
ಉಳ್ಳೂರು: ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದ (ರಿ) 19ನೇ ವರ್ಷದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವವು ಫೆಬ್ರವರಿ 1ರಂದು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ನೆರವೇರಿತು.
ಧಾರ್ಮಿಕ ವಿಧಿವಿಧಾನಗಳು
ಕ್ಷೇತ್ರದ ಅರ್ಚಕ ದಿನೇಶ್ ಶಾಂತಿ ಅವರ ನೇತೃತ್ವದಲ್ಲಿ ಬೆಳಿಗ್ಗೆ ಪುಣ್ಯಾಹ ವಾಚನದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಚಾಲನೆಗೊಂಡವು. ದೇವಿಯ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಭಕ್ತಿಯಿಂದ ಚಂಡಿಕಾಯಾಗ ನೆರವೇರಿಸಲಾಯಿತು. ಸಂಜೆ ದೇವಿಗೆ ವಿಶೇಷವಾಗಿ ರಂಗಪೂಜೆ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಸೇವೆಗಳು ನಡೆದವು.

ವಿದ್ಯಾರ್ಥಿ ವೇತನ ವಿತರಣೆ
ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸನ್ನಿಧಾನದ ಸಾಮಾಜಿಕ ಬದ್ಧತೆಯ ಅಂಗವಾಗಿ ವಿದ್ಯಾರ್ಥಿಗಳ ದತ್ತು ಸ್ವೀಕಾರ, ದತ್ತಿನಿಧಿ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ನಡೆಯಿತು. ಅರ್ಹ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಧನಸಹಾಯ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಕೆಮುಂಡೇಲು ಪಾಂಡುರಂಗ ಭಜನಾ ಮಂಡಳಿ, ಮುದರಂಗಡಿ ಶ್ರೀ ನಾರಾಯಣಗುರು ಭಜನಾ ಮಂಡಳಿ ಹಾಗೂ ಪಲಿಮಾರು ಭಜನಾ ಮಂಡಳಿ ಸದಸ್ಯರಿಂದ ಸುಶ್ರಾವ್ಯ ಭಜನಾ ಸೇವೆ ಸಮರ್ಪಣೆಯಾಯಿತು.

ಕಾರ್ಯಕ್ರಮದಲ್ಲಿ ಮುಂಬೈ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಎರ್ಮಾಳು ಬರ್ಪಾಣಿ ಸಂತೋಷ್ ಶೆಟ್ಟಿ, ವೀಣಾ ಮುಂಬೈ, ಡಾ. ಹೇಮಲತಾ ಮುಂಬೈ, ಎಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಉಷಾ ದಯಾನಂದ್, ಸುಹಾಸ್ ಶೆಟ್ಟಿ ಬರ್ಪಾಣಿ, ಭೋಜ ಅಮೀನ್ ಮುಂಬೈ, ಅಸಲ್ಪ್ ಮೂಕಾಂಬಿಕಾ ಮಂದಿರದ ಸುಧಾಕರ್ ಪೂಜಾರಿ ಉಪಸ್ಥಿತರಿದ್ದರು.




