28.4 C
Mumbai
March 7, 2026
Mumbai News Kannada
ಮುಂಬಯಿ

ದಾಸ ಸಾಹಿತ್ಯಕ್ಕೆ ಹರಿದಾಸರ ಕೊಡುಗೆ ಅನನ್ಯ: ಮಧುಸೂದನ್‌ ಟಿ.ಆರ್‌.





ಮುಂಬಯಿ: “ಹರಿದಾಸರು ದಾಸ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡುವ ಮೂಲಕ ಕನ್ನಡ ಸಾಹಿತ್ಯ ಸರಸ್ವತಿಯ ಮಡಿಲನ್ನು ಶ್ರೀಮಂತಗೊಳಿಸಿದ್ದಾರೆ. ಈ ಹರಿದಾಸರ ಪೈಕಿ ಶ್ರೀ ಪುರಂದರದಾಸರು ಪ್ರಮುಖರು. ಅವರು ಸುಮಾರು 4.75 ಲಕ್ಷ ಕೃತಿಗಳನ್ನು ರಚಿಸಿದ್ದರೂ, ಅವುಗಳಲ್ಲಿ ಬಹುಪಾಲು ಕೃತಿಗಳು ಲಭ್ಯವಾಗಿಲ್ಲ. ಶ್ರೀ ಪುರಂದರದಾಸರ ಕೀರ್ತನೆಗಳನ್ನು ಹಾಡುವುದರಿಂದ ಮತ್ತು ಆಲಿಸುವುದರಿಂದ ದೊರೆಯುವ ಆನಂದ ವರ್ಣನಾತೀತ,” ಎಂದು ಮುಂಬಯಿ ಕನ್ನಡ ಕಲಾಕೇಂದ್ರದ ಅಧ್ಯಕ್ಷ ಹಾಗೂ ಉದ್ಯಮಿ ಮಧುಸೂದನ್‌ ಟಿ.ಆರ್. ಅವರು ಅಭಿಪ್ರಾಯಪಟ್ಟರು.

​ಜನೆವರಿ 18ರಂದು ಸಂಜೆ ಮಾಟುಂಗಾದ ಮೈಸೂರು ಅಸೋಸಿಯೇಷನ್‌ನ ಕಿರು ಸಭಾಗೃಹದಲ್ಲಿ ಮುಂಬಯಿ ಕನ್ನಡ ಸಂಘ ಆಯೋಜಿಸಿದ್ದ ‘ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ’ದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ಕಳೆದ 75 ವರ್ಷಗಳಿಂದ ಸಂಘವು ನಿರಂತರವಾಗಿ ಈ ಆರಾಧನೆಯನ್ನು ನಡೆಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಂಘದ ಚಟುವಟಿಕೆಗಳನ್ನು ತಾನು ನಿಕಟವಾಗಿ ಗಮನಿಸುತ್ತಿದ್ದೇನೆ ಎಂದರು. 90 ವರ್ಷಗಳನ್ನು ಪೂರೈಸಿ 91ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂಘವು ಇನ್ನು ಹೆಚ್ಚಿನ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುನ್ನಡೆಯಲಿ ಎಂದು ಹಾರೈಸಿದರು.

  • ಕಾರ್ಯಕಾರಿ ಸಮಿತಿಯ ಸದಸ್ಯ ನಾರಾಯಣ ರಾವ್‌ ಅವರು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರಾಮಚಂದ್ರ ಭಟ್‌ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸಂಘದ ಅಧ್ಯಕ್ಷರಾದ ಗುರುರಾಜ ಎಸ್. ನಾಯಕ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ವತಿಯಿಂದ ಪ್ರತಿವರ್ಷ ಪುರಂದರದಾಸರ ಆರಾಧನೆ, ಗಣೇಶೋತ್ಸವ, ಶಾರದಾ ಪೂಜೆ, ದತ್ತಿ ಉಪನ್ಯಾಸ ಹಾಗೂ ಕನ್ನಡೇತರರಿಗಾಗಿ ಕನ್ನಡ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಅಲ್ಲದೆ, ಮಾಟುಂಗಾದಲ್ಲಿ ನಿರ್ಮಾಣ ಹಂತದಲ್ಲಿರುವ ಸಂಘದ ನೂತನ ಕಾರ್ಯಾಲಯಕ್ಕೆ ಎಲ್ಲರೂ ತನು-ಮನ-ಧನದಿಂದ ಸಹಕರಿಸಬೇಕೆಂದು ಮನವಿ ಮಾಡಿದರು.
  • ​ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಜನಿ ಪೈ ಅವರು ಮಾತನಾಡುತ್ತಾ, ಸಂಘಕ್ಕಾಗಿ ಶ್ರಮಿಸಿದವರೆಲ್ಲರೂ ಜೀವನದಲ್ಲಿ ಪ್ರಗತಿ ಕಂಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಪುಣೆಯ ಶ್ರೀ ರಾಮ್‌ ಭಜನ್‌ ಮಂಡಳ್‌ನ ಸಂಸ್ಥಾಪಕ ದತ್ತಾತ್ರೇಯ ರಾವ್‌, ಸಕ್ರಿಯ ಸದಸ್ಯ ಗಿರೀಶ್ಚಂದ್ರ ಪೈ ಮತ್ತು ನಿರ್ವಾಹಕಿ ಅನುಪಮಾ ಶೆಣೈ ಅವರನ್ನು ಮುಖ್ಯ ಅತಿಥಿಗಳು ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಗೌರವಿಸಿದರು.
  • ​ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್. ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯ ಸುಧಾಕರ ಸಿ. ಪೂಜಾರಿ ವಂದನಾರ್ಪಣೆ ಮಾಡಿದರು. ಕೋಶಾಧಿಕಾರಿ ರಾಜೇಂದ್ರ ಗಡಿಯಾರ್‌ ಹಾಗೂ ನಿಧಿ ಸಂಗ್ರಹಣಾ ಸಮಿತಿಯ ಚೇರ್ಮನ್ ಸತೀಶ್ ಬಂಗೇರ ವೇದಿಕೆಯಲ್ಲಿದ್ದರು. ನೇಮಿರಾಜ್‌ ಶೆಟ್ಟಿ, ನಾಗೇಶ್‌ ಕುಂದರ್‌, ಯೋಗೀಶ್‌ ಶೆಣೈ ಮತ್ತು ಎಸ್.ಕೆ. ಪದ್ಮನಾಭ್‌ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

​ಬಳಿಕ ಪುಣೆಯ ಶ್ರೀ ರಾಮ್ ಭಜನ್ ಮಂಡಳ್ ಸದಸ್ಯರು ಪುರಂದರದಾಸರ ಹಾಗೂ ಇತರ ದಾಸರ ಭಜನೆಗಳನ್ನು ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ತಂಡದಲ್ಲಿ ಅನುಪಮಾ ಶೆಣೈ, ಅರ್ಚನಾ ಪೈ, ದತ್ತಾತ್ರೇಯ ರಾವ್‌, ಗೀತಾ ಪ್ರಭು, ಗಿರೀಶ್ಚಂದ್ರ ಪೈ, ಕಾಮಾಕ್ಷಿ ಕಿಣಿ, ಮೀನಾಕ್ಷಿ ರಾವ್‌, ಪ್ರಭಾ ಕಿಣಿ, ರೇಖಾ ಶಾನುಭಾಗ್‌, ಶ್ವೇತಾ ಶಾನುಭಾಗ್, ಸ್ಮಿತಾ ಬಾಳಿಗಾ, ಸುಧಾ ಪ್ರಭು, ವೈಶಾಲಿ ಕಾಮತ್‌, ವಂದನಾ ನಾಯಕ್‌, ವಿಜಯಲಕ್ಷ್ಮೀ ಕಾಮತ್‌ ಹಾಗೂ ಯೋಗಿತಾ ಕಾಮತ್‌ ಪಾಲ್ಗೊಂಡಿದ್ದರು. ಇವರಿಗೆ ತಬಲಾದಲ್ಲಿ ಶಿವಾನಂದ ಶೆಣೈ ಮತ್ತು ಹಾರ್ಮೋನಿಯಂನಲ್ಲಿ ದತ್ತಾ ರಾವ್‌ ಸಾಥ್ ನೀಡಿದರು. ಘಾಟ್‌ಕೋಪರ್‌ನ ಎಸ್.ವಿ.ಡಿ.ಡಿ. ಶಾಲೆಯ ಸಂಗೀತ ಶಿಕ್ಷಕಿ ಎಚ್.ಕೆ. ಶೃತಿ ಅವರು ಹಾಡಿದ ಕೀರ್ತನೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

ಸೋಮನಾಥ ಎಸ್‌.ಕರ್ಕೇರ, 9819321186



Related posts

ಮಲಾಡ್ ಪೂರ್ವ ದ  ಲಕ್ಷ್ಮಣ್ ನಗರದ ಶ್ರೀ ಶನೀಶ್ವರ ಮಹೋತಭಾರ  ದೇವಸ್ಥಾನದ ಟ್ರಸ್ಟಿನ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗು ಶಿಕ್ಷಣದ ನೆರವು.

Mumbai News Desk

ತ್ರಿಶಾ ಉದಯ ಶೆಟ್ಟಿ ಶೇಗೆ   80.00 %

Mumbai News Desk

ಎಲ್ಲರ ಬದುಕಲ್ಲಿ ಧರ್ಮ ಕಾರ್ಯಗಳು ನಡೆಯಲಿ: ಸಾಣೂರು ಸಾಂತಿಂಜ ಜನಾರ್ದನ ಭಟ್‌

Mumbai News Desk

ಬಂಟರ ಸಂಘ ಮುಂಬಯಿ – ವಸಯಿ ಡಹಣು ಪ್ರಾದೇಶಿಕ ಸಮಿತಿಯ ವತಿಯಿಂದ ವಿಶ್ವ ಯೋಗ ದಿನಾಚರಣೆ. 

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಾಯಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಆರ್ಥಿಕ ನೆರವು ನೀಡುವ ಕಾರ್ಯಕ್ರಮ.

Mumbai News Desk

ಶ್ರೀ ಮೂಕಾಂಬಿಕ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ : ಮಹಾ ಶಿವರಾತ್ರಿಯ ಅಂಗವಾಗಿ ಏಕಹಾ ಭಜನೆ

Mumbai News Desk