30 C
Mumbai
August 22, 2026
Mumbai News Kannada
ಮುಂಬಯಿ

ಮಂಗಳೂರು: ಕುಲಶೇಖರ ಪದವು ಶ್ರೀ ಶನೈಶ್ಚರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾಲೋಚನಾ ಸಭೆ, ಮುಂಬೈ ಸಮಿತಿ ಅಧ್ಯಕ್ಷರಾಗಿ ಮಹೇಶ್ ಶೆಟ್ಟಿ ತೆಳ್ಳಾರ್ ಆಯ್ಕೆ





ಹಿಂದೂ ಧರ್ಮದ ಸೇವಾ ಕಾರ್ಯಕ್ಕೆ ಮುಂಬೈ ಭಕ್ತರು ಕೈಜೋಡಿಸಿ: ನಳಿನ್ ಕುಮಾರ್ ಕಟೀಲ್ ಕರೆ

ಚಿತ್ರ ವರದಿ: ದಿನೇಶ್ ಕುಲಾಲ್

ಮುಂಬೈ (ಮಾ. 17): ಹಿಂದೂ ಯುವ ಸೇನೆ ಮಂಗಳೂರು ಇದರ ಪದವು ಶಾಖೆ ಸಂಚಾಲಿತ ಕುಲಶೇಖರ ಪದವು ಶ್ರೀ ಶನೈಶ್ಚರ ದೇವಸ್ಥಾನದ ನಿರ್ಮಾಣ, ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಮುಂಬೈ ಸಮಿತಿಯ ಸಮಾಲೋಚನಾ ಸಭೆಯು ಮಾರ್ಚ್ 17ರಂದು ಕಾಂದಿವಲಿ ಪೂರ್ವದ ಠಾಕೂರ್ ವಿಲೇಜ್‌ನಲ್ಲಿರುವ ‘ಸೋರಾ ಬೈ ನೈನ್’ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ, ಮಂಗಳೂರಿನ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಿತು.

​ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, “ಕಳೆದ ಮೂರು ದಶಕಗಳಿಂದ ಹಿಂದೂ ಯುವ ಸೇನೆಯ ಪದವು ಶಾಖೆಯು ಶ್ರೀ ಶನೈಶ್ಚರ ಪೂಜೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. 2000ನೇ ಇಸವಿಯಲ್ಲಿ ಚಾರಿತ್ರಿಕ ‘ಶ್ರೀ ಸಗ್ರಹಮಖ ಶನೈಶ್ಚರ ಮಹಾಯಾಗ’ ಹಾಗೂ 2018ರಲ್ಲಿ 7 ದಿನಗಳ ಪರ್ಯಂತ ನಡೆದ ಧಾರ್ಮಿಕ ಕಾರ್ಯಕ್ರಮಗಳು ಚರಿತ್ರೆ ನಿರ್ಮಿಸಿವೆ. ಇದೀಗ 10 ಸೆಂಟ್ಸ್ ಸ್ಥಳದಲ್ಲಿ ನೂತನ ಶಿಲಾಮಯ ದೇವಸ್ಥಾನದ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಏಪ್ರಿಲ್ 23ರಂದು ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಹಾಗೂ ಅಶ್ವತ್ಥ ವೃಕ್ಷ ಪ್ರತಿಷ್ಠೆ ನೆರವೇರಲಿದೆ. ಏಪ್ರಿಲ್ 18ರಿಂದ 24ರ ವರೆಗೆ ಬ್ರಹ್ಮಕಲಶದ ಸಂಭ್ರಮ ನಡೆಯಲಿದೆ,” ಎಂದು ಮಾಹಿತಿ ನೀಡಿದರು.

ಭೂ ದಾನ ಸೇವಾ ಯೋಜನೆ:

ನಳಿನ್ ಕುಮಾರ್ ಕಟೀಲ್ ಮಾತನಾಡಿ, “ಕ್ಷೇತ್ರದ ಭವಿಷ್ಯದ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಹೆಚ್ಚುವರಿ 20 ಸೆಂಟ್ಸ್ ಜಮೀನಿನ ಅಗತ್ಯವಿದೆ. ಪಕ್ಕದ ಜಮೀನಿನ ಮಾಲೀಕರು ರಿಯಾಯಿತಿ ದರದಲ್ಲಿ ಸ್ಥಳ ನೀಡಲು ಒಪ್ಪಿದ್ದಾರೆ. ದಾನಿಗಳು ಹಾಗೂ ಭಕ್ತರು ತನು-ಮನ-ಧನಗಳಿಂದ ಸಹಕರಿಸಿ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬೇಕು,” ಎಂದು ವಿನಂತಿಸಿದರು.

​ಇದೇ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಮುಂಬೈ ಸಮಿತಿ ಅಧ್ಯಕ್ಷರಾಗಿ ಉದ್ಯಮಿ ಮಹೇಶ್ ಶೆಟ್ಟಿ ತೆಳ್ಳಾರ್ ಹಾಗೂ ಕಾರ್ಯದರ್ಶಿಯಾಗಿ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

​ನಳಿನ್ ಕುಮಾರ್ ಕಟೀಲ್ ಅವರು ಸಮಿತಿಯ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿ, “ನಾನು ಸಂಸದನಾಗಿ 15 ವರ್ಷ ಸೇವೆ ಸಲ್ಲಿಸುವ ಮೊದಲೇ ಮುಂಬೈಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇನೆ. ಮುಂಬೈ ಬಂಧುಗಳು ನಮ್ಮ ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಮಹೇಶ್ ಶೆಟ್ಟಿ ತೆಳ್ಳಾರ್ ಅವರು ಹಿಂದುತ್ವದ ಮೇಲಿನ ಗೌರವದಿಂದ ಈ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಸಂತಸದ ವಿಷಯ,” ಎಂದರು.

​ಸಭೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಜಿ ಪ್ರಚಾರಕ ಭಾಸ್ಕರ್ ಚಂದ್ರ ಶೆಟ್ಟಿ, ಬಂಟರ ಸಂಘದ ಎಸ್.ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

​ನೂತನ ಅಧ್ಯಕ್ಷ ಮಹೇಶ್ ಶೆಟ್ಟಿ ತೆಳ್ಳಾರ್ ಮಾತನಾಡಿ, “ನಳಿನ್ ಕುಮಾರ್ ಕಟೀಲ್ ಅವರು ನೀಡಿದ ಈ ಜವಾಬ್ದಾರಿಯನ್ನು ವಿನಮ್ರತೆಯಿಂದ ಒಪ್ಪಿಕೊಂಡಿದ್ದೇನೆ. ಹಿಂದೂ ಧರ್ಮದ ಜಾಗೃತಿ ಮತ್ತು ದೇವಸ್ಥಾನದ ಅಭಿವೃದ್ಧಿಗೆ ಮುಂಬೈ ಭಕ್ತರು ಸೂಕ್ತ ವೇದಿಕೆ ಕಲ್ಪಿಸಿಕೊಡುವುದು ಅಗತ್ಯ,” ಎಂದರು.

​ಕಾರ್ಯಕ್ರಮದಲ್ಲಿ ಜಯಶೀಲ ತಿಂಗಳಾಯ ಗುರುಸ್ವಾಮಿ, ಉದಯ ಶೆಟ್ಟಿ ಮಲಾರ್ ಬೀಡು, ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು, ಯೋಗೇಂದ್ರ ಗಾಣಿಗ, ಜಿ.ಕೆ. ಕೆಂಚನಕೆರೆ, ಕಿರಣ್ ರೈ ಬಜಾಲ್, ವಿಕ್ರಮ್ ಚೌಟ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿ, ಗಿರೀಶ್ ಶೆಟ್ಟಿ ತೆಳ್ಳಾರ್ ಕಾರ್ಯಕ್ರಮ ನಿರೂಪಿಸಿದರು.



Related posts

ಬಿಲ್ಲವರ ಅಸೋಸಿಯೇಶನಿನ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ಗುರುಪೂರ್ಣಿಮೆ ಆಚರಣೆ

Mumbai News Desk

ಕುಲಾಲ ಸಂಘ ಮುಂಬಯಿ ಥಾಣೆ, ಕಸಾರ,ಕರ್ಜತ್ ಮತ್ತು ಭಿವಂಡಿ ಸ್ಥಳೀಯ ಸಮಿತಿಯ ವತಿಯಿಂದ ವಿಹಾರ ಕೂಟ.

Mumbai News Desk

ನವೋದಯ ಕನ್ನಡ ಸೇವಾ ಸಂಘ (ರಿ), ಥಾಣೆ ಇದರ ಆಯೋಜನೆಯಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡ ಭಜನಾ ಮಂಗಳೋತ್ಸವ

Mumbai News Desk

ಶ್ರೀ ಜೈ ಭವಾನಿ ಶನೀಶ್ವರ ದೇವಸ್ಥಾನ, ಡೊಂಬಿವಲಿಯ ನೂತನ ಅಧ್ಯಕ್ಷರಾಗಿ ಸೂರಜ್ ಡಿ. ಸಪಲಿಗ ಆಯ್ಕೆ 

Mumbai News Desk

ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು,  ಮಹಾರಾಷ್ಟ್ರ ಘಟಕದ ರಜತ ಮಹೋತ್ಸವ ಸಂಭ್ರಮಾಚರಣೆಯ ಪತ್ರಿಕಾಗೋಷ್ಠಿ, 

Mumbai News Desk

ಮಾಟುಂಗಾ ಮುಂಬೈ ಕನ್ನಡ ಸಂಘದ ವತಿಯಿಂದ ದತ್ತಿ ಉಪನ್ಯಾಸಗಳ ಕಾರ್ಯಕ್ರಮ

Mumbai News Desk