
ನಗರದ ಪ್ರತಿಷ್ಠಿತ ಆರ್. ವಿ. ಶಿಕ್ಷಕರ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಗೀತಾಲಕ್ಷ್ಮಿ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ಇವರು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಕಾತ್ಯಾಯಿನಿ ಅವರ ಸಮರ್ಥ ಮಾರ್ಗದರ್ಶನದಲ್ಲಿ ‘ಎಫೆಕ್ಟಿವ್ನೆಸ್ ಆಫ್ ಎಕ್ಸ್ ಪಿರಿಯಂಟಲ್ ಲರ್ನಿಂಗ್ ಆನ್ ಅಚೀವ್ಮೆಂಟ್ ಅಂಡ್ ಇಂಟ್ರೆಸ್ಟ್ ಇನ್ ಸೋಶಿಯಲ್ ಸೈನ್ಸ್ ಅಮಾಂಗ್ ಸೆಕೆಂಡರಿ ಸ್ಕೂಲ್ ಸ್ಟೂಡೆಂಟ್ಸ್’ (ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಸಮಾಜ ವಿಜ್ಞಾನ ವಿಷಯದ ಆಸಕ್ತಿ ಮತ್ತು ಸಾಧನೆಯ ಮೇಲೆ ಅನುಭವಜನ್ಯ ಕಲಿಕೆಯ ಪರಿಣಾಮಗಳು) ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಈ ಗೌರವ ಸಂದಿದೆ.




ಇತ್ತೀಚೆಗೆ ನಡೆದ ಡಾ. ಮನಮೋಹನ್ ಸಿಂಗ್ ನಗರ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಗೀತಾಲಕ್ಷ್ಮಿ ಅವರಿಗೆ ಅಧಿಕೃತವಾಗಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಶುಭ ಹಾರೈಸಿದರು. ಶಿಕ್ಷಣ ಕ್ಷೇತ್ರದಲ್ಲಿನ ಇವರ ಈ ಸಾಧನೆಗೆ ಸಂಸ್ಥೆಯ ಮಂಡಳಿ, ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.




