ಮುಂಬೈ: ಸಂತಾಕ್ರೂಜ್ ಪೂರ್ವದ ಪ್ರಭಾತ ಕಾಲೋನಿಯಲ್ಲಿರುವ ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮವು 31/07/2026 ರ ಶುಕ್ರವಾರದಂದು ಶಾಲೆಯಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾತೃ ಸಂಸ್ಥೆಯ ಉಪಾಧ್ಯಕ್ಷ ಮೋಹನ ಸಿ. ಕೋಟ್ಯಾನ್ ಅವರು ಮಾತನಾಡಿ, “ಬಿಲ್ಲವರ ಅಸೋಸಿಯೇಶನ್ ಹಿರಿಯರ ಮಾರ್ಗದರ್ಶನದೊಂದಿಗೆ, ಶಿಕ್ಷಣದಿಂದ ವಂಚಿತರಾಗುವ ಮಕ್ಕಳಿಗೆ ಶಿಕ್ಷಣ ನೀಡುವ ಸದುದ್ದೇಶದಿಂದಲೇ ಈ ರಾತ್ರಿ ಶಾಲೆಯನ್ನು ನಡೆಸುತ್ತಾ ಬಂದಿದೆ. ನಮ್ಮ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಸದಾ ಶೈಕ್ಷಣಿಕ ನೆರವು ನೀಡಲಾಗುತ್ತಿದೆ. ಈ ಶೈಕ್ಷಣಿಕ ವರ್ಷದ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಶಾಲೆಯ ಆದರ್ಶ ಶಿಕ್ಷಕಿ ಹಾಗೂ ಸಮಾಜ ಸೇವಕಿ ಶ್ರೀಮತಿ ಮೋಹಿನಿ ದೇವು ಪೂಜಾರಿಯವರು ಉಚಿತವಾಗಿ ಸಮವಸ್ತ್ರಗಳನ್ನು ನೀಡುತ್ತಿರುವುದು ಅಭಿನಂದನೀಯ,” ಎಂದರು.

ಬಿಲ್ಲವರ ಅಸೋಸಿಯೇಶನ್ನ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ ಜಿ. ಸಾಲಿಯಾನ್ ಅವರು ಮಾತನಾಡಿ, “ಕಳೆದ 66 ವರ್ಷಗಳಿಂದ ಸಂಸ್ಥೆಯು ರಾತ್ರಿ ಶಾಲೆಯ ಮೂಲಕ ಉಚಿತ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಕಳೆದ 12 ವರ್ಷಗಳಿಂದ ಎಸ್.ಎಸ್.ಎಲ್.ಸಿ. ಬೋರ್ಡ್ ಪರೀಕ್ಷೆಯಲ್ಲಿ ಶಾಲೆಗೆ ನೂರು ಪ್ರತಿಶತ ಫಲಿತಾಂಶ ಬರುತ್ತಿರುವುದು ಹೆಮ್ಮೆಯ ವಿಚಾರ. ಶಾಲೆಯನ್ನು ಉಳಿಸಿ ಬೆಳೆಸಲು ವಿದ್ಯಾರ್ಥಿಗಳು ತಮ್ಮ ಪರಿಚಿತ ಮಕ್ಕಳನ್ನು ಸೇರಿಸಬೇಕು,” ಎಂದು ಕರೆ ನೀಡಿ, ವಿದ್ಯಾರ್ಥಿಗಳಿಗೆ ಉತ್ತಮ ವ್ಯಾಸಂಗ ಮಾಡಲು ಹಿತವಚನ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸಮವಸ್ತ್ರದ ಪ್ರಾಯೋಜಕರಾದ ಶಾಲೆಯ ಶಿಕ್ಷಕಿ ಮೋಹಿನಿ ದೇವು ಪೂಜಾರಿ ಅವರು ಮಾತನಾಡಿ, “ಬಡವರ ಮಕ್ಕಳು ಶಿಕ್ಷಣ ಪಡೆಯಬೇಕೆಂಬ ಆಶಯದೊಂದಿಗೆ ಮಾತೃ ಸಂಸ್ಥೆಯು ಗುರುವಿನ ಹೆಸರಿನಲ್ಲಿ ರಾತ್ರಿ ಪ್ರೌಢ ಶಾಲೆಯನ್ನು ನಡೆಸುತ್ತಿರುವುದು ಹೆಮ್ಮೆಯೆನಿಸುತ್ತದೆ. ಮಕ್ಕಳಲ್ಲಿ ಸಂಸ್ಕಾರ ಬೆಳೆಯಲು ಶಿಕ್ಷಣ ಅತಿ ಮುಖ್ಯ. ವಿದ್ಯೆ ಪಡೆದ ಮಕ್ಕಳು ಉತ್ತಮ ನಾಗರಿಕರಾಗಲು ಸಾಧ್ಯ,” ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯ ಮೇಲೆ ಬಿಲ್ಲವರ ಅಸೋಸಿಯೇಶನ್ನ ಉಪಾಧ್ಯಕ್ಷ ಮೋಹನ ಸಿ. ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ ಜಿ. ಸಾಲಿಯಾನ್, ಶಾಲಾ ಸಮಿತಿಯ ಸಲಹೆಗಾರ ಬನ್ನಂಜೆ ರವೀಂದ್ರ ಅಮೀನ್, ಶಾಲಾ ವಿಕಾಸ ಸಮಿತಿಯ ಅಧ್ಯಕ್ಷೆ ತಾಹಿರ್ ಕಲಂದರ ಶೇಖ್, ಸಮವಸ್ತ್ರ ಪ್ರಾಯೋಜಕಿ ಮೋಹಿನಿ ದೇವು ಪೂಜಾರಿ ಹಾಗೂ ಶಾಲೆಯ ಮುಖ್ಯಾಧ್ಯಾಪಕ ಮಲ್ಲಿಕಾರ್ಜುನ ಬಡಿಗೇರ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಶಿಕ್ಷಕಿ ಮೋಹಿನಿ ಪೂಜಾರಿ ಪ್ರಾರ್ಥಿಸಿದರು. ಹೇಮಾ ಗೌಡ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕೇತರ ಸಿಬ್ಬಂದಿಯಾದ ನಮಿತಾ ಸುವರ್ಣ ಹಾಗೂ ಲಕ್ಷ್ಮಣ ಪೂಜಾರಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.




