ಮುಂಬಯಿ: ಇಲ್ಲಿನ ಬಾಣಗಂಗಾ ಪರಿಸರದ ವಾಲ್ಕೇಶ್ವರದಲ್ಲಿರುವ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠದಲ್ಲಿ ಶ್ರೀ ಗಣೇಶೋತ್ಸವ-2026ರ ಅಂಗವಾಗಿ, ಗಣೇಶ ಚತುರ್ಥಿ (ಸೆ. 14) ಯಿಂದ ಭಾದ್ರಪದ ಕೃಷ್ಣ ಪಕ್ಷ ಪ್ರತಿಪದೆ (ಸೆ. 27)ಯ ವರೆಗೆ ವೈಭವದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಜಿಎಸ್ಬಿ (ಗೌಡ ಸಾರಸ್ವತ ಬ್ರಾಹ್ಮಣ) ಸಮಾಜದ ಆದಿಪೀಠ ಗುರುವರ್ಯ, ಕೈವಲ್ಯ ಮಠಾಧಿಪತಿ ಪರಮ ಪೂಜ್ಯ ಶ್ರೀಮತ್ ಶಿವಾನಂದ ಸರಸ್ವತೀ ಸ್ವಾಮೀಜಿಯವರ 32ನೇ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ, ಮಠದ ವಾಲ್ಕೇಶ್ವರ (ಶ್ರೀ ಕಾಳಿಕಾ ಮಾತಾ ದೇವಿ) ಪ್ರಾಂಗಣದಲ್ಲಿ ಕಳೆದ ವರ್ಷದಂತೆಯೇ ಈ ವರ್ಷವೂ ಮಠಾಧೀಶರ ದಿವ್ಯ ಉಪಸ್ಥಿತಿಯಲ್ಲಿ 14 ದಿನಗಳ ಶ್ರೀ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.
ಈ ಶುಭ ಸಂದರ್ಭದಲ್ಲಿ ಪ್ರತಿದಿನ ಬೆಳಿಗ್ಗೆ ಶ್ರೀ ದೇವರ ಸನ್ನಿಧಿಯಲ್ಲಿ ಗಣಹೋಮ, ಮೂಡ ಗಣಪತಿ ಸೇವೆ, ಅಪ್ಪ ನೈವೇದ್ಯ ಸೇವೆ ಇತ್ಯಾದಿ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ. ಮಧ್ಯಾಹ್ನ ಶ್ರೀ ಮಹಾಗಣಪತಿ ದೇವರಿಗೆ ಮಹಾಪೂಜೆಯನ್ನು ಸ್ವಾಮೀಜಿಯವರು ಸ್ವಹಸ್ತಗಳಿಂದ ನೆರವೇರಿಸಲಿದ್ದಾರೆ. ಬಳಿಕ ಭವಾನಿ ಶಂಕರ ದೇವರಿಗೆ ಪೂಜೆ, ನೈವೇದ್ಯ, ಮಹಾಮಂಗಳಾರತಿ ಹಾಗೂ ಮಹಾಗಣಪತಿ ದೇವರಿಗೆ ಶಾಸ್ತ್ರಬದ್ಧವಾಗಿ ದೂರ್ವಾರ್ಚನೆ, ಮೋದಕ ನೈವೇದ್ಯ ಸಮರ್ಪಣೆ ಮತ್ತು ಆರತಿ ನಡೆಯಲಿದೆ. ನಂತರ ಸ್ಥಾನದೇವತೆ ಶ್ರೀ ಕಾಳಿಕಾ ಮಾತೆಯ ಪೂಜೆ, ಆರಾಧನೆ ಮತ್ತು ಮಂಗಳಾರತಿ ಜರುಗಲಿದೆ.
ಬಳಿಕ ಸಮಾವೇಶಗೊಂಡ ಭಕ್ತಾದಿಗಳು, ಮಠದ ಅನುಯಾಯಿಗಳು, ಸೇವಾದಾರರು ಹಾಗೂ ಭಿಕ್ಷಾ ಸೇವಾದಾರರು ಪೂಜ್ಯ ಗುರುಗಳಿಂದ ಗಂಧಾಕ್ಷತೆ ಮತ್ತು ತೀರ್ಥಪ್ರಸಾದ ಸ್ವೀಕರಿಸಲಿದ್ದಾರೆ.
ಪ್ರತಿದಿನ ಸಾಯಂಕಾಲ ಭಕ್ತರ ಪರವಾಗಿ ಮಹಾಗಣಪತಿ ದೇವರಿಗೆ ಪುಷ್ಪಾಲಂಕಾರ ಪೂಜೆ, ರಂಗಪೂಜೆ ಇನ್ನಿತರ ವಿಶೇಷ ಸೇವೆಗಳು ನಡೆಯಲಿವೆ. ನಿರಂತರ ಹಣ್ಣುಕಾಯಿ ಸೇವೆ ಹಾಗೂ ರಾತ್ರಿ ಪೂಜೆ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಳ್ಳಲಿವೆ.
ಸೆ. 26ರಂದು ವ್ರತ ಸಮಾಪ್ತಿಯಾಗಲಿದ್ದು, ಸೆ. 27ರಂದು ಗಣಪತಿಯ ಭವ್ಯ ಮೂರ್ತಿಯನ್ನು ಶೋಭಾಯಾತ್ರೆಯ ಮೂಲಕ ವಿಸರ್ಜನೆ ಮಾಡಲಾಗುವುದು ಎಂದು ಮಠದ ವಕ್ತಾರ ಕಮಲಾಕ್ಷ ಸರಾಫ್ ತಿಳಿಸಿದ್ದಾರೆ.




