.
ವಸಯಿ (ಏ. 18): ವಸಯಿ ಕರ್ನಾಟಕ ಸಂಘದ ಯುವ ವಿಭಾಗದ ವತಿಯಿಂದ ‘ಫ್ರೆಶ್ ಫಿಶ್ ವಸೈ’ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ವಸಯಿ ಪರಿಸರದ ತುಳು-ಕನ್ನಡಿಗರಿಗಾಗಿ ಆಯೋಜಿಸಲಾದ ವಿಶೇಷ ಕ್ರೀಡಾಕೂಟವು ಏಪ್ರಿಲ್ 12ರ ಭಾನುವಾರದಂದು ಮಧ್ಯಾಹ್ನದಿಂದ ಮುಸ್ಸಂಜೆಯವರೆಗೆ ಅತ್ಯಂತ ಯಶಸ್ವಿಯಾಗಿ ನಡೆಯಿತು.

ವಸಯಿ ಕರ್ನಾಟಕ ಸಂಘದ ಗೌರವಾಧ್ಯಕ್ಷ ಶ್ರೀ ವಿಶ್ವನಾಥ್ ಪಿ. ಶೆಟ್ಟಿ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ, ಎಲ್ಲಾ ಕ್ರೀಡಾಳುಗಳಿಗೆ ಶುಭ ಹಾರೈಸಿದರು. ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಕರ್ನೂರು ಶಂಕರ್ ಆಳ್ವ ಅವರು, “ಕ್ರೀಡೆ ಕೇವಲ ಮನರಂಜನೆಯ ಸಾಧನವಲ್ಲ, ಅದು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಅಭಿವೃದ್ಧಿಗೆ ಅತ್ಯಗತ್ಯ. ಇಲ್ಲಿ ತುಳು-ಕನ್ನಡಿಗರು ಪರಸ್ಪರ ಬಾಂಧವ್ಯದಿಂದ ಬೆರೆತು, ಕ್ರೀಡಾ ಮನೋಭಾವದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುವುದು ಸಂತೋಷದ ಸಂಗತಿ” ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರವೀಂದ್ರ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಎಸ್. ಶೆಟ್ಟಿ, ಗೌರವ ಕೋಶಾಧಿಕಾರಿ ವಿಜಯ್ ಎಂ. ಶೆಟ್ಟಿ, ಜೊತೆ ಸಲಹೆಗಾರ ಓ.ಪಿ. ಪೂಜಾರಿ, ಜೊತೆ ಕೋಶಾಧಿಕಾರಿ ಗಂಗಾಧರ್ ಟಿ. ಶೆಟ್ಟಿ ಹಾಗೂ ಕ್ರೀಡಾ ಸಮಿತಿ ಅಧ್ಯಕ್ಷ ಮಂಜುನಾಥ್ ಎನ್. ಶೆಟ್ಟಿ ಕೊಡ್ಲಾಡಿ ಉಪಸ್ಥಿತರಿದ್ದರು.

ಅಲ್ಲದೆ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಯಶೋಧರ್ ಕೋಟ್ಯಾನ್, ಸದಸ್ಯತ್ವ ನೋಂದಣಿ ಸಮಿತಿ ಅಧ್ಯಕ್ಷ ಹರೀಶ್ ಎನ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ್ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ ಎ. ಶೆಟ್ಟಿ, ಕೋಶಾಧಿಕಾರಿ ಭಾರತಿ ಎಚ್. ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ರಿತೇಶ್ ಶೆಟ್ಟಿ ಸೇರಿದಂತೆ ವಿವಿಧ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.
ಮಹಿಳೆಯರು, ಯುವಕರು ಮತ್ತು ಮಕ್ಕಳು ಸೇರಿದಂತೆ ನೂರಕ್ಕೂ ಹೆಚ್ಚು ತುಳು-ಕನ್ನಡಿಗ ಬಾಂಧವರು ವಿವಿಧ ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ತುಳು-ಕನ್ನಡಿಗರನ್ನು ಒಗ್ಗೂಡಿಸುವ ಮತ್ತು ಕ್ರೀಡಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಹಮ್ಮಿಕೊಂಡ ಈ ಕಾರ್ಯಕ್ರಮವು ಯಶಸ್ವಿಯಾಯಿತು ಎಂದು ಆಯೋಜಕರು ತಿಳಿಸಿದರು.
ವಿಜೇತ ಕ್ರೀಡಾಳುಗಳಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ‘ಫ್ರೆಶ್ ಫಿಶ್ ವಸೈ’ ಸಂಸ್ಥೆಯ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.




