
ಮುಂಬೈ: ಭಾರತ ಸರ್ಕಾರದ ನೀತಿ ಆಯೋಗ ಹಾಗೂ MSME ಅಡಿಯಲ್ಲಿ ನೋಂದಾಯಿತವಾಗಿರುವ ಪ್ರತಿಷ್ಠಿತ ‘ಹ್ಯೂಮನ್ ರೈಟ್ಸ್ ಇಂಟರ್ನ್ಯಾಷನಲ್ ಫೆಡರೇಶನ್’ (HRIF) ಸಂಸ್ಥೆಯ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷರಾಗಿ (State Chairman) ಹಿರಿಯ ಪತ್ರಕರ್ತ ಯೋಗೇಶ್ ವಾಮನ್ ಪುತ್ರನ್ ಅವರು ನೇಮಕಗೊಂಡಿದ್ದಾರೆ.
ಈ ಮಹತ್ವದ ಜವಾಬ್ದಾರಿಯ ಕುರಿತು ಸಂಸ್ಥೆಯ ಸಂಸ್ಥಾಪಕ ನರೇಂದ್ರ ಅರೋರಾ ಅವರು ಮಾರ್ಚ್ 18, 2026 ರಂದು ಅಧಿಕೃತ ನೇಮಕಾತಿ ಪತ್ರವನ್ನು ಹೊರಡಿಸಿದ್ದು, ಯೋಗೇಶ್ ಅವರ ಸುದೀರ್ಘ ಅನುಭವವು ಸಂಘಟನೆಯ ಬೆಳವಣಿಗೆಗೆ ಹೆಚ್ಚಿನ ಬಲ ತುಂಬಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರದ ಏಕತೆಯನ್ನು ಕಾಪಾಡುವ ಜೊತೆಗೆ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಈ ಪತ್ರದ ಮೂಲಕ ಅವರಿಗೆ ಕರೆ ನೀಡಲಾಗಿದೆ.
ಮೂಲತಃ ಬ್ಯಾಂಕಿಂಗ್ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಯೋಗೇಶ್ ಪುತ್ರನ್ ಅವರು, ಮೊಗವೀರ ಕೋ-ಆಪರೇಟಿವ್ ಬ್ಯಾಂಕ್ನಲ್ಲಿ 20 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದವರು. ಪತ್ರಿಕೋದ್ಯಮದ ಮೇಲಿನ ಆಸಕ್ತಿಯಿಂದಾಗಿ ‘ಈ ಸಂಜೆ ಸುದ್ದಿ’, ‘ಜನವಾಹಿನಿ’, ‘ಕರ್ನಾಟಕ ಮಲ್ಲ’ ಹಾಗೂ ‘ಉದಯವಾಣಿ’, ‘ದೆಹಲಿ ವಾರ್ತೆ’, ‘ಟೈಮ್ಸ್ ಆಫ್ ಕುಡ್ಲ’ (ತುಳು ವಾರಪತ್ರಿಕೆ) ಅಂತಹ ಪ್ರಮುಖ ದಿನಪತ್ರಿಕೆಗಳಲ್ಲಿ ಛಾಯಗ್ರಾಹಕರಾಗಿ ಕಾರ್ಯನಿರ್ವಹಿಸಿ ಗುರುತಿಸಿಕೊಂಡಿದ್ದಾರೆ.
ಪ್ರಸ್ತುತ ‘ಮುಂಬೈ ನ್ಯೂಸ್’ ವಾಹಿನಿಯಲ್ಲಿ ವಿಡಿಯೋ ಜರ್ನಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು, ಮುಂಬೈ ಕನ್ನಡಿಗರ ಪತ್ರಕರ್ತರ ಸಂಘ ಹಾಗೂ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ನ ಸಕ್ರಿಯ ಸದಸ್ಯರಾಗಿದ್ದಾರೆ. ಮುಂಬೈಯ ಪ್ರತಿಷ್ಠಿತ ಮೊಗವೀರ ವ್ಯವಸ್ಥಾಪಕ ಮಂಡಳಿ, ಕರ್ನಾಟಕ ಸಂಘ ಮಾತುಂಗ, ವಸಯಿ ತಾಲೂಕು ಮೊಗವೀರ ಸಂಘ, ವಸಯಿ ಕರ್ನಾಟಕ ಸಂಘ ಹಾಗೂ ಮುಂಬೈ ಫೋಟೋಗ್ರಾಫರ್ಸ್ ಅಸೋಸಿಯೇಷನ್ನಲ್ಲಿ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
1976ರಲ್ಲಿ ಮುಂಬೈಗೆ ಆಗಮಿಸಿದ ಇವರು ಕಳೆದ 50 ವರ್ಷಗಳಿಂದ ಮಹಾನಗರದ ವಿವಿಧ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ, ನಿಷ್ಠೆಯಿಂದ ದುಡಿದಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇವರ ಈ ನೂತನ ನೇಮಕಕ್ಕೆ ಸಾರ್ವಜನಿಕ ವಲಯ ಹಾಗೂ ಮಾಧ್ಯಮ ರಂಗದಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.




