ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಗುಣಮಟ್ಟವನ್ನು ಹೆಚ್ಚಿಸಲು ‘ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ’ (FDA)ಕೈಗೊಂಡಿರುವ ಕಟ್ಟುನಿಟ್ಟಿನ ಅಭಿಯಾನವನ್ನು ಪ್ರಮುಖ ಆತಿಥ್ಯ ರಂಗದ ಸಂಸ್ಥೆಗಳು ಸ್ವಾಗತಿಸಿವೆ. ಆದರೆ, ತನಿಖೆ ಮತ್ತು ಪರಿಶೀಲನೆಗಳು ಕಾನೂನುಬದ್ಧವಾಗಿ ಹಾಗೂ ನ್ಯಾಯಯುತವಾಗಿ ನಡೆಯಬೇಕು ಎಂದು ಮನವಿ ಮಾಡಿವೆ.
ಆಹಾರ ಮತ್ತು ಉಪಹಾರ ಗೃಹಗಳ ಒಕ್ಕೂಟದ ಪ್ರಮುಖ ಸಂಸ್ಥೆಗಳಾದ ‘HRAWI’ ‘NRAI’ಮತ್ತು ‘AHAR’ ಜಂಟಿ ಪ್ರಕಟಣೆ ಹೊರಡಿಸಿದ್ದು, ಗ್ರಾಹಕರ ಹಿತರಕ್ಷಣೆ ಮತ್ತು ಪ್ರಾಮಾಣಿಕ ಉದ್ಯಮಿಗಳ ಹಿತಾಸಕ್ತಿ ಎರಡನ್ನೂ ಕಾಯುವ ಸಮತೋಲಿತ ವಿಧಾನದ ಅಗತ್ಯವನ್ನು ಪ್ರತಿಪಾದಿಸಿವೆ.
ಪ್ರಮುಖ ಕುಂದುಕೊರತೆ ಹಾಗೂ ವಿನಂತಿಗಳು :
ತಿದ್ದುಪಡಿ ಮಾಡಿಕೊಳ್ಳಲು ಅವಕಾಶ:
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006’ರ ಸೆಕ್ಷನ್ 32ರ ಅಡಿಯಲ್ಲಿ, ಉದ್ಯಮಗಳ ಲೈಸೆನ್ಸ್ ಅಮಾನತು ಅಥವಾ ರದ್ದುಗೊಳಿಸುವ ಮೊದಲು ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಆದ್ಯತೆಯ ನೋಟಿಸ್ (Improvement Notices) ನೀಡಬೇಕು.
ಸಾರ್ವಜನಿಕವಾಗಿ ಹೆಸರು ಬಹಿರಂಗಪಡಿಸಬೇಡಿ:
ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳು ಸಂಪೂರ್ಣವಾಗಿ ಮುಗಿಯುವ ಮುನ್ನವೇ ಉದ್ಯಮಗಳ ಹೆಸರು, ಭಾವಚಿತ್ರ ಅಥವಾ ವೀಡಿಯೊಗಳನ್ನು ಬಹಿರಂಗಪಡಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ದಶಕಗಳಿಂದ ಕಟ್ಟಿ ಬೆಳೆಸಿದ ಉದ್ಯಮದ ಗೌರವ ಹಾಗೂ ಸಾವಿರಾರು ಉದ್ಯೋಗಿಗಳ ಜೀವನೋಪಾಯಕ್ಕೆ ಇದರಿಂದ ಧಕ್ಕೆಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿವೆ.
ಸಂಯಮದ ಹೇಳಿಕೆಗಳು:
ಪರಿಶೀಲನೆ ವೇಳೆಯ ವರದಿಗಳು ತಾತ್ಕಾಲಿಕವಾಗಿದ್ದು, ನಂತರದ ತಿದ್ದುಪಡಿಗಳಿಂದ ಬದಲಾಗಬಹುದು. ಹೀಗಾಗಿ ಅಂತಿಮ ನಿರ್ಧಾರವಾಗುವ ಮುನ್ನ ಸಾರ್ವಜನಿಕವಾಗಿ ಹೇಳಿಕೆ ನೀಡುವಾಗ ಸಂಯಮ ಕಾಯ್ದುಕೊಳ್ಳಲು ವಿನಂತಿಸಲಾಗಿದೆ.
ಸುರಕ್ಷತೆಗೆ ಉದ್ಯಮ ರಂಗದ ಬದ್ಧತೆ
ಆಹಾರ ಸುರಕ್ಷತೆ, ನೈರ್ಮಲ್ಯ ಮತ್ತು ನಿಯಮಗಳ ಪಾಲನೆಯಲ್ಲಿ ಆತಿಥ್ಯ ರಂಗವು ಸಂಪೂರ್ಣ ಬದ್ಧವಾಗಿದೆ ಎಂದು ಒಕ್ಕೂಟಗಳು ಸ್ಪಷ್ಟಪಡಿಸಿವೆ. ರಾಷ್ಟ್ರೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಾಗೂ ಮಹಾರಾಷ್ಟ್ರ FDA ಜೊತೆಗೂಡಿ ಜಾಗೃತಿ ಕಾರ್ಯಕ್ರಮಗಳು, ತರಬೇತಿ ಮತ್ತು ಪಾಲುದಾರರ ಸಮಾಲೋಚನೆಗಳ ಮೂಲಕ ಸುಧಾರಣೆಗೆ ಶ್ರಮಿಸುತ್ತಿರುವುದಾಗಿ ತಿಳಿಸಿವೆ.
ಅಂತಿಮ ಆಶಯ: ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ಜೊತೆಗೆ, ನಿಯಮ ಪಾಲಿಸಲು ಸಿದ್ಧವಿರುವ ಉದ್ಯಮಗಳಿಗೆ ಸೂಕ್ತ ಬೆಂಬಲ ನೀಡುವ ಪಾರದರ್ಶಕ ಮತ್ತು ಸಮತೋಲಿತ ನಿಯಂತ್ರಣ ವ್ಯವಸ್ಥೆ ಅಗತ್ಯವಾಗಿದೆ.





