
ಮುಂಬಯಿ: ಕರ್ನಾಟಕ ಲೇಖಕಿಯರ ಸಂಘವು ಬೆಂಗಳೂರಿನ ಕನ್ನಡ ಭವನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಯನ ಸಭಾಂಗಣದಲ್ಲಿ ಏಪ್ರಿಲ್ 9ರಂದು ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಮುಂಬಯಿಯ ಕವಯಿತ್ರಿ ಹಾಗೂ ಲೇಖಕಿ ಅನಿತಾ ಪಿ. ತಾಕೊಡೆ ಅವರಿಗೆ ‘ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪಡೆದ ಕೃತಿ ‘ಮೇಣಕ್ಕಂಟಿದ ಬತ್ತಿ’, ಮುಂಬಯಿಯ ತಾಕೊಡೆ ಎಂಟರ್ಪ್ರೈಸಸ್ ಮೂಲಕ ಪ್ರಕಟವಾದ ಅವರ ಪ್ರಥಮ ಕೃತಿಯಾಗಿದೆ.
ಅಪರಾಹ್ನ ಮೂರರಿಂದ ಸಂಜೆ ಆರರವರೆಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮತ್ತು ಖ್ಯಾತ ಪತ್ರಕರ್ತ, ‘ಅವಧಿ ಡಾಟ್ ಕಾಮ್’ನ ಜಿ.ಎನ್. ಮೋಹನ್ ಅವರು ಅನಿತಾ ಪಿ. ತಾಕೊಡೆ ಸೇರಿದಂತೆ ಪುರಸ್ಕೃತ ಲೇಖಕಿಯರಿಗೆ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಮಾಡಿದರು. ವೇದಿಕೆಯಲ್ಲಿ ಕಲೇಸಂ ಅಧ್ಯಕ್ಷೆ ಡಾ. ಆರ್. ಸುನಂದಮ್ಮ, ಸಾಹಿತಿ ಡಾ. ಎನ್. ಗಾಯತ್ರಿ, ಸಮಾ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.




