದೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕಡತೋಕದವರಾದ ಸುರೇಶ್ ಹೆಗಡೆ ಅವರು ಎರಡನೇ ವರ್ಗಕ್ಕೆ ಸೇರುತ್ತಾರೆ. ಏಕೆಂದರೆ, ಯಕ್ಷಗಾನ ಮೇಳ ಕಟ್ಟುವುದು ಇವರ ವೃತ್ತಿಯಂತೆ ಅಲ್ಲ. ಆ ಮೇಳದ ಆದಾಯದಿಂದ ಕುಟುಂಬ ಪೋಷಣೆ ಮಾಡಬೇಕಾದ ಅನಿವಾರ್ಯತೆ ಇವರಿಗಿಲ್ಲ. ಸುರೇಶ್ ಹೆಗಡೆ ಅವರ ಕನಸಿನ ಕೂಸಾದ ಸಿರಿಕಲಾ ಯಕ್ಷಗಾನ ಮೇಳ ಈಗಾಗಲೇ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ, ಪರ ದೇಶಗಳಲ್ಲಿ ಪ್ರದರ್ಶನ ನೀಡುವುದರ ಮೂಲಕ ಪ್ರಸಿದ್ಧಿಯನ್ನು ಪಡೆದುಕೊಂಡಿರುತ್ತದೆ. ಕರ್ನಾಟಕ ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಉಳಿಸಿ, ಬೆಳೆಸಬೇಕು ಎನ್ನುವುದು ಸುರೇಶ್ ಹೆಗಡೆ ಅವರ ಮಹತ್ವಾಕಾಂಕ್ಷೆ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ಮಾತಿನಂತೆ, ಪ್ರದರ್ಶನದಿಂದ ದೊರಕುವ ಹಣದ ಹೆಚ್ಚಿನ ಭಾಗವನ್ನು ಅವರು ‘ಸಿರಿಕಲಾ ಪುರಸ್ಕಾರ’ ಮತ್ತು ‘ಸಿರಿಕಲಾ ಪೋಷಕ ಪ್ರಶಸ್ತಿ’ ಎಂಬ ಹೆಸರಿನಲ್ಲಿ ಯಕ್ಷಗಾನ ಕ್ಷೇತ್ರದ ಸಾಧಕರನ್ನು ಮತ್ತು ಪ್ರೋತ್ಸಾಹಕರನ್ನು ಗುರುತಿಸಿ ಗೌರವಿಸುತ್ತಾ ಬರುವ ಪರಿಪಾಠವನ್ನು ಹೊಂದಿದ್ದಾರೆ. ಕಳೆದ ವರ್ಷ ಹಿರಿಯ ಪ್ರಸಿದ್ಧ ಭಾಗವತ ಕೆ.ಪಿ. ಹೆಗಡೆ ಅವರಿಗೆ 30,000 ನಗದಿನೊಂದಿಗೆ ‘ಸಿರಿಕಲಾ ಪ್ರಶಸ್ತಿ’ ನೀಡಿ ಗೌರವಿಸಿದ್ದರು. ಈ ವರ್ಷ ಕೆ.ಪಿ. ಹೆಗಡೆ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಿದ್ದನ್ನು ಇಲ್ಲಿ ಸೇರಿಸಿಕೊಳ್ಳಬಹುದು.
ಯಕ್ಷಗಾನ ಕಲೆಯ ಉಳಿಯುವಿಕೆಗೆ ಪೋಷಕರ ಪಾತ್ರ ತುಂಬಾ ಮಹತ್ವದ್ದು. ಯಕ್ಷಗಾನ ಕಲೆಯ ಉಳಿಸಲು ಸಾಕಷ್ಟು ಮಂದಿ ಎಲೆ ಮರೆಯ ಕಾಯಿಯಂತೆ ಶ್ರಮಿಸುತ್ತಿದ್ದಾರೆ. ಸುರೇಶ್ ಹೆಗಡೆಯವರು ಇಂತಹವರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ‘ಸಿರಿಕಲಾ ಪೋಷಕ ಪ್ರಶಸ್ತಿ’ ನೀಡುವುದರ ಮೂಲಕ ಮಾಡುತ್ತಾ ಬರುತ್ತಿದ್ದಾರೆ. ಇದು ಸುರೇಶ್ ಹೆಗಡೆ ಅವರ ಯಕ್ಷಗಾನ ಕಲೆಯ ಮೇಲಿನ ಅಭಿಮಾನ ಮತ್ತು ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ.















ಈ ಸಿರಿಕಲಾ ಯಕ್ಷಗಾನ ಮೇಳವು ಅತಿಥಿ ಕಲಾವಿದರನ್ನು ಒಟ್ಟುಗೂಡಿಸಿಕೊಂಡು ಮುಂಬೈ ಆಸುಪಾಸಿನಲ್ಲಿ ಹಾಗೂ ಪುಣೆ, ಗುಜರಾತ್ನಲ್ಲಿ ಯಕ್ಷಗಾನ ಪ್ರದರ್ಶನ ನೀಡುವ ಪರಿಪಾಠವನ್ನು ಕಳೆದ 10 ವರ್ಷಗಳಿಂದ ಮುಂದುವರಿಸಿಕೊಂಡು ಬರುತ್ತಿದ್ದು, ಈ ಬಾರಿ ದಶಮಾನೋತ್ಸವ ಸಂಭ್ರಮವನ್ನು ಆಚರಿಸಲು ಸಜ್ಜಾಗಿ ಬರುತ್ತಿದ್ದಾರೆ. ಯಕ್ಷ ತಿರವಳಿ, ಯಕ್ಷ ಚತುರ್ಥಿ, ಯಕ್ಷ ಪಂಚಮಿ, ಯಕ್ಷ ಸಪ್ತಮಿ, ಯಕ್ಷ ನವಮಿ ಆಚರಿಸುವುದು ಇವರ ಸಂಪ್ರದಾಯ.
ಸಿರಿಕಲಾ ಮೇಳದ ಯಕ್ಷಗಾನ ಮಂಡಳಿಯಲ್ಲಿ ಈ ಬಾರಿ ಹಿಮ್ಮೇಳದಲ್ಲಿ ಭಾಗವತರುಗಳಾಗಿ ಸುರೇಶ ಶೆಟ್ಟಿ ಶಂಕರನಾರಾಯಣ ಮತ್ತು ಸುಬ್ರಾಯ ಹೆಬ್ಬಾರ್, ಮದ್ದಳೆಯಲ್ಲಿ ಅನಂತಪದ್ಮನಾಭ ಪಾಟಕ್ ಮತ್ತು ಚೆಂಡೆಯಲ್ಲಿ ರಾಮನ್ ಸಹಕರಿಸಿದರೆ, ಮುಮ್ಮೇಳದ ಕಲಾವಿದರಾಗಿ ಗೋಪಾಲ ಆಚಾರಿ ತೀರ್ಥಹಳ್ಳಿ, ಅರ್ಪಿತ ಹೆಗ್ಡೆ, ನಾಗೇಂದ್ರ ಮರೂರು, ರಕ್ಷಿತ್ ಕುಳಿಮನೆ, ಭರತ್ ರಾಜ್ ಪಕ್ಕಳ, ರಮೇಶ್ ಬಿರ್ತಿ, ಅಶ್ವಿನಿ ಕೊಂಡದಕುಳಿ, ನಿಹಾರಿಕಾ ಭಟ್, ಕುಮಾರಿ ಪರಿಣಿಕ ಹೊಳ್ಳ, ಸಿಂಧುಶ್ರೀ ಹೆಬ್ಬಾರ್ ಸಹಕರಿಸಲಿದ್ದಾರೆ. ಮುಂಬೈಯಲ್ಲಿ ಸೀತಾರಾಮ ಶೆಟ್ಟಿ ಆರೂರು ಮತ್ತು ಹೆರಂಜೆ ರಮೇಶ್ ಶೆಟ್ಟಿ ಅವರು ವಿಶೇಷ ಸಹಕಾರವನ್ನು ನೀಡಲಿದ್ದಾರೆ.









ಮೇಳದ ಸಂಚಾಲಕತ್ವವನ್ನು ಸುರೇಶ್ ಹೆಗಡೆ ಕಡತೋಕ ವಹಿಸಲಿದ್ದು, ಶ್ರೀದೇವಿ ಹೆಗಡೆ ಮತ್ತು ಮಹಾಬಲೇಶ್ವರ ಟಿ.ಎಸ್. ಅವರ ಸಹಕಾರ ಇರುತ್ತದೆ.
🗓️ ಪ್ರದರ್ಶನ ವಿವರಗಳು:
| ದಿನಾಂಕ | ವಾರ | ಸಮಯ | ಸ್ಥಳ | ಆಖ್ಯಾನ | ರಚನೆಕಾರರು |
|---|---|---|---|---|---|
| 13.12.2025 | ಶನಿವಾರ | ಸಂಜೆ 6:00 ಗಂಟೆಗೆ | ಆಚಾರ್ಯ ಅತ್ರೆ ರಂಗ ಮಂದಿರ, ಸಂತ ತುಕಾರಾಂ ನಗರ, ಪಿಂಪ್ರಿ, ಪುಣೆ | ಲವ ಕುಶ | ಎಂ.ಎ. ಹೆಗಡೆ ವಿರಚಿತ |
| 14.12.2025 | ರವಿವಾರ | ಸಂಜೆ 6:00 ಗಂಟೆಗೆ | ಶ್ರೀ ವರದ ಸಿದ್ಧಿವಿನಾಯಕ ಮಂದಿರ ಸಭಾ ಗೃಹ, ಡೊಂಬಿವಲಿ ಪೂರ್ವ | ಶ್ರೀ ಕೃಷ್ಣ ಪಾರಿಜಾತ | ಅಜ್ಪುರ ಸುಬ್ರಾಯ ವಿರಚಿತ |
| 15.12.2025 | ಸೋಮವಾರ | ಸಂಜೆ 6:00 ಗಂಟೆಗೆ | ಗೀತಾಂಜಲಿ ಮಂದಿರ, ಘಾಟ್ಕೋಪರ್ ಅಸಲ್ಫಾ | ಧರ್ಮಗಂಗದ ದಿಗ್ವಿಜಯ | ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ |
| 16.12.2025 | ಮಂಗಳವಾರ | ಸಂಜೆ 6:00 ಗಂಟೆಗೆ | ಶನೈಶ್ಚರ ಮಂದಿರ, ನೆರೂಳ್, ನವಿ ಮುಂಬೈ | ಕಂಸ ವಧೆ | ಗುಂಡು ಸೀತಾರಾಮಯ್ಯ ವಿರಚಿತ |
| 17.12.2025 | ಬುಧವಾರ | ಸಂಜೆ 6:00 ಗಂಟೆಗೆ | ನವಿ ಮುಂಬೈ ಕನ್ನಡ ಸಂಘ, ವಾಶಿ | ಮಾಯಾ ಪುರಿ | |
| 18.12.2025 | ಗುರುವಾರ | ಸಂಜೆ 6:00 ಗಂಟೆಗೆ | ಕರ್ನಾಟಕ ಸಂಘ, ಪನ್ವೇಲ್ | ಲವ ಕುಶ | ಎಂ.ಎ. ಹೆಗಡೆ ವಿರಚಿತ |
| 19.12.2025 | ಶುಕ್ರವಾರ | ಸಂಜೆ 6:00 ಗಂಟೆಗೆ | ಸಂತ ಜ್ಞಾನೇಶ್ವರ ಶಾಲೆ, ಮಹಾತ್ಮ ಫುಲೆ ರಸ್ತೆ, ಡೊಂಬಿವಲಿ ಪಶ್ಚಿಮ | ಭಸ್ಮಾಸುರ ಮೋಹಿನಿ | |
| 20.12.2025 | ಶನಿವಾರ | ಸಂಜೆ 5:00 ಗಂಟೆಗೆ | ಪ್ಲಾಟಿನಂ ಬ್ಯಾಂಕ್ವೆಟ್, ಮಾನಪಾದ ರಸ್ತೆ, ಡೊಂಬಿವಲಿ ಪಶ್ಚಿಮ | ಜ್ವಾಲಾ ಪ್ರತಾಪ | ಹಸ್ತೆಟ ಮಂಜುನಾಥ ಭಾಗವತ ವಿರಚಿತ |
| 21.12.2025 | ರವಿವಾರ | ಸಂಜೆ 6:00 ಗಂಟೆಗೆ | ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ವಿರಚಿತ ಪಾಂಚಜನ್ಯ ಮತ್ತು ಹಟ್ಟು ಅಂಗಡಿ ರಾಮ ಭಟ್ ವಿರಚಿತ ಶರ ಸೇತು ಬಂಧ ಎಂಬ ಆಖ್ಯಾನಗಳನ್ನು ಪ್ರದರ್ಶಿಸಲಾಗುವುದು. | ಥಾಣೆ | ಪಾಂಚಜನ್ಯ ಮತ್ತು ಶರ ಸೇತು ಬಂಧ |
ಉಚಿತ ಪ್ರವೇಶದ ಈ ಎಲ್ಲಾ ಯಕ್ಷಗಾನ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕೆಂದು ಸಿರಿಕಲಾ ಯಕ್ಷಗಾನ ಮೇಳದ ಪರವಾಗಿ ಸುರೇಶ್ ಹೆಗಡೆ ಕಡತೋಕ ಅವರು ವಿನಂತಿಸಿಕೊಂಡಿದ್ದಾರೆ.




