
ಮಹಾರಾಷ್ಟ್ರದ ಮಣ್ಣಿನಲ್ಲಿ ಕನ್ನಡದ ಕಂಪು ಪಸರಿಸುತ್ತಿರುವ ಜಗಜ್ಯೋತಿ ಕಲಾವೃಂದ: ಶ್ಯಾಮಲಾ ಮಾಧವ ಶ್ಲಾಘನೆ
ಚಿತ್ರ : ಸತೀಶ್ ಶೆಟ್ಟಿ, ವರದಿ: ಇನ್ನಂಜೆ ಜಯರಾಮ್
ಮುಂಬಯಿ: “ಮಹಾರಾಷ್ಟ್ರದ ಮಣ್ಣಿನಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ಶಿಕ್ಷಣದ ಕೈಂಕರ್ಯದ ಜೊತೆಗೆ ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿರುವ ಮುಂಬಯಿ ಕನ್ನಡಿಗರ ಹೃದಯ ವೈಶಾಲ್ಯತೆ ಅಭಿನಂದನೀಯ. ವಿಶೇಷವಾಗಿ ಮಹಿಳಾ ಸಾಹಿತಿಗಳನ್ನು ಗುರುತಿಸಿ ಗೌರವಿಸುವ ಜಗಜ್ಯೋತಿ ಕಲಾವೃಂದದ ಕಾರ್ಯ ಪ್ರಶಂಸನೀಯ,” ಎಂದು ಖ್ಯಾತ ಸಾಹಿತಿ ಹಾಗೂ ಅನುವಾದಕಿ ಶ್ರೀಮತಿ ಶ್ಯಾಮಲಾ ಮಾಧವ ಅವರು ಅಭಿಪ್ರಾಯಪಟ್ಟರು.











ಮುಂಬಯಿಯ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆ **‘ಜಗಜ್ಯೋತಿ ಕಲಾವೃಂದ’**ವು ತನ್ನ 39ನೇ ವಾರ್ಷಿಕೋತ್ಸವ ಹಾಗೂ ‘ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇತ್ತೀಚೆಗೆ ಡೊಂಬಿವಲಿಯ ಹೋಟೆಲ್ ಶಿವಮ್ ಸಭಾಗೃಹದಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಿಸಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಡಾ. ದಿವಾಕರ ಶೆಟ್ಟಿ ಇಂದ್ರಾಳಿ ಮಾತನಾಡಿ, “ರಾತ್ರಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ಸ್ನೇಹವನ್ನು ನಿರಂತರವಾಗಿರಿಸುವ ನಿಟ್ಟಿನಲ್ಲಿ ಕಟ್ಟಿದ ಈ ಸಂಸ್ಥೆ, ಇಂದು ಸಾಮಾಜಿಕ ಮತ್ತು ಸಾಹಿತ್ಯಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಮಾದರಿಯಾಗಿದೆ. ಇವರ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿದೆ,” ಎಂದು ಶ್ಲಾಘಿಸಿದರು.
ಬಂಟರ ಸಂಘ ಮುಂಬಯಿಯ ಸಮಾಜ ಕಲ್ಯಾಣ ಸಮಿತಿ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ ಸೂರಿಂಜೆ ಮಾತನಾಡಿ, “ಸೀತಾರಾಮ ಶೆಟ್ಟರು ತಮ್ಮ ಪತ್ನಿಯ ಹೆಸರಿನಲ್ಲಿ ಆರಂಭಿಸಿದ ಈ ಪ್ರಶಸ್ತಿ ಇಂದು ಹೊರನಾಡಿನಲ್ಲೂ ಪ್ರಸಿದ್ಧಿಯಾಗಿದೆ. ಡೊಂಬಿವಲಿಯು ಕನ್ನಡಿಗರ ಪಾಲಿಗೆ ಒಂದು ಪುಟ್ಟ ಕರ್ನಾಟಕವಿದ್ದಂತೆ,” ಎಂದರು.
ಬಂಟರ ಸಂಘದ ಡೊಂಬಿವಲಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಆನಂದ ಶೆಟ್ಟಿ ಎಕ್ಕಾರ್ ಅವರು ತಮ್ಮ ಹಾಸ್ಯಭರಿತ ಶೈಲಿಯಲ್ಲಿ ಮಾತನಾಡಿ, ಸಂಸ್ಥೆಯ ಸಂಘಟನಾ ಮನೋಭಾವವನ್ನು ಮೆಚ್ಚಿಕೊಂಡರು. ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಸತೀಶ್ ಎನ್. ಶೆಟ್ಟಿ (ಕೆ.ಎನ್. ಪಾರ್ಕ್) ಹಾಗೂ ಸದಸ್ಯ ನೋಂದಣಿ ಸಮಿತಿ ಕಾರ್ಯಾಧ್ಯಕ್ಷ ಅನಿಲ್ ಶೆಟ್ಟಿ ಪಾಂಗಾಳ ಅವರು ಸಂಸ್ಥೆಯ ಕಾರ್ಯವೈಖರಿ ಮಹಿಳಾ ಸಾಹಿತ್ಯ ಪ್ರತಿಭೆಗೆ ದೊಡ್ಡ ಪ್ರೋತ್ಸಾಹ ನೀಡುತ್ತಿದೆ ಎಂದು ಹಾರೈಸಿದರು.

ಪ್ರಶಸ್ತಿ ಪ್ರದಾನ:
ಇದೇ ಸಂದರ್ಭದಲ್ಲಿ ಧಾರವಾಡದ ಶ್ರೀಮತಿ ಪ್ರಜ್ಞಾ ಮತ್ತಿಹಳ್ಳಿ ಅವರಿಗೆ ‘ಕಥಾ ಪ್ರಶಸ್ತಿ’ ಹಾಗೂ ಹುಬ್ಬಳ್ಳಿಯ ಶ್ರೀಮತಿ ತೇಜಾವತಿ ಎಚ್.ಡಿ. ಅವರಿಗೆ ‘ಕಾವ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಇಬ್ಬರೂ ಸಾಹಿತಿಗಳು, ಮುಂಬಯಿ ಕನ್ನಡಿಗರು ತಮ್ಮ ಸಾಹಿತ್ಯ ಕೃಷಿಗೆ ನೀಡಿದ ಈ ದೊಡ್ಡ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನೂ ಇದೇ ವೇಳೆ ಸನ್ಮಾನಿಸಲಾಯಿತು.

ಸಂಸ್ಥೆಯ ಸಲಹೆಗಾರ ಹಾಗೂ ಕರ್ನಾಟಕ ಸಂಘ ಡೊಂಬಿವಲಿಯ ಅಧ್ಯಕ್ಷ ಸುಕುಮಾರ ಎನ್. ಶೆಟ್ಟಿ ಅವರು ಪ್ರಶಸ್ತಿಯ ಹಿನ್ನೆಲೆಯನ್ನು ವಿವರಿಸಿದರು. ಸಂಸ್ಥೆಯ ಅಧ್ಯಕ್ಷ ರಮೇಶ್ ಎ. ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಜಯಕರ ಜಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಪಿ. ಶೆಟ್ಟಿ, ಕೋಶಾಧಿಕಾರಿ ಚಂದ್ರ ಎನ್. ನಾಯ್ಕ್, ಹಾಗೂ ಸಂಘಟನಾ ಕಾರ್ಯದರ್ಶಿ ಬಾಬು ಕೆ. ಮೊಗವೀರ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಶ್ರೀ ಮಹಾವಿಷ್ಣು ಮಂದಿರ ತಂಡ ಪ್ರಥಮ ಸ್ಥಾನ ಪಡೆಯಿತು.ತುಳು ವೆಲ್ಫೇರ್ ಅಸೋಸಿಯೇಷನ್, ಡೊಂಬಿವಲಿ. ದ್ವಿತೀಯ,: ನಿತ್ಯ ಆನಂದ್ ಡ್ಯಾನ್ಸ್ ಗ್ರೂಪ್, ಡೊಂಬಿವಲಿ ತೃತೀಯ ಬಹುಮಾನವನ್ನು ಪಡೆದರು.








ಕಾರ್ಯಕ್ರಮಕ್ಕೆ ಸಹಕರಿಸಿದವರ ಪಟ್ಟಿಯನ್ನು ಸಂತೋಷ್ ಪಿ. ಶೆಟ್ಟಿ ಅವರು ವಾಚಿಸಿದರು. ಸಾಂಸ್ಕೃತಿಕ ನೃತ್ಯ ಸ್ಪರ್ಧೆಯ ತಂಡಗಳ ಹೆಸರನ್ನು ಜೊತೆ ಕಾರ್ಯದರ್ಶಿ ತಾರಾನಾಥ್ ಎಸ್. ಅಮೀನ್ ವಾಚಿಸಿದರು, ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ರಾಜ ಸುವರ್ಣ ನಡೆಸಿಕೊಟ್ಟರು. ಅತಿಥಿಗಳ ಪರಿಚಯದೊಂದಿಗೆ ಇಡೀ ಸಭಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದ ವಸಂತ್ ಸುವರ್ಣ ಅವರು ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.



ಸಂಸ್ಥೆಯ ಅಧ್ಯಕ್ಷರಾದ ರಮೇಶ್ ಎ. ಶೆಟ್ಟಿ ಅವರ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಕ್ರಮದ ಯಶಸ್ಸಿನ ಹಿಂದೆ ಕಾರ್ಯಕಾರಿ ಸಮಿತಿಯೊಂದಿಗೆ ಜೊತೆ ಕೋಶಾಧಿಕಾರಿ ಸಂದೀಪ್ ಆರ್. ಕೋಟ್ಯಾನ್, ಜೊತೆ ಸಂಘಟನಾ ಕಾರ್ಯದರ್ಶಿ ಸುರೇಂದ್ರ ಆರ್. ನಾಯ್ಕ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಸಂತ ಎನ್. ಸುವರ್ಣ, ಉಮೇಶ್ ಡಿ. ಸುವರ್ಣ, ಲಕ್ಷ್ಮಣ್ ಸಿ. ಮೂಲ್ಯ, ದಯಾನಂದ ಸಾಲಿಯಾನ್, ಎಲ್.ಆರ್. ಮೂಲ್ಯ, ಅಶೋಕ್ ವಿ. ಶೆಟ್ಟಿ, ರಾಜು ಆರ್. ಸುವರ್ಣ, ಆನಂದ್ ಕೆ. ಪೂಜಾರಿ, ರಾಮಚಂದ್ರ ಸಾಲಿಯಾನ್, ಸದಾಶಿವ ಶ್ರೀಯಾನ್, ಸಂತೋಷ್ ಬಿ. ಪುತ್ರನ್, ಸಲಹೆಗಾರರಾದ ಆಶಿಷ್ ಎಸ್. ಶೆಟ್ಟಿ, ಶ್ರೀಮತಿ ಅಭಿಜಾ ಹೆಗಡೆ ಮತ್ತು ಆಂತರಿಕ ಲೆಕ್ಕಪರಿಶೋಧಕ ಪದ್ಮನಾಭ ಎಸ್. ಶೆಟ್ಟಿ ಅವರ ಶ್ರಮ ಅಪಾರವಾಗಿದೆ.




