ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರು ಶಿರ್ಲಾಲಿನ ಪಂಗ್ಲಬೆಟ್ಟು ಶ್ರೀ ಬ್ರಹ್ಮಮುಗೇರಕಲ ಕ್ಷೇತ್ರದಲ್ಲಿ ನಡೆದ ತನ್ನಿಮಾನಿಗ ನೇಮೋತ್ಸವದಲ್ಲಿ 12 ವರ್ಷದ ಬಾಲಕನೊಬ್ಬ ದೈವ ನರ್ತನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಶಿರ್ಲಾಲು ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾದ ಸಮರ್ಥ್ ಎಂಬ ಈ ಬಾಲಕ, ಅತ್ಯಂತ ಸಣ್ಣ ವಯಸ್ಸಿನಲ್ಲೇ ದೈವದ ಗಗ್ಗರ ಕಟ್ಟಿ, ಸಂಪ್ರದಾಯಬದ್ಧವಾಗಿ ನೇಮೋತ್ಸವ ನಡೆಸಿಕೊಟ್ಟಿದ್ದಾನೆ. ಈತನ ದೈವ ನರ್ತನದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತುಳುನಾಡಿನ ದೈವಾರಾಧನೆಯ ಸಂಸ್ಕೃತಿಯನ್ನು ಎತ್ತಿಹಿಡಿಯುವಂತಿದೆ.
ಸಮರ್ಥ್ ತನ್ನ ಅಜ್ಜ ಮತ್ತು ತಂದೆ ಹರೀಶ್ ಅವರ ಮಾರ್ಗದರ್ಶನದಲ್ಲಿ ಈ ಕಲೆಯನ್ನು ಮೈಗೂಡಿಸಿಕೊಂಡಿದ್ದು, ವಂಶಪಾರಂಪರ್ಯವಾಗಿ ಬಂದಿರುವ ಈ ದೈವ ಸೇವೆಯನ್ನು ಶ್ರದ್ಧೆಯಿಂದ ಮುಂದುವರಿಸಿಕೊಂಡು ಹೋಗುತ್ತಿದ್ದಾನೆ. ತನ್ನಿಮಾನಿಗ ದೈವದ ಕೋಲ ಕಟ್ಟುವವರು ಅವಿವಾಹಿತರಾಗಿರಬೇಕು ಮತ್ತು ನಸುಕಿನ ವೇಳೆಯಲ್ಲಿ ಈ ಸೇವೆ ನಡೆಯಬೇಕು ಎಂಬ ಕಟ್ಟುನಿಟ್ಟಿನ ನಿಯಮಗಳಿದ್ದು, ಇವೆಲ್ಲವನ್ನೂ ಪಾಲಿಸಿ ಈ ಬಾಲಕ ಯಶಸ್ವಿಯಾಗಿ ದೈವ ನರ್ತನ ಮಾಡಿದ್ದಾನೆ. ಈ ಕೋಲದ ಸಮಯದಲ್ಲಿ ದೈವಕ್ಕೆ ಮದುವೆ ಮಾಡಿಸುವ ಅಪರೂಪದ ಸಂಪ್ರದಾಯವೂ ನಡೆಯುತ್ತದೆ. ಬಾಲಕನ ಈ ಭಕ್ತಿ ಮತ್ತು ಶ್ರದ್ಧೆಯನ್ನು ಕಂಡು ಸ್ಥಳೀಯರು ಹಾಗೂ ದೈವಾರಾಧಕರು ವ್ಯಾಪಕವಾಗಿ ಪ್ರಶಂಸಿಸುತ್ತಿದ್ದು, ಇದು ತುಳುನಾಡಿನ ಹೆಮ್ಮೆ ಎಂದು ಬಣ್ಣಿಸಿದ್ದಾರೆ.




