July 23, 2026
Mumbai News Kannada
ಮುಂಬಯಿ

ಮೊಗವೀರ ವ್ಯವಸ್ಥಾಪಕ ಮಂಡಳಿಯ ಮಹಿಳಾ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ವಿವಿಧ ಕ್ಷೇತ್ರದ ಸಾಧಕಿಯರಿಗೆ ಸನ್ಮಾನ







ಮಂಡಳಿಯ ಸೇವಾ ಕಾರ್ಯಗಳಲ್ಲಿ ಸಮಾಜ ಬಾಂಧವರು ತೊಡಗಿಕೊಳ್ಳಿ: ಗಣೇಶ್ ಕೆ. ಕಾಂಚನ್

ವರದಿ: ದಿನೇಶ್ ಕುಲಾಲ್

ಮುಂಬಯಿ: ನಗರದ ಹಿರಿಯ ಸಂಘಟನೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮಹಿಳಾ ವಿಭಾಗ ಮತ್ತು ಎಲ್ಲಾ ಶಾಖೆಗಳ ಮಹಿಳಾ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’ಯನ್ನು ಅಂಧೇರಿ ಪಶ್ಚಿಮದ ಎಂ.ವಿ.ಎಂ. ಶೈಕ್ಷಣಿಕ ಸಂಕೀರ್ಣದಲ್ಲಿರುವ ಶ್ರೀಮತಿ ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

​ಕಾರ್ಯಕ್ರಮವನ್ನು ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಗಣೇಶ್ ಕೆ. ಕಾಂಚನ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಮೊಗವೀರ ಬ್ಯಾಂಕ್‌ನ ಉಪಕಾರ್ಯಾಧ್ಯಕ್ಷೆ ನೀತಾ ಮೆಂಡನ್, ಗೌರವ ಅತಿಥಿ ಹಾಗೂ ಉದ್ಯಮಿ ಗ್ಲಾಡಿಸ್ ಶ್ರೀಯಾನ್, ಮೊಗವೀರ ವ್ಯವಸ್ಥಾಪಕ ಮಂಡಳಿಯ ಉಪಾಧ್ಯಕ್ಷೆ ದಯಾವತಿ ಸುವರ್ಣ, ಗೌರವ ಕಾರ್ಯದರ್ಶಿ ದಿಲೀಪ್ ಮುಲ್ಕಿ, ಗೌರವ ಕೋಶಾಧಿಕಾರಿ ದೇವರಾಜ್ ಕುಂದರ್ ಮತ್ತು ಎಂ.ವಿ.ಎಂ. ಕ್ಯಾಂಪಸ್ ಕಾರ್ಯಾಧ್ಯಕ್ಷ ಅಜಿತ್ ಜಿ. ಸುವರ್ಣ ಉಪಸ್ಥಿತರಿದ್ದರು.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ ಗಣ್ಯರನ್ನು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು:

  • ಕುಮಾರಿ ತನ್ವಿ ಜಗದೀಶ್: ಭಾರತದ ಮೊದಲ ಮಹಿಳಾ ದೋಣಿ ಸ್ಪರ್ಧೆಯ (Stand-up Paddling) ಚಾಂಪಿಯನ್.
  • ಕುಮಾರಿ ಅನ್ವಿ ಶೈಲೇಶ್ ಸುವರ್ಣ: ಅಟಲ್ ಸೇತುವಿನಿಂದ ಗೇಟ್ ವೇ ಆಫ್ ಇಂಡಿಯಾದವರೆಗೆ ಈಜಿ ದಾಖಲೆ ನಿರ್ಮಿಸಿದ ಸಾಧಕಿ.
  • ವಿದ್ಯಾ ಸಂಪತ್ ಕರ್ಕೇರ: ಫಿಲಿಪ್ಪೀನ್ಸ್‌ನಲ್ಲಿ ನಡೆದ ‘ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ 2025’ ವಿಜೇತೆ.
  • ಆಶಿಕಾ ಕಾಂಚನ್: ಸಿ.ಎ. (CA) ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಭೆ.

​ಅಧ್ಯಕ್ಷೀಯ ಭಾಷಣ ಮಾಡಿದ ಗಣೇಶ್ ಕೆ. ಕಾಂಚನ್, “ಮೊಗವೀರ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಕೀರ್ತಿ ತಂದಿದ್ದಾರೆ. ಸಮಾಜ ಬಾಂಧವರಿಗೆ ಹಾಗೂ ತುಳು-ಕನ್ನಡಿಗರಿಗೆ ಮಂಡಳಿಯ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ರಿಯಾಯಿತಿ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇಂತಹ ಯೋಜನೆಗಳ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು,” ಎಂದರು.

ಅಜಿತ್ ಸುವರ್ಣ ಮಾತನಾಡಿ, ಮಂಡಳಿಯು ಸಮಾಜದ ಒಗ್ಗಟ್ಟಿಗಾಗಿ ಮುಂಬಯಿ ಮತ್ತು ಊರಿನಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ನಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಮಹಾರಾಷ್ಟ್ರ ಹಾಗೂ ದೇಶಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

​ಅತಿಥಿಗಳಾದ ಗ್ಲಾಡಿಸ್ ಶ್ರೀಯಾನ್, ನೀತಾ ಮೆಂಡನ್, ದಿಲೀಪ್ ಮುಲ್ಕಿ ಹಾಗೂ ದೇವರಾಜ್ ಹೆಚ್. ಕುಂದರ್ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಮಂಡಳಿಯ ಟ್ರಸ್ಟಿಗಳಾದ ಪುರುಷೋತ್ತಮ ಕರ್ಕೇರ, ಚಂದ್ರಶೇಖರ್ ಕರ್ಕೇರ, ಜೊತೆ ಕಾರ್ಯದರ್ಶಿ ಪ್ರೀತಿ ಶ್ರೀಯಾನ್, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಸುರೇಖಾ ಪುತ್ರನ್, ಕಾರ್ಯದರ್ಶಿ ರಾಜೇಶ್ವರಿ ಉಪ್ಪೂರು, ಕೋಶಾಧಿಕಾರಿ ಯಶೋದಾ ಕರ್ಕೇರ ಸೇರಿದಂತೆ ವಿವಿಧ ಶಾಖೆಗಳ ಪದಾಧಿಕಾರಿಗಳಾದ ಗೀತಾ ಮೆಂಡನ್ (ಡೊಂಬಿವಲಿ), ಪ್ರಭಾವತಿ ಅಮೀನ್ (ಮೀರಾ ಭಯಂದರ್), ಜಾನಕಿ ಬಂಗೇರ (ನವಿ ಮುಂಬಯಿ) ಹಾಗೂ ಪ್ರೇಮಾ ನಾಯಕ್ (ವಸಾಯಿ ತಾಲೂಕು) ಉಪಸ್ಥಿತರಿದ್ದರು.

​ನವಿ ಮುಂಬಯಿ ಶಾಖೆಯ ಅಶ್ವಿನಿ ಕೋಟ್ಯಾನ್ ಮತ್ತು ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಶೈಲಜಾ ಮೆಂಡನ್ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ವರಿ ಉಪ್ಪೂರು ವಂದಿಸಿದರು. ಭಾರತಿ ಕರ್ಕೇರ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ವಿವಿಧ ಶಾಖೆಗಳ ಸದಸ್ಯೆಯರಿಂದ ವೈವಿಧ್ಯಮಯ ನೃತ್ಯ ಪ್ರದರ್ಶನಗಳು ನಡೆದವು.

​ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಿವೇದಿತಾ ಸಾಲಿಯಾನ್ ಮಾತನಾಡಿ, “ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು ಮತ್ತು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು. ಮಂಡಳಿಯ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.



Related posts

ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ  ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ -ಮೊಸರು ಕುಡಿಕೆ ಸಂಭ್ರಮ, ಭಕ್ತಿ ಸಂಗೀತ ಕಾಠ್ಯಕ್ರಮ,

Mumbai News Desk

ಅತ್ಯಂತ ಸಂಭ್ರಮ ಸಡಗರದಿಂದ ಸಂಪನ್ನಗೊಂಡ ಶ್ರೀ ಕೃಷ್ಣ ಜನ್ಮಾಷ್ಟಮಿ -ಶ್ರೀ ಕೃಷ್ಣ ಲೀಲೋತ್ಸವ /ಮೊಸರು ಕುಡಿಕೆ ಹಬ್ಬ /ಪಲ್ಲಕ್ಕಿ ಉತ್ಸವ 

Mumbai News Desk

ಡೊಂಬಿವಲಿ ಶ್ರೀ ಜಗದಂಬಾ ಮಂದಿರದ 11ನೇ ವಾರ್ಷಿಕ ಮಹೋತ್ಸವ ಸಂಪನ್ನ

Mumbai News Desk

*ದಿ. ಜ್ಯೋತಿ ಸುವರ್ಣರಿಗೆ  ಶ್ರದ್ಧಾಂಜಲಿ ಸಭೆ.

Mumbai News Desk

ಶ್ರೀ ಮದ್ಭಾರತ  ಮಂಡಳಿಯ ಶ್ರೀ ಲಕ್ಷ್ಮೀನಾರಾಯಣ ಮಂದಿರದ 22ನೇ ಪ್ರತಿಷ್ಟಾ ಮಹೋತ್ಸವ.

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರಾರ್ಥನಾ ಪೂಜಾರಿಗೆ ಶೇ 94.40 ಅಂಕ.

Mumbai News Desk