
ಮೂಲ್ಕಿಯ ಬೆಳ್ಳಾಯರು ಗ್ರಾಮದ ಗೊಂಟು ಎಂಬಲ್ಲಿರುವ ಶ್ರೀ ನಾಗಬ್ರಹ್ಮ ಕ್ಷೇತ್ರ ಪುತ್ರನ್ ಆದಿ ಮೂಲಸ್ಥಾನದಲ್ಲಿ ಮುಂಬರುವ ಏಪ್ರಿಲ್ 22ರಿಂದ 26ರವರೆಗೆ ಬ್ರಹ್ಮಕಲಶೋತ್ಸವ ಹಾಗೂ ವರ್ಧಂತ್ಯುತ್ಸವವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ.
ಈ ಪುಣ್ಯ ಕಾರ್ಯಕ್ರಮದ ಅಂಗವಾಗಿ ಏಪ್ರಿಲ್ 24ರ ಬುಧವಾರ ಬೆಳಿಗ್ಗೆ 10:48ರ ಶುಭ ಮಿಥುನ ಲಗ್ನದಲ್ಲಿ ನಾಗಬ್ರಹ್ಮಾದಿ ಪರಿವಾರ ದೈವಗಳಿಗೆ ಬ್ರಹ್ಮಕಲಶಾಭಿಷೇಕ ಹಾಗೂ ವೃಷಭ ಲಗ್ನದಲ್ಲಿ ಪ್ರತಿಷ್ಠಾ ಕಲಶಾಭಿಷೇಕವು ಬ್ರಹ್ಮಶ್ರೀ ಅತ್ತೂರು ಬೈಲುಮನೆ ವೆಂಕಟರಾಜ ಉಡುಪರ ಮಾರ್ಗದರ್ಶನದಲ್ಲಿ ನೆರವೇರಲಿದೆ.
ಏಪ್ರಿಲ್ 22ರಂದು ತೋರಣ ಮುಹೂರ್ತ ಮತ್ತು ಪ್ರಾರ್ಥನೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದ್ದು, ಏಪ್ರಿಲ್ 26ರ ಆದಿತ್ಯವಾರ ಕ್ಷೇತ್ರೋತ್ಸವದ ಅಂಗವಾಗಿ ಆಶ್ಲೇಷ ಬಲಿ ಸೇವೆ, ಸಮೂಹ ತಂಬಿಲ ಸೇವೆ, ತುಲಾಭಾರ ಸೇವೆ ಹಾಗೂ ನಾಗದರ್ಶನ ಮೊದಲಾದ ವಿಶೇಷ ಸೇವೆಗಳು ನಡೆಯಲಿವೆ. ಕ್ಷೇತ್ರದ ಅರ್ಚಕರುಗಳಾದ ಶ್ರೀ ರಾಮದಾಸ್ ಭಟ್, ಶ್ರೀ ಮುರಳೀಧರ ರಾವ್ ಮತ್ತು ಶ್ರೀ ಸುಬ್ರಹ್ಮಣ್ಯ ರಾವ್ ಅವರ ಪೌರೋಹಿತ್ಯದಲ್ಲಿ ಈ ಎಲ್ಲಾ ಧಾರ್ಮಿಕ ಕೈಂಕರ್ಯಗಳು ಜರುಗಲಿದ್ದು, ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯ ಪದಾಧಿಕಾರಿಗಳು ವಿನಂತಿಸಿದ್ದಾರೆ. ಈ ಐದು ದಿನಗಳ ಕಾಲ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗಲಿದ್ದು, ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

ಧಾರ್ಮಿಕ ಕಾರ್ಯಕ್ರಮಗಳ ವಿವರ :
ಐದು ದಿನಗಳ ಕಾಲ ನಡೆಯುವ ಈ ಧಾರ್ಮಿಕ ಸಂಭ್ರಮವು ಏಪ್ರಿಲ್ 22ರ ಬುಧವಾರ ಬೆಳಿಗ್ಗೆ 9 ಗಂಟೆಗೆ ತೋರಣ ಮುಹೂರ್ತ ಗಣಪತಿ ಹೋಮ ಉಗ್ರಾಣ ಮುಹೂರ್ತ ಮತ್ತು ಪ್ರಾರ್ಥನೆಯೊಂದಿಗೆ ಆರಂಭಗೊಳ್ಳಲಿದೆ.
ಏಪ್ರಿಲ್ 23ರಂದು ಸಂಜೆ 5ರಿಂದ ದೈವದ ಆಲಯ ಪರಿಗ್ರಹ, ಪಂಚಗವ್ಯ, ಪುಣ್ಯಾಹ ವಾಚನ, ಸಪ್ತಶುದ್ಧಿ ಹಾಗೂ ವಾಸ್ತುಬಲಿ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ಪ್ರಕಾರ ಬಲಿ, ದೈವಗಳ ಮಂಚ ಮತ್ತು ಬಿಂಬಾದಿವಾಸ, ನಾಗಬ್ರಹ್ಮಾದಿ ಪರಿವಾರ ದೇವರುಗಳ ಹೋಮ ಮತ್ತು ಭಂಡಾರ ಆಗಮನ ಮೊದಲಾದ ವಿಧಿವಿಧಾನಗಳು ನಡೆಯಲಿವೆ.
ಏಪ್ರಿಲ್ 24ರ ಶುಕ್ರವಾರ ಬೆಳಿಗ್ಗೆ 7ರಿಂದ ಪುಣ್ಯಹ ವಾಚನ, ನವಗ್ರಹ ಹೋಮ, ಧೂಮಾವತಿ ಪರಿವಾರದೈವಗಳ ಕಳಶಾದಿವಾಸ, ಬೆಳ್ಳಿಗ್ಗೆ 8.20ಕ್ಕೆ ವೃಷಭ ಲಗ್ನ ಸುಮೂರ್ತದಲ್ಲಿ ದೈವ ಪ್ರತಿಷ್ಠೆ ಕಲಶಾಭಿಷೇಕ ಪ್ರಸನ್ನ ಪೂಜೆ , ಬೆಳ್ಳಿಗೆ 10.48ರ ಮಿಥುನ ಲಗ್ನ ಸಮಹೂರ್ತದಲ್ಲಿ ನಾಗ ಬ್ರಹ್ಮಾದಿ ಪರಿವಾರ ದೇವರುಗಳಿಗೆ ಬ್ರಹ್ಮ ಕಳಸಾಭಿಷೇಕ, ಬ್ರಾಹ್ಮಣ ವಟು, ಸುವಾಸಿನಿ ಸಮಾರಾಧನೆ ಪ್ರಸಾದ ವಿತರಣೆ ನಡೆಯಲಿದೆ.
ಮಧ್ಯಾಹ್ನ 12.15ಕ್ಕೆ ಪಲ್ಲ ಪೂಜೆ, 12.30ರಿಂದ ಭಜನಾ ಸಂಕೀರ್ತನೆ, 12.35ರಿಂದ ಮಹಾ ಅನ್ನಸಂತರ್ಪಣೆ ಮತ್ತು ಸಂಜೆ 5ರಿಂದ ಭದ್ರಕ ಮಂಡಲ ಪೂಜೆ ನಡೆಯಲಿದೆ.
ಏಪ್ರಿಲ್ 25ರ ಶನಿವಾರ ಪವಮಾನ ಹೋಮ, ಸಂಜೀವಿನಿ ಮೃತ್ಯುಂಜಯ ಹೋಮ, ಸಂಜೆ 6ರಿಂದ ದುರ್ಗ ನಮಸ್ಕಾರ ಪೂಜೆ, ಭೂ ವರಾಹ ಹೋಮ ಹಾಗೂ ವಾರ್ಷಿಕ ತಂಬಿಲ ಸೇವೆಗಳು ಜರುಗಲಿವೆ.
ಮಹೋತ್ಸವದ ಸಮಾರೋಪ ದಿನವಾದ ಏಪ್ರಿಲ್ 26ರಂದು ಬೆಳಿಗ್ಗೆ 8ರಿಂದ ಪುಣ್ಯಾಹ ವಾಚನ, ನವಕ ಕಲಶಾಭಿಷೇಕ, ಸರ್ಪತ್ರಯ ಹೋಮ, ಸಾಮೂಹಿಕ ಆಶ್ಲೇಷ ಬಲಿ, ಸಾಮೂಹಿಕ ತನು ತಂಬಿಲ ಸೇವೆ, ಪ್ರಸನ್ನ ಪೂಜೆ, ತುಲಾಭಾರ ಸೇವೆ, ಮತ್ತು ನಾಗದರ್ಶನ ನಡೆಯಲಿದ್ದು, ಸಂಜೆ ಭಂಡಾರ ಇಳಿಸುವುದರೊಂದಿಗೆ ಕಾರ್ಯಕ್ರಮವು ಸಂಪನ್ನಗೊಳ್ಳಲಿದೆ.
ಈ ಪುಣ್ಯ ಕಾರ್ಯಕ್ರಮದಲ್ಲಿ ಊರ ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು-ಮನ-ಧನಗಳ ಸಹಕಾರದೊಂದಿಗೆ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಸಮಿತಿ, ಮಹಿಳಾ ಸಮಿತಿ ಹಾಗೂ ಮುಂಬೈ ಸಮಿತಿಯ ಪದಾಧಿಕಾರಿಗಳು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




