September 6, 2026
Mumbai News Kannada
ಮುಂಬಯಿ

ಅತ್ಯಂತ ಸಂಭ್ರಮ ಸಡಗರದಿಂದ ಸಂಪನ್ನಗೊಂಡ ಶ್ರೀ ಕೃಷ್ಣ ಜನ್ಮಾಷ್ಟಮಿ -ಶ್ರೀ ಕೃಷ್ಣ ಲೀಲೋತ್ಸವ /ಮೊಸರು ಕುಡಿಕೆ ಹಬ್ಬ /ಪಲ್ಲಕ್ಕಿ ಉತ್ಸವ 





   ಮುಂಬಯಿ ಆ17. ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಬಿ.ಎಸ್. ಕೆ.ಬಿ. ಎಸೋಸಿಯೇಶನ್ ನ  ಸಹಯೋಗದೊಂದಿಗೆ  ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು,  ಶುಕ್ರವಾರ ದಿನಾಂಕ  ೧೫.೮.೨೦೨೫    ರಂದು  ಶ್ರೀ ಕೃಷ್ಣ ದೇವಾಲಯದಲ್ಲಿ ಅತ್ಯಂತ ವಿಜೃಂಭಣೆಯಿಂದ  ಆಚರಿಸಿತು. 

ಗೋಕುಲ ಕಟ್ಟಡದ  ಮಹಾದ್ವಾರ, ತೀರ್ಥಮಂಟಪ,  ಗರ್ಭಗೃಹ, ಸಭಾಗೃಹ ಮುಂತಾದುವುಗಳನ್ನು ಬಣ್ಣ ಬಣ್ಣದ   ಪುಷ್ಪ ಮಾಲೆಗಳಿಂದ ಶೃಂಗರಿಸಿ ಸಂಪೂರ್ಣ ಗೋಕುಲ ಅತ್ಯಂತ ಮನೋಹರವಾಗಿ ಕಂಗೊಳಿಸುತ್ತಿತ್ತು.    ಗೋಪಾಲಕೃಷ್ಣ ದೇವರ ದಿವ್ಯ ಮೂರ್ತಿಯನ್ನು  ವೇದಮೂರ್ತಿ  ಗಣೇಶ್ ಭಟ್ ಮತ್ತು ವೇದಮೂರ್ತಿ ಶ್ರೀನಿವಾಸ ಎನ್  ಉಡುಪರವರು  ವಿಶೇಷ  ಪುಷ್ಪಮಾಲೆಗಳು, ಸ್ವರ್ಣಾಭರಣಗಳಿಂದ ಶೃಂಗರಿಸಿದ್ದರು.  ಸರ್ವಾಲಂಕೃತ  ಅಮೃತ  ಶಿಲಾ ಮೂರ್ತಿ  ಶ್ರೀ ಗೋಪಾಲಕೃಷ್ಣ  ಅತ್ಯಂತ ಆಕರ್ಷಕನಾಗಿ ತನ್ನ ಭಕ್ತಾದಿಗಳನ್ನು ತನ್ನೆಡೆಗೆ ಆಕರ್ಷಿಸುತ್ತಿದ್ದ.    ಪ್ರತಿ ವರ್ಷದಂತೆ ದಿ. ಯು..ವಿ. ಉಪಾಧ್ಯಾಯ ಕುಟುಂಬದವರು ಶ್ರೀ ದೇವರ ಪುಷ್ಪಾಲಂಕಾರದ ಪ್ರಾಯೋಜಕರಾಗಿದ್ದರು. 

ಕಳೆದ ವರ್ಷದಂತೆ ಈ ಬಾರಿಯೂ ಡೊಗ್ಗಾಲು ಕೃಷ್ಣನಿಗೆ 108 ರಜತ ಕಲಶಾಭಿಷೇವನ್ನು ಹಮ್ಮಿಕೊಳ್ಳಲಾಗಿತ್ತು. ಆ  ಪ್ರಯುಕ್ತ  ಆ ದಿನ ಮುಂಜಾನೆ ವೇದಮೂರ್ತಿ ದರೆಗುಡ್ಡೆ ಶ್ರೀನಿವಾಸ್ ಭಟ್  ರವರು ಇತರ ಪುರೋಹಿತ ವರ್ಗದವರ ಸಹಕಾರದೊಂದಿಗೆ,  ಗೌ. ಕಾರ್ಯದರ್ಶಿ ಶ್ರೀ ಎ.ಪಿ.ಕೆ. ಪೋತಿ/ ಸಹನಾ ಪೋತಿ ದಂಪತಿಯ ಯಜಮಾನತ್ವದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ 108  ರಜತ  ಕಲಶ ಪ್ರತಿಷ್ಠಾಪೆನೆ ಗೈದರು.  ಸಾಯಂಕಾಲ 5 ಗಂಟೆಗೆ ಮಂಗಳವಾದ್ಯ ಪ್ರಾರ್ಥನೆಯೊಂದಿಗೆ ಶ್ರೀ ದೇವರ ಗರ್ಭಗೃಹದ ದ್ವಾರ ತೆರೆದ ನಂತರ ದರೆಗುಡ್ಡೆ ಶ್ರೀನಿವಾಸ್ ಭಟ್ ರವರ ನೇತೃತ್ವ ಹಾಗೂ ಪುರೋಹಿತ ವರ್ಗದವರ  ಸಹಕಾರದೊಂದಿಗೆ ರಜತ ಕಲಶ ಸೇವೆಗೆ ದೇಣಿಗೆ ನೀಡಿದ ಅನೇಕ ಭಕ್ತಾದಿಗಳಿಂದ  ರಜತ  ಕಲಶಾಭಿಷೇಕ  ನೆರವೇರಿತು.    ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥ ಮಂಡಳಿ ಸದಸ್ಯರ ಸಹಿತ ಅನೇಕ ಗಣ್ಯಾತಿಗಣ್ಯ ವ್ಯಕ್ತಿಗಳು ಕಲಶಾಭಿಷೇಕದಲ್ಲಿ ಭಾಗಿಯಾಗಿದ್ದರು.   

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ  ಶ್ರೀ ಹರೀಶ್ ಪೂಜಾರಿಯವರಿಂದ ಸ್ಯಾಕ್ಸೋಫೋನ್ ವಾದನ, ಹೆಸರಾಂತ  ಶಾಸ್ತ್ರೀಯ ಹಾಗೂ ಭಕ್ತಿ ಸಂಗೀತ ಗಾಯಕಿ ವಿದುಷಿ ನಂದಿನಿ ರಾವ್ ಗುಜಾರ್ ಅವರಿಂದ ಭಕ್ತಿ ಸಂಗಮ ಕಚೇರಿ,  ನಂತರ ಗೋಕುಲ ಭಜನಾ ಮಂಡಳಿಯವರಿಂದ ಭಜನೆ ನೆರವೇರಿತು.    ಅರ್ಚಕ ವರ್ಗದವರಿಂದ ವಿಷ್ಣು  ಸಹಸ್ರ ನಾಮ ಪಠನೆ,ಪುಷ್ಪಾರ್ಚನೆ, ಶ್ರೀ ಕೃಷ್ಣಾಷ್ಟೋತ್ತರ  ಸ್ತೋತ್ರ ಪಠನೆಗಳಾದ ನಂತರ     ಜನ್ಮಾಷ್ಟಮಿ ಪೂಜೆಯು ಪ್ರಧಾನ ಅರ್ಚಕ ದರೆಗುಡ್ಡೆ ಶ್ರೀನಿವಾಸ್ ಭಟ್ ರವರ ನೇತೃತ್ವದಲ್ಲಿ  ಅರ್ಚಕರಾದ ವೇದಮೂರ್ತಿ ಗಣೇಶ್ ಭಟ್ ರವರು ವಿಧಿವತ್ತಾಗಿ ನೆರವೇರಿಸಿದರು. ಜನ್ಮಾಷ್ಠಮಿ ವಿಶೇಷವಾಗಿ ೧೦೮ ಬಗೆಯ ಉಂಡೆಗಳನ್ನು ಶ್ರೀ ಕೃಷ್ಣನಿಗೆ ಸಮರ್ಪಿಸಿದುದು  ಅಂದಿನ ವಿಶೇಷ ಆಕರ್ಷಣೆಯಾಗಿತ್ತು.  

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಹಾಗೂ  ಬಿ.ಎಸ್ ಕೆ.ಬಿ. ಎಸೋಸಿಯೇಶನ್ ಅಧ್ಯಕ್ಷರಾದ ಡಾ. ಸುರೇಶ್ ಎಸ್ ರಾವ್, ಬಿ.ಎಸ್ ಕೆ.ಬಿ. ಎಸೋಸಿಯೇಶನ್  ಪದಾಧಿಕಾರಿಗಳು,  ಕಾರ್ಯಕಾರಿ ಸಮಿತಿ,  ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ನ ವಿಶ್ವಸ್ಥ ಮಂಡಳಿ, ಧಾರ್ಮಿಕ  ಸಮಿತಿ  ಸದಸ್ಯರು, ಹಾಗೂ ಸುಮಾರು ಐದು ನೂರಕ್ಕಿಂತಲೂ ಮಿಕ್ಕಿ  ಭಕ್ತಾದಿಗಳು ಪೂಜಾ ವಿಧಿಯಲ್ಲಿ ಪಾಲ್ಗೊಂಡು ಶ್ರೀ ಕೃಷ್ಣನಿಗೆ  ಅರ್ಘ್ಯ ಪ್ರದಾನ ಗೈದರು.  ತೀರ್ಥ ಪ್ರಸಾದ ವಿತರಣೆ ಹಾಗೂ  ಉಪಾಹಾರದೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.   

ಶ್ರೀ ಕೃಷ್ಣ ಲೀಲೋತ್ಸವದ ದಿನವಾದ ಶನಿವಾರ ದಿನಾಂಕ ೧೬.೮.೨೦೨೫  ರಂದು ಡೊಗ್ಗಾಲು ಕೃಷ್ಣನಿಗೆ ರಜತ ಕಲಶಾಭಿಷೇಕ ಮುಂದುವರಿದು  ಕೊನೆಯಲ್ಲಿ ಪ್ರಧಾನ  ಸ್ವರ್ಣ ಕಲಶಾಭಿಷೇಕವು  ಅಧ್ಯಕ್ಷರು ಡಾ. ಸುರೇಶ್ ಎಸ್ ರಾವ್, ವಿಜಯಲಕ್ಷ್ಮಿ ರಾವ್,   ಗೌ. ಕಾರ್ಯದರ್ಶಿ ಎ.ಪಿ.ಕೆ. ಪೋತಿ, ಡಾ ಸಹನಾ ಪೋತಿ  ಯಜಮಾನತ್ವದಲ್ಲಿ  ನೆರವೇರಿತು.ರಜತ ಕಲಶಾಭಿಷೇಕವಾಗುತ್ತಿದ್ದಂತೆ  ಶ್ರೀನಿಧಿ ಭಟ್, ಸಾವಿತ್ರಿ ಭಟ್ ರವರಿಂದ ಹಾಗೂ ವಿದುಷಿ ವಿದ್ಯಾ ತಂತ್ರಿಯವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನೆರವೇರಿತು.ಅಂತೆಯೇ  ಕಳೆದ  ಬಾರಿಯಂತೆ ಈ  ಬಾರಿಯೂ ಜನ್ಮಾಷ್ಟಮಿ ಮಹಾ ಅನ್ನ ಪ್ರಸಾದವನ್ನು  ಆಯೋಜಿಸಲಾಗಿದ್ದು, ಸುಮಾರು ೧೦೦೦  ಕ್ಕೂ ಮಿಕ್ಕಿ ಭಕ್ತಾದಿಗಳು ಶ್ರೀ ಕೃಷ್ಣ ಪ್ರಸಾದ ಸ್ವೀಕರಿಸಿ ಅನುಗ್ರಹಿತರಾದರು. ನೂರಾರು ಕೊಡುಗೈ ದಾನಿಗಳು ಶ್ರೀ ಕೃಷ್ಣ ಜನ್ಮಾಷ್ಠಮಿ ಮಹಾ ಅನ್ನ ಪ್ರಸಾದಕ್ಕೆ ದೇಣಿಗೆಯನ್ನು ನೀಡಿದ್ದರು. ರಜತ ಕಲಶಕ್ಕೆ ಹಾಗೂ ಮಹಾ ಅನ್ನ ಪ್ರಸಾದಕ್ಕೆ ದೇಣಿಗೆ ನೀಡಿದ ದಾನಿಗಳಿಗೆ ಪ್ರಸಾದ ವಿತರಣೆಯು  ಅತ್ಯಂತ ವ್ಯವಸ್ಥಿತವಾಗಿ ನೆರವೇರಿತು.   ಬಿ.ಎಸ್.ಕೆ.ಬಿ. ಅಸೋಸಿಯೇಷನ್ ಆಹಾರ ಸಮಿತಿಯ ನೇತೃತ್ವದಲ್ಲಿ ಜರಗಿದ ಅನ್ನ ಪ್ರಸಾದ ವಿತರಣೆ ಎಲ್ಲರ ಮೆಚ್ಚುಗೆಯನ್ನು ಪಡೆಯಿತು.  

 ಅತ್ಯಂತ ವೈಭವವಾಗಿ ಜರಗಿದ  ಶ್ರೀ ದೇವರ ವರ್ಣಮಯ  ಪುಷ್ಪಾಲಂಕೃತ  ಪಲ್ಲಕ್ಕಿ ಉತ್ಸವದ ವರ್ಣರಂಜಿತ ಮೆರವಣಿಗೆಯು  ವೇದಘೋಷ, ಕರಿವೇಷ,   ಹುಲಿವೇಷ ಕುಣಿತ, ಸಾಕ್ಸೋಪೋನ್ / ಗೋಕುಲದ ಯುವ ಪ್ರತಿಭೆಗಳಿಂದ   ಚೆಂಡೆವಾದನ, ಭಜನಾ ಮಂಡಳಿಯಿಂದ ಭಜನೆ,  ಯಕ್ಷಗಾನ ನೃತ್ಯ ವೈಭವ,  ಮಹಿಳೆಯರಿಂದ ನೃತ್ಯ ಸಹಿತದ ವೈಭವೋಪೇತ  ಪಲ್ಲಕ್ಕಿ ಉತ್ಸವವು   ಜನ್ಮಾಷ್ಟಮಿ ಸಡಗರವನ್ನು ಇನ್ನಷ್ಟು ಹೆಚ್ಚಿಸಿತು.  ಗೋಕುಲ ಪ್ರಾಕಾರದಲ್ಲಿ ಮೊಸರು ಕುಡಿಕೆಯಾದ ನಂತರ ಖ್ಯಾತ  ಹೋಟೆಲ್ ಉದ್ಯಮಿ  ಶ್ರೀ ಬಿ.ಆರ್ ಶೆಟ್ಟಿ  ಪರಿವಾರದವರ  ಪ್ರಾಯೋಜಕತ್ವದಲ್ಲಿ ಗೋಕುಲದ ಮುಂಭಾಗದಲ್ಲಿ  ಮೊಸರು ಕುಡಿಕೆ  ನೆರವೇರಿತು. ಪಲ್ಲಕ್ಕಿ  ಉತ್ಸವದ ನಂತರ ಉತ್ಸವ ಮೂರ್ತಿಯನ್ನು  ಸರಸ್ವತಿ ಸಭಾಗೃಹದಲ್ಲಿ ಅಲಂಕೃತ  ತೊಟ್ಟಿಲಿನಲ್ಲಿ ಇರಿಸಿದ  ನಂತರ ಶ್ರೀಮತಿ ಗೀತಾ ಎಲ್. ಭಟ್ ರವರ ದಿಗ್ದರ್ಶನ ಮತ್ತು  ನೇತೃತ್ವದಲ್ಲಿ, ಗೋಕುಲದ ಸದಸ್ಯರಿಂದ ಪ್ರದರ್ಶನಗೊಂಡ ” ವೀರ ತರಣಿ  ಸೇನ ಮತ್ತು ಅಗ್ರಪೂಜೆ  ಎಂಬ ಯಕ್ಷಗಾನ ಬಯಲಾಟವು ಯಕ್ಷಗಾನ ಪ್ರೇಮಿಗಳ ಮನ ರಂಜಿಸಿತು.   ಶ್ರೀ ದೇವರಿಗೆ ಮಹಾಮಂಗಳಾರತಿಯಾದ ನಂತರ ತೀರ್ಥ-ಪ್ರಸಾದ ವಿತರಣೆ ಮತ್ತು ಲಘು ಉಪಹಾರದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. 

ಶ್ರೀ ದೇವರ ದರ್ಶನಕ್ಕೆ ಅಷ್ಟಮಿ ಪರ್ವ ಕಾಲದಲ್ಲಿ ಆಗಮಿಸಿದ ಸಹಸ್ರಾರು  ಭಕ್ತಾದಿಗಳಿಗೆ ಜನ್ಮಾಷ್ಟಮಿ ಪ್ರಸಾದ ವಿತರಿಸಲಾಯಿತು. ಎರಡು  ದಿನಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಡಗರದಲ್ಲಿ ಮುಂಬಯಿಯಾದ್ಯಂತದ ಸಾವಿರಾರು ಭಕ್ತಾದಿಗಳು ಶ್ರೀ ಕೃಷ್ಣನ ದರ್ಶನ ಗೈದು , ತೀರ್ಥ-ಪ್ರಸಾದ ಸ್ವೀಕರಿಸಿ ಅನುಗ್ರಹಿತರಾದರು. 



Related posts

ಕನ್ನಡ ಸಂಘ ಸಯನ್ – ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ

Mumbai News Desk

ತುಳು ಸಂಘ, ಬೋರಿವಲಿ16ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ತುಳು ನಾಟಕ ಪ್ರದರ್ಶನ

Mumbai News Desk

ಬೋರಿವಲಿ ಪೂರ್ವ ನ್ಯಾನ್ಸಿ ಕಾಂಪ್ಲೆಕ್ಸ್: ಶ್ರೀ ಜಗದೀಶ್ವರಿ ಮಂದಿರದಲ್ಲಿ ದೃಢ ಕಲಶಾಭಿಷೇಕ ಸಂಪನ್ನ

Mumbai News Desk

ವಸಾಯಿ ಕರ್ನಾಟಕ ಸಂಘ ಮಹಿಳಾ ವಿಭಾಗದ ನವರಾತ್ರಿ ಉತ್ಸವ: ಸಂಸ್ಕೃತಿ ಮತ್ತು ಸಾಧನೆಗಳ ಸಮಾಗಮ

Mumbai News Desk

ಕುಲಾಲ ಸಂಘ ಮುಂಬಯಿ, ಮೀರಾರೋಡ್ – ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಮಿಲನ

Mumbai News Desk

ಎಲ್ಲರ ಬದುಕಲ್ಲಿ ಧರ್ಮ ಕಾರ್ಯಗಳು ನಡೆಯಲಿ: ಸಾಣೂರು ಸಾಂತಿಂಜ ಜನಾರ್ದನ ಭಟ್‌

Mumbai News Desk