
ಮುಂಬಯಿ: ಮಹಾನಗರದ ಪ್ರತಿಷ್ಠಿತ ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಯಾದ ಶ್ರೀ ಕೃಷ್ಣ-ವಿಠ್ಠಲ ಪ್ರತಿಷ್ಠಾನ (ರಿ) ಇದರ 28ನೇ ವರ್ಷದ ವಾರ್ಷಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವವು ಇದೇ ಡಿಸೆಂಬರ್ 25, ಗುರುವಾರ ಬೆಳಿಗ್ಗೆ 6ರಿಂದ ಮಧ್ಯಾಹ್ನ 3ರವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಸಂಸ್ಥೆಯ ಸಂಸ್ಥಾಪಕರು ಹಾಗೂ ಗೌರವಾಧ್ಯಕ್ಷರಾದ ಪ್ರಸಿದ್ಧ ಹರಿಕಥಾ ವಿದ್ವಾಂಸ, ‘ವಿಶ್ವೇಶದಾಸ’ ಬಿರುದಾಂಕಿತ ವಿದ್ವಾನ್ ವಿಶ್ವನಾಥ್ ಭಟ್ ಕೈರಬೆಟ್ಟು ಅವರ ನೇತೃತ್ವದಲ್ಲಿ, ಯೋಗ್ಯ ವಿಪ್ರ ವೃಂದದವರೊಂದಿಗೆ “ಅಷ್ಟೋತ್ತರ ಶತ ನಾಲಿಕೇರ ಮಹಾಗಣಪತಿ ಯಾಗ” ಹಾಗೂ “ಸನವಗ್ರಹ ಶನೈಶ್ಚರ ಮಹಾಪೂಜೆ” ನೆರವೇರಲಿದೆ.
ಕಾರ್ಯಕ್ರಮದ ವಿವರ:
ಅಂದು ಬೆಳಿಗ್ಗೆ 6 ಗಂಟೆಯಿಂದ ಪುಣ್ಯಾಹವಾಚನೆ, ಋತ್ವಿಗ್ ವರಣ, ವಾಸ್ತು ರಕ್ಷೆ, ದೇವತಾ ಪ್ರಾರ್ಥನೆ ನಡೆಯಲಿದ್ದು, 8 ಗಂಟೆಯಿಂದ ವೇದ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಮತ್ತು ವಾದ್ಯ ಘೋಷಗಳೊಂದಿಗೆ ಮಹಾ ಸಂಕಲ್ಪ ನಡೆಯಲಿದೆ. ಮಧ್ಯಾಹ್ನ 11 ಗಂಟೆಗೆ ಮಹಾಮಂಗಳಾರತಿ, ಪೂರ್ಣಾಹುತಿ, ಅಷ್ಟಾವಧಾನ ಸೇವೆ ಜರುಗಲಿದ್ದು, 11:30ಕ್ಕೆ ತೀರ್ಥಪ್ರಸಾದ ವಿತರಣೆ, ಧಾರ್ಮಿಕ ಸಭೆ ಹಾಗೂ ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
27 ವರ್ಷಗಳ ಸಾರ್ಥಕ ಹಾದಿ:

ಪೇಜಾವರ ಶ್ರೀಗಳ ‘ಪೂರ್ಣಪ್ರಜ್ಞ ವಿದ್ಯಾಮಠ’ದಲ್ಲಿ ಪಳಗಿದ ವಿದ್ವಾನ್ ವಿಶ್ವನಾಥ್ ಭಟ್ ಅವರು 1997ರಲ್ಲಿ ಪೇಜಾವರ ಶ್ರೀಗಳ ಹಸ್ತದಿಂದಲೇ ಈ ಸಂಸ್ಥೆಗೆ ಚಾಲನೆ ನೀಡಿದ್ದರು. ಕಳೆದ 27 ವರ್ಷಗಳಿಂದ ಸಂಸ್ಥೆಯು ಧರ್ಮ, ಶಿಕ್ಷಣ, ಆರೋಗ್ಯ ಮತ್ತು ಸಂಸ್ಕೃತಿ ಎಂಬ ಚತುರ್ಮುಖ ಯೋಜನೆಗಳ ಮೂಲಕ ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿದೆ. ಹರಿಕಥೆಯ ಮೂಲಕ ಭಕ್ತಿಯ ಬೀಜ ಬಿತ್ತುತ್ತಾ ಬಂದಿರುವ ವಿಶ್ವನಾಥ್ ಭಟ್ ಅವರು ಕಳೆದ 18 ವರ್ಷಗಳಿಂದ ಮುಂಬಯಿಯಲ್ಲಿ ನಿರಂತರ ಹರಿಕಥಾ ಸೇವೆಯನ್ನು ನಡೆಸುತ್ತಿದ್ದಾರೆ.

ಸಂಸ್ಥೆಯು ಕೇವಲ ಧಾರ್ಮಿಕ ಕಾರ್ಯಗಳಿಗಷ್ಟೇ ಸೀಮಿತವಾಗದೆ, 30ಕ್ಕೂ ಹೆಚ್ಚು ಶಾಲೆಗಳಿಗೆ ಪೀಠೋಪಕರಣ, ಪ್ರೊಜೆಕ್ಟರ್ ವಿತರಿಸುವ ‘ಶಿಕ್ಷಣ ಸಮೃದ್ಧಿ’ ಹಾಗೂ ಅಶಕ್ತರಿಗೆ ವೈದ್ಯಕೀಯ ನೆರವು ನೀಡುವ ‘ಆರೋಗ್ಯ ಸಮೃದ್ಧಿ’ ಯೋಜನೆಗಳ ಮೂಲಕ ಮಾದರಿಯಾಗಿದೆ. ಈವರೆಗೆ ಸುಮಾರು 150ಕ್ಕೂ ಹೆಚ್ಚು ಸಾಧಕರನ್ನು ಬಿರುದು ನೀಡಿ ಸನ್ಮಾನಿಸಲಾಗಿದೆ.
ಈ ಮಹೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಕೃಷ್ಣ-ವಿಠ್ಠಲ ಹಾಗೂ ಶನಿದೇವರ ಕೃಪೆಗೆ ಪಾತ್ರರಾಗಬೇಕೆಂದು ಪ್ರತಿಷ್ಠಾನದ ವಿಶ್ವಸ್ಥರಾದ ಸುಮಾ ವಿಶ್ವನಾಥ್ ಭಟ್, ಅಶೋಕ್ ಕುಮಾರ್ ಶೆಟ್ಟಿ ಪೆರ್ಮುದೆ, ಕಳತ್ತೂರು ವಿಶ್ವನಾಥ್ ಜೆ. ಶೆಟ್ಟಿ, ಡಾ| ವಿರಾರ್ ಶಂಕರ್ ಬಿ. ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಗೋಪಾಲ ಎಸ್. ಪುತ್ರನ್, ಸುರೇಂದ್ರ ಎ. ಪೂಜಾರಿ ಮತ್ತು ರಮೇಶ್ ಡಿ. ಸಾವಂತ್, ಪ್ರಧಾನ ಕಾರ್ಯದರ್ಶಿ ಸುಶೀಲಾ ಎಸ್. ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಕ್ಷ್ಮಿ ಕೋಟ್ಯಾನ್, ಶ್ಯಾಮ್ ಸುಂದರ್ ಸಾಲಿಯಾನ್, ನವೀನ್ ಪಡು ಇನ್ನ, ದಿನೇಶ್ ಕರ್ಕೇರ, ಶ್ಯಾಮಲಾ ಶಾಸ್ತ್ರಿ, ಸುಚಿತ್ರಾ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಕೋರಿದ್ದಾರೆ.
.




