34 C
Mumbai
May 25, 2026
Mumbai News Kannada
ಕರಾವಳಿ

ಭಟ್ಕಳ ಕಪ್ಪೆಚಿಪ್ಪು ದುರಂತ: ಮೃತರ ಸಂಖ್ಯೆ 11ಕ್ಕೆ ಏರಿಕೆ, ಕರಾವಳಿಯಲ್ಲಿ ತೀವ್ರ ಶೋಕ ಸಾಗರ





ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತಟ್ಟೆ ಹಕ್ಕಲು ನದಿಯ ತೀರದಲ್ಲಿ ಇಡೀ ಕರಾವಳಿ ಜನತೆಯನ್ನು ಬೆಚ್ಚಿಬೀಳಿಸುವಂತಹ, ತಲೆತಗ್ಗಿಸುವಂತಹ ಮಹಾ ಘೋರ ದುರಂತವೊಂದು ಸಂಭವಿಸಿದೆ. ಭಾನುವಾರದ ಬಿಡುವಿನ ದಿನದಂದು ಅಲ್ಪ ಆದಾಯದ ಆಸೆಯೊಂದಿಗೆ ನದಿಗೆ ಕಪ್ಪೆಚಿಪ್ಪು (ಸೀ ಶೆಲ್) ಹೆಕ್ಕಲು ಇಳಿದಿದ್ದ ಒಂದೇ ಭಾಗದ 14 ಜನರ ತಂಡದಲ್ಲಿ ಬರೋಬ್ಬರಿ 11 ಮಂದಿ ನೀರಿನ ಆಳ ತಿಳಿಯದೇ ನದಿಯ ಒಡಲಿನಲ್ಲಿ ಜಲಸಮಾಧಿಯಾಗಿದ್ದಾರೆ. ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ಸಂಭವಿಸಿದ ಈ ಭೀಕರ ಅವಘಡವು ಕರಾವಳಿಯ ಇತಿಹಾಸದಲ್ಲೇ ಅತ್ಯಂತ ಕರುಣಾಜನಕ ಘಟನೆಯಾಗಿ ದಾಖಲಾಗಿದ್ದು, ಇಡೀ ಜಿಲ್ಲೆಯನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ.
ಸಾಮಾನ್ಯವಾಗಿ ಭಾನುವಾರ ಬಂತೆಂದರೆ ಮೀನು ಮಾರುಕಟ್ಟೆಯಲ್ಲಿ ಸಾರ್ವಜನಿಕರ ದಟ್ಟಣೆ ಹಾಗೂ ವ್ಯಾಪಾರ ವಹಿವಾಟು ಅತ್ಯಂತ ಬಿರುಸಿನಿಂದ ಕೂಡಿರುತ್ತದೆ. ಈ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಪ್ಪೆಚಿಪ್ಪುಗಳಿಗೆ ಭಾರಿ ಬೇಡಿಕೆ ಇರುವುದರಿಂದ ಮತ್ತು ಉತ್ತಮ ಬೆಲೆ ಸಿಗುವುದರಿಂದ, ಸ್ಥಳೀಯ ನಿವಾಸಿಗಳು ತಮ್ಮ ದೈನಂದಿನ ಆರ್ಥಿಕತೆಗೆ ನೆರವಾಗಲೆಂಬ ಆಶಯದೊಂದಿಗೆ ಗುಂಪಾಗಿ ತಟ್ಟೆ ಹಕ್ಕಲು ನದಿಯತ್ತ ಮುಖ ಮಾಡಿದ್ದರು. ನದಿಗಿಳಿದಿದ್ದ 14 ಜನರ ಈ ಕಪ್ಪೆಚಿಪ್ಪು ಹೆಕ್ಕುವ ತಂಡದಲ್ಲಿ ಕೇವಲ ಇಬ್ಬರು ಪುರುಷರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಮಹಿಳೆಯರೇ ಆಗಿದ್ದರು. ಅತ್ಯಂತ ದುರದೃಷ್ಟಕರ ಮತ್ತು ಆತಂಕಕಾರಿ ಸಂಗತಿಯೆಂದರೆ, ನದಿಗಿಳಿದವರಲ್ಲಿ ಯಾರೊಬ್ಬರೂ ವೃತ್ತಿಪರ ಈಜುಗಾರರಾಗಲಿ ಅಥವಾ ಸಾಂಪ್ರದಾಯಿಕ ಮೀನುಗಾರರಾಗಲಿ ಆಗಿರಲಿಲ್ಲ. ಹೀಗಾಗಿಯೇ ಅವರಿಗೆ ನದಿಯ ನೀರಿನ ಪ್ರವಾಹದ ವೇಗ, ನೀರಿನ ಆಡಿಯಲ್ಲಿರುವ ಮರಳಿನ ಕುಸಿತ ಹಾಗೂ ಅಪಾಯಕಾರಿ ಸುಳಿಗಳ ಬಗ್ಗೆ ಕನಿಷ್ಠ ಜ್ಞಾನವೂ ಇರಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಭಾನುವಾರ ಮಧ್ಯಾಹ್ನದ ವೇಳೆಗೆ ನದಿಯ ದಡಕ್ಕೆ ಬಂದ ಈ ತಂಡವು ಆರಂಭದಲ್ಲಿ ತೀರಕ್ಕೆ ಹತ್ತಿರವಿದ್ದ ಎದೆಮಟ್ಟದ ನೀರಿರುವ ಸುರಕ್ಷಿತ ಜಾಗಕ್ಕೆ ಇಳಿದು ಕಪ್ಪೆಚಿಪ್ಪುಗಳನ್ನು ಹುಡುಕಲು ಆರಂಭಿಸಿದೆ. ಇವರ ಮೊದಲ ಪ್ರಯತ್ನ ಯಶಸ್ವಿಯಾಗಿದ್ದು, ಸುಮಾರು ಎರಡರಿಂದ ಮೂರು ಬುಟ್ಟಿಗಳಷ್ಟು ಕಪ್ಪೆಚಿಪ್ಪುಗಳು ಅತ್ಯಂತ ಸುಲಭವಾಗಿ ಕೈಸೇರಿವೆ. ಇದರಿಂದ ಮತ್ತಷ್ಟು ಉತ್ಸಾಹಗೊಂಡ ತಂಡವು, ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಪ್ಪೆಚಿಪ್ಪುಗಳನ್ನು ಸಂಗ್ರಹಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಹಪಾಹಪಿಗೆ ಬಿದ್ದು, ನದಿಯ ಮತ್ತಷ್ಟು ಮುಂಭಾಗಕ್ಕೆ ಅಂದರೆ ಆಳವಿರುವ ಅಪಾಯಕಾರಿ ಪ್ರದೇಶದತ್ತ ಮುನ್ನಡೆದಿದೆ. ಪ್ರಕೃತಿಯ ಶಾಂತ ಸ್ವರೂಪದ ಅಲೆಗಳ ಅಡಿಯಲ್ಲಿ ಹೊಂಚು ಹಾಕಿ ಕುಳಿತಿದ್ದ ಮೃತ್ಯುವಿನ ದರ್ಶನ ಈ ಮುಗ್ಧ ಜನರಿಗೆ ಕೊನೆಕ್ಷಣದವರೆಗೂ ಗೋಚರಿಸಲೇ ಇಲ್ಲ.
ನದಿಯ ಆಳ ಭಾಗಕ್ಕೆ ಇಳಿಯುತ್ತಿದ್ದಂತೆ ಹಠಾತ್ತನೆ ನೀರಿನ ತೀವ್ರತೆ ಹೆಚ್ಚಾಗಿದ್ದು, ನದಿಯ ತಳದಲ್ಲಿದ್ದ ಮರಳು ಕಾಲಿನ ಅಡಿಯಿಂದ ಜಾರಿ ಹೋಗಿದೆ. ನೀರಿನ ಆಳದ ಅರಿವಿಲ್ಲದೆ ನಿಯಂತ್ರಣ ತಪ್ಪಿದ ಮಹಿಳೆಯರು ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ, ಒಬ್ಬರ ಹಿಂದೆ ಒಬ್ಬರಂತೆ ನೀರಿನ ಪ್ರವಾಹಕ್ಕೆ ಸಿಲುಕಿ ಮುಳುಗಲಾರಂಭಿಸಿದ್ದಾರೆ. ವೃತ್ತಿಪರ ಈಜುಗಾರರಲ್ಲದ ಕಾರಣ ತೀವ್ರವಾಗಿ ಬಂದ ನೀರಿನ ಸೆಳೆತದಿಂದ ತಾವೂ ಪಾರಾಗಲಾಗದೆ, ಇತ್ತ ತಮ್ಮ ಕಣ್ಣೆದುರೇ ಮುಳುಗುತ್ತಿದ್ದ ಇತರ ಒಡನಾಡಿಗಳನ್ನೂ ರಕ್ಷಿಸಲಾಗದೆ ಇಡೀ ತಂಡವು ನೀರಿನಲ್ಲಿ ತಡಕಾಡಿದೆ. ನೀರಿನಲ್ಲಿ ಉಸಿರುಗಟ್ಟಿ ಪ್ರಾಣಕ್ಕಾಗಿ ತೀವ್ರ ಹೋರಾಟ ನಡೆಸಿದ ಒಟ್ಟು 11 ಜೀವಗಳು ಕೊನೆಗೆ ನದಿಯ ಒಡಲಲ್ಲೇ ಕೊನೆಯುಸಿರೆಳೆದಿವೆ. ಘಟನಾ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ನದಿಯಿಂದ ಶವಗಳನ್ನು ಮೇಲೆತ್ತಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಕರಾವಳಿ ಭಾಗದಲ್ಲಿ ಪ್ರಸ್ತುತ ಸೂತಕದ ಛಾಯೆ ಆವರಿಸಿದ್ದು, ಘಟನೆಯ ಬಗ್ಗೆ ಇಡೀ ರಾಜ್ಯವೇ ಕಂಬನಿ ಮಿಡಿಯುತ್ತಿದೆ.



Related posts

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ – ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿದ ಶಾಲಾ ವಿದ್ಯಾರ್ಥಿಗಳ ಮತ್ತು ಹಳೆ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಸಮಾರಂಭ

Mumbai News Desk

ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲ

Mumbai News Desk

 ಕಾಪು ಲೀಲಾಧರ ಶೆಟ್ಟಿ ಸ್ಮರಣಾರ್ಥ ರಕ್ತದಾನ ಶಿಬಿರ,

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿರುದ್ಧ ಕೀಳು ಭಾಷೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟವರ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Mumbai News Desk

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ -ಕಂಪ್ಯೂಟರ್ ಕೊಡುಗೆ ನೀಡಿದ ರಮ್ಯಾಶ್ರೀ ಪುರಂದರ ಖಾರ್ವಿ

Mumbai News Desk

 ಜ7 : ಅತ್ತೂರು, ಗುಂಡ್ಯಡ್ಕ ಸಾರ್ವಜನಿಕ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಭಕ್ತ ಸಮಿತಿ, 46ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ

Mumbai News Desk