
ಸಂಘಕ್ಕೆ ಹಿರಿಯರು ನೀಡಿದ ಕೊಡುಗೆಯನ್ನು ಉನ್ನತ ಮಟ್ಟಕ್ಕೇರಿಸೋಣ – ವಿಶ್ವನಾಥ ಕೆ. ಶೆಟ್ಟಿ
ಮುಂಬಯಿ : ಅಂದು ನಮ್ಮ ಹಿರಿಯರು ಗೋರೆಗಾಂವ್ ಕರ್ನಾಟಕ ಸಂಘವನ್ನು ಸ್ಥಾಪಿಸಿ ನಮಗೆಲ್ಲರಿಗೆ ಒಂದು ಉತ್ತಮ ವೇದಿಕೆಯನ್ನು ಒದಗಿಸಿದ್ದು ನಮ್ಮೆಲ್ಲರ ಸೌಭಾಗ್ಯ. ನಾವೆಲ್ಲರೂ ಸೇರಿ ಇದನ್ನು ಪ್ರೀತಿಯಿಂದ ಇನ್ನು ಉನ್ನತ ಮಟ್ಟಕ್ಕೇರಿಸೋಣ ಎಂದು ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾದ ವಿಶ್ವನಾಥ ಕೆ. ಶೆಟ್ಟಿ ನುಡಿದರು.
ಗೋರೆಗಾಂವ್ ಕರ್ನಾಟಕ ಸಂಘದ ಸರ್ವ ಸದಸ್ಯರ 68 ನೇ ವಾರ್ಷಿಕ ಮಹಾಸಭೆಯು ಜು. ೧೯ ರಂದು ಸಂಜೆ ಕೇಶವ ಗೋರೆ ಸ್ಮಾರಕ ಸಭಾಗೃಹ, ಅಂಬಾಬಾಯಿ ಮಂದಿರದ ಹತ್ತಿರ, ಗೋರೆಗಾಂವ್ (ಪ.) ಇಲ್ಲಿ ಜರಗಿದ್ದು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ನಮ್ಮ ಹಿರಿಯರು ಗೋರೆಗಾಂವ್ ಕರ್ನಾಟಕ ಸಂಘ ಸ್ಥಾಪಿಸಿ ಒಳ್ಳೆಯ ಕಾರ್ಯ ಮಾಡಿದ್ದಾರೆ. ನಮ್ಮ ಸಂಘದ ನಿವೇಷನ ಪುನರ್ ನಿರ್ಮಾಣವಾಗುತ್ತಿದ್ದು ಮುಂದಿನ ಮಹಾಸಭೆಯು ನಮ್ಮ ಹೊಸ ಕಟ್ಟಡದಲ್ಲಿ ವಿಶಾಲವಾದ ಕಚೇರಿಯಲ್ಲಿ ಆಗುವಂತಾಗಲು ನಾವೆಲ್ಲರೂ ಒಂದಾಗಿ ಕ್ರೀಯಾಶೀಲರಾಗೋಣ ಎಂದರು.
ಸಂಘದ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಟ್ರಸ್ಟಿಯಾಗಿರುವ ನಿತ್ಯಾನಂದ ಡಿ. ಕೋಟ್ಯಾನ್ ಮಾತನಾಡಿ, ಸಂಘದ ಪುನರ್ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಕಾಮಗಾರಿ ತೀವ್ರಗತಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದರು. ಮುಂದಿನ ಮಹಾಸಭೆಯನ್ನು ಹೊಸ ಕಟ್ಟಡದಲ್ಲಿರುವ ಸಂಘದ ಕಾರ್ಯಾಲಯದಲ್ಲಿ ನಡೆಸುವ ಅವಕಾಶ ದೊರೆಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಇದೇ ವೇಳೆ, ಕಟ್ಟಡದ ಪುನರ್ನಿರ್ಮಾಣ ಕಾಮಗಾರಿಯ ಪ್ರಗತಿ ಮತ್ತು ಅದರ ವಿವರಗಳನ್ನು ಸದಸ್ಯರೊಂದಿಗೆ ಹಂಚಿಕೊಂಡರು.
ಸಂಘದ ಸದಸ್ಯರಾದ ಸೀಮಾ ಕುಲಕರ್ಣಿ ಮತ್ತು ಶೈಲಾ ನಾಯಕ್ ಅವರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಯಿತು. ವರದಿ ವರ್ಷದಲ್ಲಿ ನಿಧನ ಹೊಂದಿದ ಸಂಘದ ಸದಸ್ಯರಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಸಂಘದ ಗೌರವ ಪ್ರಧಾನ ಕಾರ್ಯುದರ್ಶಿ ಶಾಂತಾ ಎನ್ ಶೆಟ್ಟಿ ಸ್ವಾಗತಿಸಿ ಗತ ಮಹಾಸಭೆಯ ವರದಿಯನ್ನು ಮಂಡಿಸಿದರು. ಲೆಕ್ಕ ಪತ್ರವನ್ನು ಗೌ. ಕೋಶಾಧಿಕಾರಿ ಕರುಣಾಕರ ಕೆ ಶೆಟ್ಟಿ ಮಂಡಿಸಿದರು. ನೂತನ ವರ್ಷಕ್ಕೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸೂಚಿಸಿದ ಠರಾವು ವನ್ನು ಈ ಸಂದರ್ಭದಲ್ಲಿ ಮಂಜೂರು ಮಾಡಲಾಯಿತು.
ಗೋರೆಗಾಂವ್ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ವಿಶ್ವನಾಥ ಕೆ. ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಸರಿತಾ ಸುರೇಶ್ ನಾಯಕ್ ಅವರು ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ.
ವೇದಿಕೆಯಲ್ಲಿ ಸಂಘದ ಟ್ರಸ್ಟಿ ದೇವಲ್ಕುಂದ ಭಾಸ್ಕರ್ ಶೆಟ್ಟಿಯವರೂ ಉಪಸ್ಥಿತರಿದ್ದರು. ಸಭಿಕರ ಅನಿಸಿಕೆಯಲ್ಲಿ ಬೋಂಬೆ ಬಂಟ್ಸ್ ಅಸೋಷಿಯೇಶನಿನ ನಿಕಟಪೂರ್ವ ಅಧ್ಯಕ್ಷ ಸಿ.ಎ. ಸುರೇಂದ್ರ ಶೆಟ್ಟಿ, ಸಚ್ಚೀಂದ್ರ ಕೋಟ್ಯಾನ್, ಚಿತ್ರಾಪು ಕೆ. ಎಂ. ಕೋಟ್ಯಾನ್ ಮತ್ತು ಹರಿಶ್ಚಂದ್ರ ಆಚಾರ್ಯ ಮಾತನಾಡಿ ಸೂಕ್ತ ಸಲಹೆ ನೀಡಿದರು. ಸಂಘದ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಉಳಾವಾರ, ಭಾಸ್ಕರ ಸಫಲಿಗ, ರಮೇಶ್ ಶೆಟ್ಟಿ ಪಯ್ಯಾರ್, ಹಿರಿಯರಾದ ಯು. ಎಸ್, ಕಾರಂತ್ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಜೊತೆ ಕಾರ್ಯದರ್ಶಿ ಸಹನಿ ವಿ ಶೆಟ್ಟಿ ಕೊನೇಗೆ ಧನ್ಯವಾದ ಸಮರ್ಪಿಸಿದರು.
ಸಂಘದ ಕಾರ್ಯಾಕಾರಿ ಸಮಿತಿ, ಎಲ್ಲಾ ಉಪಸಮಿತಿಗಳ ಪ್ರಮುಖರು ಮತ್ತು ಸದಸ್ಯರುಗಳು ಹಾಗೂ ಸಂಘದ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.





