ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬಯಿ ಇದರ 125ನೇ ಸಂಸ್ಥಾಪನಾ ದಿನಾಚರಣೆ ಹಾಗೂ 125ನೇ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭವು ದಿನಾಂಕ 09-08-2026, ಆದಿತ್ಯವಾರದಂದು ಮುಂಬಯಿಯ ಅಂಧೇರಿ ಪಶ್ಚಿಮದಲ್ಲಿರುವ ಎಂ.ವಿ.ಎಂ ಶೈಕ್ಷಣಿಕ ಸಂಕೀರ್ಣದ ಮೊಗವೀರ ಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಲಿದೆ.

ಅಂದು ಬೆಳಿಗ್ಗೆ 9:30ಕ್ಕೆ ಶ್ರೀ ಲಕ್ಷ್ಮೀನಾರಾಯಣ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, 10:30ಕ್ಕೆ ಮಂಡಳಿಯ ಧ್ವಜಾರೋಹಣ ನೆರವೇರಲಿದೆ. ತದನಂತರ ಬೆಳಿಗ್ಗೆ 11:00 ಗಂಟೆಗೆ ಕೃತಿ ಬಿಡುಗಡೆ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆಯಲಿವೆ.
ಈ ಶುಭ ಸಂದರ್ಭದಲ್ಲಿ “ಮುಂಬಯಿಯಲ್ಲಿ ಮೊಗವೀರ ಸಮುದಾಯ” ಎಂಬ ಸಂಶೋಧನಾ ಗ್ರಂಥ ಬಿಡುಗಡೆಗೊಳ್ಳಲಿದ್ದು, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾದ ಗಣೇಶ್ ಕೆ. ಕಾಂಚನ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಕೃತಿಕಾರರಾದ ಡಾ. ಜಿ. ಪಿ. ಕುಸುಮ ಅವರ ಗೌರವ ಉಪಸ್ಥಿತಿ ಇರಲಿದ್ದು, ಲೇಖಕ ಹಾಗೂ ಸಂಘಟಕರಾದ ಓಂದಾಸ್ ಕಣ್ಣಂಗಾರ್ ಅವರು ಕೃತಿ ಪರಿಚಯ ಮಾಡಿಕೊಡಲಿದ್ದಾರೆ.
ಇದೇ ವೇದಿಕೆಯಲ್ಲಿ “ಮೊಗವೀರ” ಸಾಹಿತ್ಯ ಪ್ರಶಸ್ತಿ 2026 ಅನ್ನು ಖ್ಯಾತ ತುಳು-ಕನ್ನಡ ಸಾಹಿತಿ ನಾರಾಯಣ ಎ. ಬಂಗೇರ ಅವರಿಗೆ ಪ್ರದಾನ ಮಾಡಲಾಗುವುದು. ಜೊತೆಗೆ ಬೈಕಂಪಾಡಿ ವಾಮನ್ ಆರ್. ಕೋಟ್ಯಾನ್ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ನೆರವೇರಲಿದೆ.
ಈ ಸಮಾರಂಭವನ್ನು ‘ಮೊಗವೀರ’ ಮಾಸಿಕದ ಸಂಪಾದಕರಾದ ಅಶೋಕ್ ಸುವರ್ಣ ನಡೆಸಿಕೊಡಲಿದ್ದು, ಉಪಾಧ್ಯಕ್ಷರಾದ ಬಿ.ಕೆ. ಪ್ರಕಾಶ್, ದಯಾವತಿ ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ದಿಲೀಪ್ಕುಮಾರ್ ಮುಲ್ಕಿ, ಗೌರವ ಕೋಶಾಧಿಕಾರಿ ದೇವರಾಜ್ ಎಚ್. ಕುಂದರ್, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಜ್ವಲ್ ಡಿ. ಸಾಲ್ಯಾನ್, ಮೊಗವೀರ ಮಾಸಿಕ ಸಮಿತಿಯ ಕಾರ್ಯಧ್ಯಕ್ಷ ರಾಜೇಶ್ ಪುತ್ರನ್, ಸಮಾಜ ಕಲ್ಯಾಣ ಸಮಿತಿಯ ಕಾರ್ಯಧ್ಯಕ್ಷ ಡಿ. ಬಿ. ಪುತ್ರನ್, ಮೊಗವೀರ ಮಾಸಿಕದ ಮ್ಯಾನೇಜರ್ ಪ್ರಮೋದ್ ಪುತ್ರನ್ ಹಾಗೂ ಸಾಂಸ್ಕೃತಿಕ , ಸಮಾಜ ಕಲ್ಯಾಣ, ಮೊಗವೀರ ಮಾಸಿಕದ ಕಾರ್ಯದರ್ಶಿ ಪ್ರೀತಿ ಎಚ್. ಶ್ರೀಯಾನ್ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸರ್ವರನ್ನೂ ಆದರದಿಂದ ಆಹ್ವಾನಿಸಿದ್ದಾರೆ.
ಸಮಾರಂಭದ ಮುಕ್ತಾಯದ ನಂತರ ಆಗಮಿಸಿದ ಎಲ್ಲಾ ಬಂಧುಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿದೆ.




