ತ್ರಾಸಿ, ಅ. 5 : ಶ್ರೀ ದುರ್ಗಾಪರಮೇಶ್ವರಿ ಕಲಾನಿಕೇತನ ಸಂಗೀತ ಶಾಲೆ, ನಾಡಾ ಇದರ ಮೂರನೇ ಶಾಖೆ ತ್ರಾಸಿಯಲ್ಲಿ ಇತ್ತೀಚೆಗೆ ಉದ್ಘಾಟನೆಯಾಯಿತು.
ಉದ್ಯಮಿ ಹಾಗೂ ಕಲಾಪೋಷಕರಾದ ಮಂಜುನಾಥ ಸಾಲಿಯಾನ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, “ಸಂಗೀತವು ಅದ್ಭುತ ಶಕ್ತಿ. ಸಂಗೀತ ಕಲಿತವರಿಗೆ ಹಾಗೂ ಆಲಿಸುವವರಿಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ. ಬಾಲ್ಯದಲ್ಲಿಯೇ ಸಂಗೀತಾಭ್ಯಾಸ ಆರಂಭಿಸುವುದು ಅಗತ್ಯ. ಈ ಭಾಗದ ಮಕ್ಕಳಿಗೆ ಈ ಶಾಲೆ ವರದಾನವಾಗಲಿ,” ಎಂದು ಆಶಿಸಿದರು.
ಕಾರ್ಯಕ್ರಮವನ್ನು ಕೊಡುಗೈದಾನಿ ರಾಘವೇಂದ್ರ ಪೂಜಾರಿ ಉದ್ಘಾಟಿಸಿದರು. ನಿವೃತ್ತ ಎಲ್ಐಸಿ ಅಧಿಕಾರಿ ಸತೀಶ್ ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರೊಫೆಸರ್ ಎಂ. ರಾಮಚಂದ್ರ ಪ್ರಶಸ್ತಿ ಪುರಸ್ಕೃತ ಮಹಾಬಲ ಕೆ. ಅವರನ್ನು ಸನ್ಮಾನಿಸಲಾಯಿತು. ಸಂಗೀತ ವಿದ್ವಾನ್ ಗುರುಗಳಾದ ಶರತ್ ನಾಡಾ ಅವರಿಂದ ಹಿಂದೂಸ್ತಾನಿ ಸಂಗೀತ ಕಛೇರಿ ನಡೆಯಿತು.
ವೇದಿಕೆಯಲ್ಲಿ ಖ್ಯಾತ ಸ್ಯಾಕ್ಸೋಫೋನ್ ವಾದಕ ಗೋಪಾಲ್ ದೇವಾಡಿಗ, ಸಾಹಿತಿ ಶೇಖರ ಪೂಜಾರಿ ತಾರಿಬೇರು, ಸದಾನಂದ ಪೂಜಾರಿ, ಗೋವಿಂದ ಹಳಗೇರಿ ಹಾಗೂ ಉದಯ ಆಚಾರ್ಯ ತ್ರಾಸಿ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಸಂಗೀತ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಪ್ರತಿಭೆ ಪ್ರದರ್ಶಿಸುವುದರೊಂದಿಗೆ ಗುರುಗಳಿಗೆ ಗುರು ವಂದನೆ ಸಲ್ಲಿಸಿದರು. ಶಾಲೆಯ ವಿದ್ಯಾರ್ಥಿನಿ ಶ್ರೀವರ್ಷಾ ಸ್ವಾಗತಿಸಿದರು. ನಾಗರಾಜ ದೇವಳಿ ಹಾಗೂ ಗಣಪು ನಾಯಕವಾಡಿ ಕಾರ್ಯಕ್ರಮ ನಿರೂಪಿಸಿದರೆ, ನಾಗೇಂದ್ರ ಹೇರಂಜಾಲು ವಂದಿಸಿದರು.




