
ಮುಂಬೈ: ಇಲ್ಲಿನ ದಕ್ಷಿಣ ಮುಂಬೈನ ಬಾಣಗಂಗಾ ಪರಿಸರದ ವಾಲ್ಕೇಶ್ವರದಲ್ಲಿರುವ ಕೈವಲ್ಯ ಮಠದ ಕಾಳಿಕಾ ಮಾತೆ ದೇವಸ್ಥಾನದಲ್ಲಿ ಮಾಘ ಮಾಸದ ಪವಿತ್ರ ಸಂದರ್ಭದಲ್ಲಿ ‘ಮಹಾ ಪಂಚಮಿ’ ಉತ್ಸವವು ಶುಕ್ರವಾರ (ಜ. 23) ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು.

ಮಠಾಧಿಪತಿ ಪರಮ ಪೂಜ್ಯ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಅವರ ಆಶೀರ್ವಾದ ಹಾಗೂ ಆದೇಶದ ಮೇರೆಗೆ ಈ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಾತಃಕಾಲದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ವೈದಿಕರ ಸಹಯೋಗದೊಂದಿಗೆ ಗಣೇಶ ಪೂಜೆ ನೆರವೇರಿತು. ಪ್ರಸಿದ್ಧ ಸಂಗೀತಗಾರರಾದ ಶ್ರೀ ಅವಧೂತ್ ರೇಗೆ ದಂಪತಿಯ ಯಜಮಾನತ್ವದಲ್ಲಿ ‘ಚಂಡಿಕಾ ಹವನ’ ಶ್ರದ್ಧಾಭಕ್ತಿಯಿಂದ ನಡೆಯಿತು. ನಂತರ ಶಾಸ್ತ್ರೋಕ್ತವಾಗಿ ಕುಮಾರಿಕಾ ಪೂಜೆ ನೆರವೇರಿಸಲಾಯಿತು.

ಯಜ್ಞ-ಹವನಗಳ ಪೂರ್ಣಾಹುತಿಯು ನೂರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು. ಮಧ್ಯಾಹ್ನ ವೇದಮೂರ್ತಿ ಶಶಿಕಾಂತ್ ನಾಯಕ್ ಅವರು ಮಠದ ಸ್ಥಾನ ದೇವತೆ ಕಾಳಿಕಾ ಮಾತೆಗೆ ಮಹಾ ಮಂಗಳಾರತಿ ನೆರವೇರಿಸಿದರು. ಈ ಸಂದರ್ಭದಲ್ಲಿ ಭಕ್ತರು ಮಠದ ಆರಾಧ್ಯ ದೇವತೆಗಳಾದ ಭವಾನಿ ಶಂಕರ ಮತ್ತು ಕಾಳಿಕಾ ದೇವಿಯ ನಾಮಘೋಷಗಳನ್ನು ಹಾಕುತ್ತಾ ಭಕ್ತಿಪರವಶರಾದರು. ಪೂಜೆಯ ನಂತರ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಿತು.
ಈ ಸಮಾರಂಭದಲ್ಲಿ ಶ್ರೀ ಸುಧೀರ್ ಫಡ್ನಿಸ್ ಮತ್ತು ಕುಟುಂಬಸ್ಥರು, ಶ್ರೀ ಪ್ರಮೋದ್ ಗಾಯ್ತೋಂಡೆ ಮತ್ತು ಕುಟುಂಬಸ್ಥರು, ಶ್ರೀ ಚಿಂತಾಮಣಿ ನಾಡಕರ್ಣಿ, ಸಮೀರ್ ನಾಡಕರ್ಣಿ ಮತ್ತು ಕುಟುಂಬದವರು ಉಪಸ್ಥಿತರಿದ್ದರು. ಸ್ವಯಂಸೇವಕರಾದ ವಿಜಯ್ ಹುಣಸವಾಡಕರ್ ಹಾಗೂ ಇತರ ಸೇವಾಕರ್ತರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
”ರಾತ್ರಿ ಪೂಜೆಯೂ ಕೂಡ ಅತ್ಯಂತ ಭಕ್ತಿಯಿಂದ ನೆರವೇರಿತು” ಎಂದು ಮಠದ ವಕ್ತಾರರಾದ ಕಮಲಾಕ್ಷ ಸರಾಫ ಅವರು ಮಾಹಿತಿ ನೀಡಿದ್ದಾರೆ.




