ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದು ಅತ್ಯಂತ ನಾಟಕೀಯ ಬೆಳವಣಿಗೆ ನಡೆದಿದ್ದು, ಚುನಾವಣಾ ಸೋಲಿನ ಹೊರತಾಗಿಯೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರು ವಿಧಾನಸಭಾ ವಿಸರ್ಜನೆಯ ಆದೇಶ ಹೊರಡಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಹೀನಾಯವಾಗಿ ಸೋತಿದ್ದರೂ, ಈ ಜನಾದೇಶವು “ಲೂಟಿ”ಯ ಫಲಿತಾಂಶ ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದರು. “ನಾನು ಸೋತಿಲ್ಲ, ಆದ್ದರಿಂದ ನಾನು ರಾಜಭವನಕ್ಕೆ ಹೋಗುವುದಿಲ್ಲ ಮತ್ತು ರಾಜೀನಾಮೆ ನೀಡುವುದಿಲ್ಲ” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ನೇರವಾಗಿ ಸವಾಲು ಹಾಕಿದ್ದರು. ಈ ರಾಜಕೀಯ ಹಗ್ಗಜಗ್ಗಾಟವು ರಾಜ್ಯದಲ್ಲಿ ಸಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದ ಬೆನ್ನಲ್ಲೇ, ರಾಜ್ಯಪಾಲರು ಸಂವಿಧಾನದ 174 ನೇ ವಿಧಿಯ ಷರತ್ತು (2) ರ ಅಡಿಯಲ್ಲಿ ತಮಗಿರುವ ಅಧಿಕಾರವನ್ನು ಚಲಾಯಿಸಿ ಮೇ 7, 2026 ರಿಂದ ಜಾರಿಗೆ ಬರುವಂತೆ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.
ಈ ಬೆಳವಣಿಗೆಯಿಂದಾಗಿ ಕಳೆದ ಮೂರು ಅವಧಿಗಳ ಮಮತಾ ಬ್ಯಾನರ್ಜಿ ಅವರ ಆಡಳಿತಕ್ಕೆ ಅನಿರೀಕ್ಷಿತ ಅಂತ್ಯ ಹಾಡಿದಂತಾಗಿದ್ದು, ಬಿಜೆಪಿ ನಾಯಕರು ಮುಖ್ಯಮಂತ್ರಿಯವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ತೃಣಮೂಲ ಕಾಂಗ್ರೆಸ್ ಈ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆಸುತ್ತಿದೆ. ವಿಧಾನಸಭೆಯ ಅವಧಿ ಇಂದು ಮಧ್ಯರಾತ್ರಿ ಮುಕ್ತಾಯಗೊಳ್ಳಬೇಕಿದ್ದರೂ, ಮುಖ್ಯಮಂತ್ರಿಯವರ ಪಟ್ಟು ಮತ್ತು ವಿರೋಧ ಪಕ್ಷಗಳ ತೀವ್ರ ಪ್ರತಿರೋಧದಿಂದಾಗಿ ರಾಜ್ಯಪಾಲರು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಮುಂದಿನ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಸಂವಿಧಾನದ ನಿಯಮಗಳಂತೆ ನಿರ್ಗಮಿತ ಮಂತ್ರಿ ಮಂಡಳಿಯು ಕೇವಲ ಉಸ್ತುವಾರಿ ಸಾಮರ್ಥ್ಯದಲ್ಲಿ ಮಾತ್ರ ಮುಂದುವರಿಯಬಹುದಾಗಿದೆ. ಪಶ್ಚಿಮ ಬಂಗಾಳದ ಈ ವಿದ್ಯಮಾನವು ಇಡೀ ದೇಶದ ಗಮನ ಸೆಳೆದಿದ್ದು, ಮುಂದಿನ ಕಾನೂನು ಹೋರಾಟ ಮತ್ತು ರಾಜಕೀಯ ಸ್ಥಿತ್ಯಂತರಗಳು ಕುತೂಹಲ ಮೂಡಿಸಿವೆ.




